ಉಜಿರೆ: ಉಜಿರೆ ಬಹುಮುಖಿ ಕೃಷಿ ಸಾಧಕ, ನಿವೃತ್ತ ಗ್ರಾಮ ಕರಣಿಕ, ವಾಣಿಜ್ಯೋದ್ಯಮಿ, ಅರಿಪ್ಪಾಡಿ ಮಠದ ಬಾಲಕೃಷ್ಣ ಅರಿಪ್ಪಾಡಿತ್ತಾಯ (83 ) ಅವರು ಫೆ. 20ರಂದು ಬೆಳಿಗ್ಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಅವರು ಪತ್ನಿ ನಾಗರತ್ನ, ಪುತ್ರರಾದ ಶ್ರೀನಿವಾಸ ಅರಿಪ್ಪಾಡಿತ್ತಾಯ, ಶ್ರೀಪತಿ ಅರಿಪ್ಪಾಡಿತ್ತಾಯ, ಶ್ರೀದೇವಿರವರನ್ನು ಅಗಲಿದ್ದಾರೆ. ಅತ್ಯಂತ ಸರಳ,ಸೌಜನ್ಯ,ಸ್ನೇಹಪರ ವ್ಯಕ್ತಿತ್ವ, ಚುರುಕುತನ, ಛಲ, ಸಾಧನೆಗೆ ಹೆಸರಾಗಿದ್ದ ಅವರು ಅರಿಪ್ಪಾಡಿ ಮಠದ ಉತ್ತರಾಧಿಕಾರಿಯಾಗ,ಬೆಳಾಲು, ಮುಂಡಾಜೆ ಮತ್ತು ನಿಡ್ಲೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಿಂದ ಶುದ್ಧಹಸ್ತದ ಗ್ರಾಮ ಕರಣಿಕರೆಂಬ ಹೆಸರಿಗೆ ಪಾತ್ರರಾಗಿದ್ದರು.
ಧೀಮಂತ ವ್ಯಕ್ತಿತ್ವದ ಅವರು ಮಠದ ಅಭಿವೃದ್ಧಿ, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನೂತನ ಗುಡಿ ಕಟ್ಟಿಸಿ ಪ್ರತಿಷ್ಠೆ, ಪ್ರತಿವರ್ಷ ಚಂಡಿಕಾ ಹವನ, ಅನಂತಚತುರ್ದಶಿ, ನವರಾತ್ರಿ ಪೂಜೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದರು. ಉತ್ತಮ ಕೃಷಿಕರಾಗಿ, ಅರಿಪ್ಪಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ, ಕಲಾವೇದಿಕೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಒದಗಿಸಿದ್ದಲ್ಲದೆ ಕೊಡುಗೈ ದಾನಿಯಾಗಿ ದೇವಸ್ಥಾನ ಹಾಗು ಶಾಲೆಗಳಿಗೆ ಕೊಡುಗೆಯನ್ನು ನೀಡಿದ್ದಾರೆ.