ಬೆಳ್ತಂಗಡಿ: ಒಂದು ಮಳೆ ಬಂದರೆ ಸಾಕು. ನರಕಯಾತನೆ ಹೇಳತೀರದು. ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮಳೆಗಾಲದಲ್ಲಿ ಮಡಂತ್ಯಾರಿನ ಬಸವನಗುಡಿ, ಮದ್ದಡ್ಕ, ಕುವೆಟ್ಟು ಚಡಾವು, ಕಾಶಿಬೆಟ್ಟು, ಟಿ ಬಿ ಕ್ರಾಸ್, ಸೀಟ್ ಕಾಡ್, ಮುಂಡಾಜೆ, ಮುಂತಾದೆಡೆ ಪ್ರಯಾಣಿಕರು ಅನುಭವಿಸಿರುವ ಸಂಕಟ ಹೇಳಿದಷ್ಟು ಮುಗಿಯದು.
ಆದರೆ ಪುಣ್ಯವಷಾತ್ ಈ ಬಾರಿ ರಸ್ತೆ ಕಾಮಗಾರಿಗೆ ವೇಗ ಸಿಕ್ಕಿದೆ. ಮುಗೆರೋಡಿ ಕನ್ಸ್ಟ್ರಕ್ಷನ್ನವರು ಸಮಸ್ಯೆ ಇದ್ದ ಸ್ಥಳದಲ್ಲೇ ಕಾಮಗಾರಿ ಬೇಗ ಮುಗಿಸಿ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ವೇಗ ಪಡೆದ ಕಾಮಗಾರಿ: ಮಳೆಗಾಲ ಆರಂಭಕ್ಕೂ ಮೊದಲೇ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಕಾಮಗಾರಿಯ ವೇಗ ಕುಂಠಿತವಾಗಿತ್ತು. ಏಕಾಏಕಿ ಸುರಿದ ಮಳೆಯಿಂದಾಗಿ ಆದ ತೊಂದರೆಗಳಿಗೆ ಸ್ಪಂದಿಸುವುದೇ ಕಾಮಗಾರಿ ಏಜೆನ್ಸಿಯ ಕೆಲಸವಾಗಿತ್ತು. ಹಿಂದಿನ ಗುತ್ತಿಗೆದಾರರು ಅಲ್ಲಲ್ಲಿ ರಸ್ತೆ ಅಗೆದಿದ್ದರಿಂದ ಮಳೆಗಾಲದಲ್ಲಿ ನರಕಯಾತನೆಯಿತ್ತು. ಅವರು ಮಾಡಿದ ಕೆಲಸಕ್ಕೆ ಒಂದು ಸ್ವರೂಪ ಕಂಡುಕೊಳ್ಳುವುದೇ ಸವಾಲಾಗಿದ್ದರಿಂದ ಎಲ್ಲೆಲ್ಲಿ ಅಗೆದಿದ್ದಾರೋ ಅಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಕ್ಕೆ ನೆರವಾಗಿದ್ದಾರೆ. ಅದರಲ್ಲೂ ಹತ್ತು ದಿನಗಳ ಮಳೆಯ ನಂತರ ಈಗ ಮತ್ತೆ ಕೆಲಸ ವೇಗ ಪಡೆದುಕೊಂಡಿದೆ.
ಮಳೆಗಾಲಕ್ಕಾಗಿಯೇ ಡಾಮರೀಕರಣ, ಕಾಂಕ್ರೀಟಿಕರಣ: ರಸ್ತೆ ಕಾಮಗಾರಿ ಕಾರ್ಯ ನಡೆಯುತ್ತಿದ್ದು ಕೆಲವೆಡೆ ರಸ್ತೆ ಅಗೆಯಲಾಗಿತ್ತು. ಅಂತಹ ಕಡೆ ವುಳೆಯಿಂದಾಗಿ ತೊಂದರೆ ಅನುಭವಿಸುವ ಸಾಧ್ಯತೆಯಿರುವುದರಿಂದ ಅಲ್ಲೇ ಹೆಚ್ಚಿನ ಒತ್ತು ಕೊಟ್ಟು ತಾತ್ಕಾಲಿಕವಾಗಿ ವಾಹನಗಳ ಓಡಾಟಕ್ಕೆ ಕಾಂಕ್ರೀಟಿಕರಣ ಮತ್ತು ಡಾಮರೀಕರಣ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರ ತೊಂದರೆ ಕಡಿಮೆಯಾಗಬಹುದು.
ಕೆಲಸಗಳತ್ತ ಗುತ್ತಿಗೆದಾರರ ಒತ್ತು: ಹೆದ್ದಾರಿ ಬದಿ ಸಮರ್ಪಕ ಚರಂಡಿ ನಿರ್ಮಾಣ, ತೆರೆದ ಚರಂಡಿಗಳನ್ನು ಮುಚ್ಚುವ ಕಾರ್ಯ, ಸಂಪರ್ಕ ರಸ್ತೆಗಳಿರುವಲ್ಲಿ ಮೋರಿ ಅಳವಡಿಕೆ ಕಾರ್ಯಗಳಿಗೆ ಈಗ ಒತ್ತು ಕೊಡಲಾಗಿದೆ. ರಸ್ತೆಗೆ ಮಣ್ಣು ಕುಸಿಯುವ ಭೀತಿ ಇರುವಲ್ಲಿ ತಡೆಗೋಡೆ ರಚನೆಗೆ ಮುಂದಾಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಳೆನೀರು ರಸ್ತೆಯಲ್ಲಿ ಹರಿಯದಂತೆ ಎಚ್ಚರಿಕೆವಹಿಸಬೇಕಾಗಿದೆ. ಅಲ್ಲದೇ, ಕೆಲವೆಡೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಬಾಕಿಯಿದ್ದು ಅವುಗಳನ್ನು ಕೂಡಲೇ ತೆರವುಗೊಳಿಸಬೇಕಿದೆ.
ಅಗತ್ಯ ದಾಖಲೆ ನೀಡಿದರೆ ಪರಿಹಾರ: ನಗರ, ಗ್ರಾಮೀಣಕ್ಕೊಂದು ರೇಟ್: ಕೆಲವು ಅವಶ್ಯಕ ದಾಖಲೆಗಳನ್ನು ನಾವು ಸರ್ಕಾರಕ್ಕೆ ನೀಡಲೇಬೇಕಿದೆ. ಆರ್ಟಿಸಿ, ಮೂಲ ದಾಖಲೆಗಳು, ಕನ್ವರ್ಷನ್ ಆರ್ಡರ್, ಸ್ಕೆಚ್ ಇತ್ಯಾದಿಗಳನ್ನು ಸರ್ಕಾರ ಪರಿಶೀಲನೆ ಮಾಡುತ್ತದೆ. ಸಾಲಗಳು ಇದ್ದರೆ ಅದರ ಮಾಹಿತಿ ಇತ್ಯಾದಿ ದಾಖಲೆಗಳನ್ನು ನೀಡಬೇಕಿದೆ. ಎಲ್ಲಾ ದಾಖಲೆಗಳ ಜೊತೆ ಗೇಣಿರಹಿತ ಪ್ರಮಾಣ ಪತ್ರವನ್ನು ನೀಡಿದವರಿಗೆ ಪರಿಹಾರ ನೀಡುತ್ತಿದ್ದಾರೆ. ೨೦೨೪ರ ಹಿಂದಿನ ಮೂರು ವರ್ಷದಲ್ಲಿ ಆಯಾಯ ಗ್ರಾಮದಲ್ಲಿ ಆಗಿರುವ ಸೇಲ್ ಡೀಡ್ನ ಕ್ರಯವನ್ನು ಪರಿಗಣನೆಗೆ ತೆಗೆದುಕೊಂಡು ಗ್ರಾಮಾಂತರ ಪ್ರದೇಶದಲ್ಲಿ ನಾಲ್ಕು ಪಟ್ಟು ಮತ್ತು ಬೆಳ್ತಂಗಡಿ ನಗರ ಪ್ರದೇಶದಲ್ಲಿ ಮೂರು ಪಟ್ಟು ಪರಿಹಾರ ಮೊತ್ತ ನೀಡಲಾಗುತ್ತದೆ. ಉದಾಹರಣೆಗೆ ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಕ್ರಯ ೫೦,೦೦೦ ಇದ್ದರೆ ೨ಲಕ್ಷವಾಗಿ, ನಗರ ಭಾಗದಲ್ಲಿ ಸೆನ್ಸ್ ಗೆ ೩ ಲಕ್ಷವಿದ್ದರೆ ೯ ಲಕ್ಷ ಮೊತ್ತ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. ಕೃಷಿ ಭೂಮಿಯ ಬೆಳೆ, ಕಟ್ಟಡ ಮೌಲ್ಯ, ಕಾಂಪೌಂಡ್, ಬೇಲಿ ಇತ್ಯಾದಿಗಳನ್ನು ಕೂಡ ಲೆಕ್ಕ ಹಾಕಲಾಗುತ್ತದೆ. ಭೂ ಪರಿವರ್ತನೆ ಮಾಡಲಾಗದೇ ಇದ್ದರೆ ಅವುಗಳ ಮೌಲ್ಯವನ್ನು ಕೃಷಿ ಭೂಮಿಯೆಂದೇ ಪರಿಗಣಿಸಲಾಗಲಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು
ಶೈಲೇಶ್ ಠೋಸರ್ ವಕೀಲರು,ಬೆಳ್ತಂಗಡಿ
೨೦ ಕೋಟಿ ರೂ. ಪರಿಹಾರ -ಹರ್ಷವರ್ಧನ್ ಎಸ್.ಜೆ: “ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಚಾರ್ಮಾಡಿ ಕಾಮಗಾರಿಯಲ್ಲಿ ೬೬೦ ಜನರು ಭೂಮಾಲಿಕರು ಇದ್ದಾರೆ. ಇವರಲ್ಲಿ ಈಗಾಗ್ಲೇ ನಮಗೆ ೨೨೦ ಜನರು ದಾಖಲೆಪತ್ರಗಳನ್ನು ನೀಡಿದ್ದಾರೆ. ಅವುಗಳ ಪೈಕಿ ೭೮ ಭೂ ಮಾಲಿಕರಿಗೆ ರೂ ೨೦ ಕೋಟಿ ಪರಿಹಾರ ಮೊತ್ತ ಸಂದಾಯವಾಗಿದೆ. ಉಳಿದಂತೆ ೫೪ ಭೂ ಮಾಲಿಕರಿಗೆ ರೂ. ೧೭.೫ ಕೋಟಿ ಇನ್ನೊಂದು ವಾರದೊಳಗೆ ಸಂದಾಯವಾಗಲಿದೆ. ಉಳಿದ ಭೂ ಮಾಲಿಕರ ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನೂ ಕೂಡ ಬಹುತೇಕ ಭೂ ಮಾಲಿಕರು ನಮಗೆ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸಿಲ್ಲ. ಅವರಿಗೆ ನಾವು ನೋಟೀಸ್ ನೀಡಿzವೆ. ಅವರ ದಾಖಲೆ ಪತ್ರಗಳನ್ನು ನಾವು ಕೇಂದ್ರ ಸರ್ಕಾರದ ಭೂಮಿರಾಶಿ ಪೋರ್ಟಲ್ಗೆ ಅಪ್ಲೋಡ್ ಮಾಡುತ್ತೇವೆ. ಅಗತ್ಯ ದಾಖಲೆಗಳನ್ನು ನೀಡದೇ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಅಗತ್ಯ ಕ್ರಮ ಜರುಗಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ” ಹಷವರ್ಧನ್ ಎಸ್.ಜೆ, ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ