

ಕೊಕ್ಕಡ: ವಿದ್ಯಾರ್ಥಿಗಳು ಮೊಬೈಲ್ ಪಿಡುಗಿನಿಂದ ದೂರವಾಗಳು ಈ ಬೇಸಿಗೆ ಶಿಬಿರ ಉತ್ತಮವಾಗಿದೆ ಮಕ್ಕಳು ಇದರಲ್ಲಿ ಪಾಲ್ಗೊಂಡಾಗ ಅವರು ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ.
ಶಿಕ್ಷಣ ಹೊಂದಿದ್ದರೆ ಸಾಲದು ಶಿಕ್ಷಣದೊಂದಿಗೆ ಸಂಸ್ಕಾರವು ಅತಿ ಅವಶ್ಯಕ. ಶಾಲೆಯಲ್ಲಿ ಹೇಳಿಕೊಡಲಾಗದಂತಹ ಸಂಸ್ಕಾರವು ಇಂದು ಶಿಬಿರಗಳ ಮೂಲಕ ಮಕ್ಕಳಿಗೆ ತಿಳಿಸಿ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ಶ್ರೀರಾಮ ವಿದ್ಯಾ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯೆ ಹೇಮಾ ಶಿವಾನಂದ್ ನುಡಿದರು.
ಎ.12ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಐದರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇದರ ಸಹಾಯಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಮೂರನೇ ದಿನದ ಸಭಾ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ನ ಸದಸ್ಯೆ ಬಬಿತಾ ಕೊಲ್ಲಾಜೆ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಮಾತನಾಡಿ, ಶಿಬಿರದಿಂದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವುದಕ್ಕೆ ಸಾಧ್ಯ ಅಲ್ಲದೆ ಇಲ್ಲಿ ಸಂಸ್ಕಾರವನ್ನು ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಲಿ ಎಂದರು.
ಮೂರನೇ ದಿನ 143 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದ ಮೊದಲನೆಯ ಅವಧಿಯಲ್ಲಿ ಭಗವದ್ಗೀತೆ ಶ್ಲೋಕ ಅಭ್ಯಾಸ ಮತ್ತು ಯೋಗಾಭ್ಯಾಸವನ್ನು ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಉಜಿರೆ ಇಲ್ಲಿನ ಪ್ರಾಧ್ಯಾಪಕ ಉದಯ ಸುಬ್ರಹ್ಮಣ್ಯ ಮತ್ತು ತಂಡದವರು ನಡೆಸಿಕೊಟ್ಟರು. ಎರಡನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪುರಾಣ ಕಥೆಗಳು ಮತ್ತು ನೀತಿ ಕಥೆಗಳನ್ನು ಯಕ್ಷಗಾನ ಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆ, ಮೂರನೇ ಅವಧಿಯಲ್ಲಿ ಅಭಿನಯ ಗೀತೆಯನ್ನು ರಂಗಭೂಮಿ ಕಲಾವಿದ ಮಂಜು ಸುಳ್ಯ ತಿಳಿಸಿಕೊಟ್ಟರು.
ಸಂಜೆ ವಿದ್ಯಾರ್ಥಿಗಳಿಗೆ ದೇಶಿಯ ಆಟಗಳನ್ನು ಆಡಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭವ್ಯ ಪಿ.ಡಿ. ಸ್ವಾಗತಿಸಿದರು. ಶ್ವೇತಾ ಕುಮಾರಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ಏ. 14ರವರೆಗೆ ಶಿಬಿರ ನಡೆಯಲಿದೆ. ಚಿತ್ರ ವಂದಿಸಿದರು.