ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಕಳ್ಳತನ ಮಾಡಿದ್ದಾತ ಧರ್ಮಸ್ಥಳ ಪೊಲೀಸರ ಬಲೆಗೆ

0

ಬೆಳ್ತಂಗಡಿ: ತಾಲೂಕಿನ ಹಲವೆಡೆ ಕನ್ನ ಹಾಕಿ ಅದರಲ್ಲಿ ಸಿಕ್ಕಿದ ಹಣವನ್ನು ಜೂಜಾಟಕ್ಕೆ ಬಳಸುತ್ತಿದ್ದ ಸರಣಿ ಅಂತರ್ ರಾಜ್ಯ ಕಳ್ಳನೊಬ್ಬನನ್ನು ಆತ ಕದ್ದ ಸ್ಕೂಟರಿನಲ್ಲಿ ಹೋಗುತ್ತಿದ್ದಾಗಲೇ ಧರ್ಮಸ್ಥಳ ಪೊಲೀಸರು ಆಗಸ್ಟ್ 25ರಂದು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಆಗಸ್ಟ್ 9 ರಂದು ರಾತ್ರಿ 10 ಗಂಟೆಯಿಂದ ಆಗಸ್ಟ್ 10ರ ಬೆಳಿಗ್ಗೆ 6.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಪ್ರಸನ್ನ ಅರಿಗ ಎಂಬವರ ಪದ್ಮಾಂಬ ಪ್ರಾವಿಜನ್ ಸ್ಟೋರ್ ನ ಬೀಗವನ್ನು ರಾಡ್ ನಿಂದ ಮುರಿದು ಒಳಹೋಗಿ ಕ್ಯಾಶ್ ಕೌಂಟರ್ ನಲ್ಲಿದ್ದ ಐದು ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಸನ್ನ ಅರಿಗ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಧರ್ಮಸ್ಥಳ ಪೊಲೀಸ್ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ತಂಡ ಆಗಸ್ಟ್ 25ರಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳ್ಳತನ ಮಾಡಿಕೊಂಡು ಸ್ಕೂಟರ್ ವಾಹನದಲ್ಲಿ ಕಾರ್ಕಳ ಮನೆಗೆ ಹೋಗುತ್ತಿದ್ದಾಗ ಅಡ್ಡಹಾಕಿ ವಾಹನ ಪರಿಶೀಲನೆ ನಡೆಸಿದಾಗ ದಾಖಲೆಗಳಿಲ್ಲದೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಕೂಟರ್ ಕಳ್ಳತನ ಮಾಡಿ ಅದರಲ್ಲಿಯೇ ಹಲವು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ,ಅತ್ತೂರು ಗ್ರಾಮದ ದಿ.ಕೊರಗಪ್ಪ ಪೂಜಾರಿ ಮಗನಾದ ಸುರೇಶ ಕೆ. ಪೂಜಾರಿ(50) ಎಂಬಾತ ಆರೋಪಿಯಾಗಿದ್ದಾನೆ.ಈ ಆರೋಪಿಯು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ KA-21-U-9418 ನಂಬರಿನ ಸ್ಕೂಟಿಯೊಂದನ್ನು ಕಳ್ಳತನ ಮಾಡಿ ಸದ್ರಿ ಸ್ಕೂಟಿಯನ್ನು ಉಪಯೋಗಿಸಿಕೊಂಡು ಸುಮಾರು ಒಂದುವರೆ ತಿಂಗಳಿನಿಂದ ಧರ್ಮಸ್ಥಳ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ನೆರಿಯಾ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ, ವೇಣೂರು ಸೇರಿ ಸುಮಾರು 25 ಕ್ಕೂ ಹೆಚ್ಚು ಕಡೆಗಳಲ್ಲಿ ಸರಣಿ ಕಳವು ಮಾಡಿದ್ದು, ಈತನು ಮಟ್ಕಾ (ಓಸಿ) ಆಡುವ ಚಟವುಳ್ಳವನಾಗಿದ್ದು, ಕಳ್ಳತನ ಮಾಡಿದ ಹಣವನ್ನು ಮಟ್ಕಾ ಆಟಕ್ಕೆ ಕಟ್ಟಿ ಸೊತಿರುವುದಾಗಿ ತನಿಖೆ ವೇಳೆ ತನ್ನೊಪ್ಪಿಕೊಂಡಿರುತ್ತಾನೆ.

ಈತನು ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ ಠಾಣೆ, ಹಿರಿಯಡ್ಕ ಠಾಣೆ, ಪಡುಬಿದ್ರಿ ಠಾಣೆ, ಮುಲ್ಕಿ ಠಾಣೆ, ಹೆಬ್ರಿ ಠಾಣೆ, ಉಡುಪಿ ನಗರ ಠಾಣೆ, ದಾವಣಗೆರೆ ಗ್ರಾಮಾಂತರ ಠಾಣೆ, ಮತ್ತು ಬೆಳಗಾಂ ಮಾರ್ಕೆಟ್ ಪೊಲೀಸ್ ಠಾಣೆಗಳು ಸೇರಿ ಒಟ್ಟು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದು. ಕಳೆದ ಎರಡು ತಿಂಗಳು ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗೆ ಬಂದು ವಾಪಸ್ ಕಳ್ಳತನ ಮುಂದುವರೆಸಿಕೊಂಡಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.ಆರೋಪಿಯಿಂದ 20,220 ರೂಪಾಯಿ ನಗದು ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಉಪಯೋಗಿಸಿದ KA-21-U-9418 ನಂಬರಿನ ಸ್ಕೂಟಿ ವಾಹನ ಅಂದಾಜು ಮೌಲ್ಯ 25 ಸಾವಿರ ಅಗಿದ್ದು ಅದನ್ನು ವಶಪಡಿಸಿಕೊಂಡಿದ್ದು ವಶಪಡಿಸಿಕೊಂಡಿರುವ ಸೊತ್ತುಗಳು ಒಟ್ಟು ಅಂದಾಜು ಮೌಲ್ಯ 45 ಸಾವಿರ ಅಗಿದ್ದು. ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಆಗಸ್ಟ್ 26 ರಂದು (ಇಂದು) ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು)ಅನಿಲ್ ಕುಮಾರ್ ಡಿ, ಪಿ.ಎಸ್.ಐ (ತನಿಖೆ) ಸಮರ್ಥ ಗಾಣಿಗೇರ್ ಅಲ್ಲದೇ ಈ ಹಿಂದೆ ಪಿಎಸ್‌ಐ ಆಗಿದ್ದ (ತನಿಖೆ) ಲೋಲಾಕ್ಷ ಪಿ ರವರ ನೇತೃತ್ವದ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್ ತಂಡದ ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ಶೇಖರ್, ಸತೀಶ ನಾಯ್ಕ ಜಿ, ಶಶಿಧರ, ಮಂಜುನಾಥ,ಧರ್ಮಪಾಲ್, ಅಸ್ಲಾಂ, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ,ಅಭಿಜಿತ್ ಮೆಹಬೂಬ್, ನಾಗರಾಜ ಬುಡ್ರಿ, ದೀಪು, ಮಧು, ಹರೀಶ್, ಜಗದೀಶ್, ಚಾಲಕ ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here