
ಕೊಕ್ಕಡ: ಸ್ವಂದನ ಸ್ತ್ರೀ ಸಂಘಟನೆ, ಕುಟುಂಬ ಆಯೋಗ, ಸ್ತ್ರೀ ಆಯೋಗ ಮತ್ತು ದೈವ ಕರೆ ಆಯೋಗಗಳ ಸಂಯುಕ್ತ ಸಹಭಾಗಿತ್ವದಲ್ಲಿ ಕೊಕ್ಕಡ ಸೆಂಟ್ ಜಾನ್ ಬ್ಯಾಪ್ಟಿಸ್ತ್ ಚರ್ಚ್ನಲ್ಲಿ ಧರ್ಮಗುರುಗಳ ಪಾಲಕರ ದಿನ ಮತ್ತು ಹಿರಿಯ ನಾಗರಿಕರ ದಿನವನ್ನು ಆ.10ರಂದು ಧಾರ್ಮಿಕ ಉತ್ಸಾಹದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕೊಕ್ಕಡ ದೇವಾಲಯದ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿಸಿಲ್ವ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ನೊಯೆಲ್ ಮೆಂತೆರೋ, ಕಾರ್ಯದರ್ಶಿ ವೀಣಾ ಮಸ್ಕರೇನಸ್, ಆಯೋಗಗಳ ಸಂಯೋಜಕಿ ವಿನ್ನಿ ಫ್ರೆಡ್ ಡಿಸೋಜ, ಸ್ವಂದನ ಸ್ತ್ರೀ ಸಂಘಟನೆಯ ಅಧ್ಯಕ್ಷರು ಹಾಗೂ ವಿವಿಧ ಆಯೋಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಲ್ಮಾ ಸ್ಟ್ರೆಲ್ಲಾ ಅವರು ಹಿರಿಯ ನಾಗರಿಕರಿಗೆ ಆರೋಗ್ಯದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಧರ್ಮಗುರುಗಳ ಪಾಲಕರ ದಿನದ ಅಂಗವಾಗಿ ಚರ್ಚಿನ ಧರ್ಮಗುರುಗಳನ್ನು ಹಾಗೂ ಹಿರಿಯ ನಾಗರಿಕರ ದಿನದ ಪ್ರಯುಕ್ತ 40 ಮಂದಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಂದನ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಡಿಂಪಲ್ ಡಿಸೋಜ ಸ್ವಾಗತಿಸಿದರು. ಜೆನಿವಿವ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಪ್ಲೋರಿನ್ ರೇಗೊ ವಂದಿಸಿದರು.