ಜಿ.ಪಿ.ಟಿ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ತಾಲೂಕು ಘಟಕ ಬೆಳ್ತಂಗಡಿ, ಇದರ ವಾರ್ಷಿಕ ಮಹಾಸಭೆ ಮಾ. 22ರಂದು ಬೆಳ್ತಂಗಡಿ ಸರಕಾರಿ ನೌಕರರ ಭವನದ ಏಕತಾ ಸೌಧದಲ್ಲಿ ನಡೆಯಿತು.

ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಯೋಗೇಶ ಹೆಚ್.ಆರ್. ಬೆಳ್ತಂಗಡಿ ತಾಲೂಕಿನ ಶಿಕ್ಷಕರು ಈ ಆರ್ಥಿಕ ವರ್ಷದಲ್ಲಿ ಪ್ರತಿ ಎರಡು- ಮೂರು ತಿಂಗಳಿಗೊಮ್ಮೆ ಸಕಾಲದಲ್ಲಿ ವೇತನ ಪಾವತಿಯಾಗದೆ ಸಂಕಷ್ಟ ಎದುರಿಸುತ್ತಿದ್ದು, ಸಕಾಲದಲ್ಲಿ ಶಿಕ್ಷಕರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ ಮಾತನಾಡಿ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಜಿಪಿಟಿ ಶಿಕ್ಷಕರು ದೀರ್ಘಕಾಲಿಕ ಕೊಡುಗೆ ನೀಡುವಂತಾಗಬೇಕು, ಇಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗುವಂತೆ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ 2023-24ನೇ ಸಾಲಿನಲ್ಲಿ ತಾಲೂಕಿಗೆ ನೇಮಕವಾದ ಜಿ.ಪಿ.ಟಿ ಶಿಕ್ಷಕರಿಗೆ ಗುರುತಿನ ಚೀಟಿ ವಿತರಣೆ ಮಾಡಿ ಮಾತನಾಡಿ ಜಿಪಿಟಿ ಶಿಕ್ಷಕರ ಸಂಘ ಸ್ಥಾಪನೆಯಾಗಿ ಅತ್ಯಲ್ಪ ಕಾಲದಲ್ಲಿಯೇ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘವಾಗಿ ಬೆಳೆದಿರುವುದನ್ನು ಶ್ಲಾಘಿಸಿದರು.

ಬೆಳ್ತಂಗಡಿ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಜಯರಾಜ್ ಜೈನ್, ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಜಪಿಟಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಬಿ.ಆರ್., ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದ ಸ್ಥಳದಲ್ಲೇ ಪಾಠೋಪಕರಣ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸ.ಉ.ಪ್ರಾ.ಶಾಲೆ ಕೊರಂಜ ಇಲ್ಲಿಯ ಜಿಪಿಟಿ ಶಿಕ್ಷಕ ಕೃಷ್ಣಪ್ರಸಾದ್ ಇವರನ್ನು ಸನ್ಮಾನಿಸಿ, ಮಾತನಾಡಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಕಾಣಬೇಕು, ಹಾಗೂ ಪ್ರತಿ ಮಗುವೂ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಗಳಿಸಿ ಪ್ರೌಢಶಾಲೆಗಳಿಗೆ ತೆರಳುವಂತೆ ಮಾಡುವಲ್ಲಿ ಎಲ್ಲಾ ಶಿಕ್ಷಕರೂ ಕಾಳಜಿ ವಹಿಸಬೇಕೆಂದು ತಿಳಿಸಿದರು. ಹಾಗೂ ಅನುದಾನ ಕೊರತೆಯಿಂದ ಉಂಟಾಗಿರುವ ವೇತನದ ಸಮಸ್ಯೆಗೆ ವಿಷಾದ ವ್ಯಕ್ತಪಡಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ್ ಹಿರೇಮಠ ಪ್ರಾರ್ಥಿಸಿ, ಸಂಘದ ಖಜಾಂಚಿ ಅಭಿಷೇಕ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರೆ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರಾಸ್ತಾವಿಕ ನುಡಿ ನುಡಿದರು. ಉಪಾಧ್ಯಕ್ಷೆ ಶುಭ ಕೆ. ಸನ್ಮಾನಿತರ ಪರಿಚಯ ಮಾಡಿಕೊಟ್ಟರೆ, ಕೊಯ್ಯೂರು ಕಸಬ ಶಾಲೆಯ ಶಿಕ್ಷಕಿ ದೇವಿಬಾಯಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಉಷಾ, ಮಧು ಇತರರು ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು. 107 ಮಂದಿ ಜಿ.ಪಿ.ಟಿ ಶಿಕ್ಷಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸಂಘಟನಾ ಕಾರ್ಯದರ್ಶಿ ಸತೀಶಾಚಾರ್ ವಂದಿಸಿದರು.

LEAVE A REPLY

Please enter your comment!
Please enter your name here