
ಬೆಳ್ತಂಗಡಿ: ಪತ್ನಿ ಮತ್ತು ಮಾವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿ ಜೀವ ಬೆದರಿಕೆ ಒಡ್ಡಿದ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ೨೦೨೪ರ ಜುಲೈ ೧ರಂದು ದೇಶಾದ್ಯಂತ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಜಾರಿಯಾದ ನಂತರ ಹೊಸ ಕಾಯಿದೆಯಡಿ ಆರೋಪಿಗೆ ಶಿಕ್ಷೆ ವಿಧಿಸಿದ ಪ್ರಕರಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೊದಲನೆಯದಾಗಿದೆ. ಈ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಐತಿಹಾಸಿಕ ತೀರ್ಪು ನೀಡಿದ್ದು ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ವಾದಿಸಿದ್ದರು.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಹಕೀಂ ಎಂಬಾತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದಲ್ಲಿರುವ ತನ್ನ ಪತ್ನಿ ಮನೆಯಲ್ಲಿ 2024ರ ಜುಲೈ 26ರಂದು ಮಧ್ಯಾಹ್ನ 1.30ರ ವೇಳೆಗೆ ಮಗುವಿಗೆ ಊಟ ಕೊಡುತ್ತಿದ್ದ ತನ್ನ ಪತ್ನಿಗೆ ಚೂರಿಯಿಂದ ಇರಿದಿದ್ದ. ಇರಿತದ ಪರಿಣಾಮ ಮಹಿಳೆಯ ಎರಡು ಕೈಯ ಬೆರಳುಗಳಿಗೆ ತೀವ್ರ ಸ್ವರೂಪದ ಗಾಯವಾಗಿತ್ತಲ್ಲದೆ ಬಲ ಭುಜದ ಹಿಂಬದಿ ಗೀರಿದ ಗಾಯ ಮತ್ತು ಬಲ ಕಾಲಿನ ತೊಡೆಯಲ್ಲಿ ರಕ್ತದ ಗಾಯ ಉಂಟು ಮಾಡಿದ್ದ.
ಇದನ್ನು ತಡೆಯಲು ಬಂದ ಹಕೀಂ ತನ್ನ ಪತ್ನಿಯ ತಂದೆ ಮೊಹಮ್ಮದ್ (72 ವ) ಅವರ ಬಲ ಕೈಗೆ ಇರಿದು ಗಾಯ ಉಂಟು ಮಾಡಿದ್ದ. ಅಲ್ಲದೆ ಪತ್ನಿ ಮತ್ತು ಮಾವನಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಹಕೀಂ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 85, 118(1),118(2),351(2)ರಡಿ ಪ್ರಕರಣ ದಾಖಲಾಗಿತ್ತು. ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ಸುಧಾಕರ್ ಅವರು ಭಾಗಶಃ ತನಿಖೆ ಮಾಡಿದ ನಂತರ ಉಪನಿರೀಕ್ಷಕ ಅವಿನಾಶ್ ಹೆಚ್. ಅವರು ಸಂಪೂರ್ಣ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ಹಕೀಂ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ೮೫ ಬಿ.ಎನ್.ಎಸ್. ಅಡಿಯ ಅಪರಾಧಕ್ಕಾಗಿ ಆತನಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ವಿಧಿಸಲಾಗಿದ್ದು ಕಲಂ 118(1)ರ ಅಪರಾಧಕ್ಕಾಗಿ ೧ ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, 118(2)ರ ಅಪರಾಧಕ್ಕಾಗಿ ೨ ವರ್ಷ ಶಿಕ್ಷೆ, ೧೦ ಸಾವಿರ ರೂ ದಂಡ. ತಪ್ಪಿದ್ದಲ್ಲಿ 1 ವರ್ಷ ಜೈಲು ಶಿಕ್ಷೆ, 351(2)ರ ಅಪರಾಧಕ್ಕಾಗಿ 1 ವರ್ಷ ಸಾದಾ ಶಿಕ್ಷೆ ಮತ್ತು ೫ ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.
ಒಟ್ಟು ೩೫ ಸಾವಿರ ರೂ ದಂಡದ ಪೈಕಿ ೨೫ ಸಾವಿರ ರೂಪಾಯಿಯನ್ನು ಹಕೀಂ ತನ್ನ ಪತ್ನಿಗೆ ನೀಡಬೇಕು ಮತ್ತು ಉಳಿದ ೧೦ ಸಾವಿರ ರೂ ದಂಡವನ್ನು ಹಕೀಂ ತನ್ನ ಪತ್ನಿಯ ತಂದೆಗೆ ನೀಡಬೇಕೆಂದು ಆದೇಶ ಮಾಡಲಾಗಿದೆ.
ಹೊಸ ಬಿ.ಎನ್.ಎಸ್. ಕಾಯಿದೆ ೨೦೨೪ರ ಜುಲೈ1ರಂದು ಜಾರಿಗೆ ಬಂದ ನಂತರ ಹೊಸ ಕಾಯಿದೆಯಡಿ ಶಿಕ್ಷೆಗೆ ಒಳಪಟ್ಟ ಉಭಯ ಜಿಲ್ಲೆಗಳಲ್ಲಿ ಪ್ರಥಮ ಪ್ರಕರಣ ಇದಾಗಿದೆ. ಆರೋಪಿ ವಿರುದ್ಧ ದೋಷಾರೋಪಣೆ ದಾಖಲೆಯಾದ ಕೇವಲ 26 ದಿನಗಳಲ್ಲಿ ಸಾಕ್ಷಿ ವಿಚಾರಣೆ ಮುಗಿಸಿ ಅಂತಿಮ ತೀರ್ಪು ನೀಡಲಾಗಿದೆ.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಮನು ಬಿ.ಕೆ. ಅವರು ಈ ಐತಿಹಾಸಿಕ ಶಿಕ್ಷೆ ಘೋಷಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪತ್ತೂರು ವಾದ ಮಂಡಿಸಿದ್ದರು.
ಹೊಸ ಕಾನೂನಿನಿಂದ ನೊಂದವರಿಗೆ ನ್ಯಾಯ: ಎಪಿಪಿ 26-07-2024ರಂದು ಮಹಮ್ಮದ್ ಎಂಬವರ ಮಗಳಿಗೆ ಆಕೆಯ ಗಂಡ ಮಾಲಾಡಿ ಮೂಲದ ಹಕೀಂ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿರುತ್ತಾನೆ. ಹೆಂಡತಿ ಮತ್ತು ಮಾವನಿಗೆ ಹಲ್ಲೆ ನಡೆಸಿರುವ ಕುರಿತು ಜುಲೈ ೧ರಿಂದ ಜಾರಿಗೆ ಬಂದಿರುವ ಬಿಎನ್ಎಸ್ ಕಾನೂನಿನಡಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಯಿತು. ಆರೋಪಿಯ ಮೇಲೆ ನ್ಯಾಯಾಲಯದಲ್ಲಿ 11-11-2024ರಂದು ದೋಷಾರೋಪಣೆ ಸಲ್ಲಿಸಲಾಗಿತ್ತು. ಇದಾದ ಕೇವಲ 26 ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆದು, 06-12-2024ರಂದು ಹಿರಿಯ ನ್ಯಾಯಾದೀಶ ಮನು ಬಿ.ಕೆರವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಹೀಗೆ ಪ್ರಕರಣವನ್ನು ಶೀಘ್ರವಾಗಿ ಮುಗಿಸಿರುವುದರಿಂದ ಸಮಾಜಕ್ಕೊಂದು ಉತ್ತಮ ಸಂದೇಶ ಹೋಗುತ್ತದೆ. ಬಿಎನ್ಎಸ್ ಮತ್ತು ನಾಗರಿಕ ಸುರಕ್ಷಾ ಕಾಯ್ದೆ ನೊಂದವರಿಗೆ ವೇಗವಾಗಿ ನ್ಯಾಯ ಸಿಗುವಂತಾಗುತ್ತಿದೆ ಎಂದು ಎಪಿಪಿ ದಿವ್ಯರಾಜ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.