ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಮರ್ಡರ್ ಕೇಸ್ – ಎನ್‌ಐಎ ಕಾರ್ಯಾಚರಣೆ: ಪಡಂಗಡಿಯ ನೌಷದ್ ಮನೆಗೆ ದಾಳಿ

0

ಬೆಳ್ತಂಗಡಿ:2022ರ ಜುಲೈ ೨೬ರಂದು ರಾತ್ರಿ 8.30ರ ವೇಳೆಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಕರ್ನಾಟಕ ಮತ್ತು ತಮಿಳುನಾಡಿನ ಸಹಿತ ವಿವಿಧ ಕಡೆಗಳಲ್ಲಿ ದ.೫ರಂದು ನಸುಕಿನ ವೇಳೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳು, ಶಂಕಿತರು ಹಾಗೂ ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳಿ ಡಿಜಿಟಲ್ ಉಪಕರಣಗಳು ಸೇರಿದಂತೆ ವಿವಿಧ ದಾಖಲೆ ಜಪ್ತಿ ಮಾಡಿದ್ದಾರೆ. ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿದ್ದ ಎನ್‌ಐಎ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ತಪಾಸಣೆ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ೧೬ ಕಡೆಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೈಯಲ್ಲಿ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಆರೋಪಿಗಳ ಆತ್ಮೀಯರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿರುವ ಎನ್‌ಐಎ ಅಧಿಕಾರಿಗಳು ಯಾರನ್ನೂ ವಶಕ್ಕೆ ಪಡೆದಿಲ್ಲ.

ಪಡಂಗಡಿಯಲ್ಲಿ ನೌಷದ್ ಮನೆಗೆ ದಾಳಿ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆಮರೆಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ಹಮೀದ್ ಅವರ ಪುತ್ರ ನೌಷದ್ (27ವ) ಎಂಬಾತನ ಮನೆಗೆ ಬೆಂಗಳೂರಿನಿಂದ ಬಂದ ಐದು ಜನರ ಎನ್.ಐ.ಎ. ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಅಧಿಕಾರಿಗಳು ಭೇಟಿ ನೀಡುವ ಮಾಹಿತಿ ಅರಿತು ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ತಲೆ ಮರೆಸಿಕೊಂಡಿದ್ದ ನೌಷದ್ ತಾಯಿ ದುಲೇಖ ಮತ್ತು ತಂಗಿ ತಶ್ರೀಫ್ ಅವರನ್ನು ಕರೆತಂದು ಸುಮಾರು 6 ಗಂಟೆ ವೇಳೆಗೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಧಿಕಾರಿಗಳು ನೌಷದ್ ಮನೆಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಎನ್.ಐ.ಎ.ಯ ಡಿ.ವೈ.ಎಸ್ಪಿ ವಿಘ್ನೇಶ್, ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ನೌಷದ್ ತಾಯಿ ದುಲೇಖ ಹಾಗೂ ತಂಗಿ ತಶ್ರೀಫ್‌ರವರನ್ನು ಪೊಯ್ಯೆಗುಡ್ಡೆಯಲ್ಲಿರುವ ನೌಷದ್ ಮನೆಗೆ ವಾಪಾಸ್ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಸರ್ಪಗಾವಲಿನಲ್ಲಿ ವಿಚಾರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ತಲೆ ಮರೆಸಿಕೊಂಡಿರುವ ನೌಷದ್ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ನೌಷದ್ ಪತ್ತೆಗಾಗಿ ಎನ್.ಐ.ಎ. ಈಗಾಗಲೇ ೨ ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದು ಆತನ ಪತ್ತೆಗಾಗಿ ಹಲವೆಡೆ ಹಲವು ಸಮಯಗಳಿಂದ ಶೋಧ ನಡೆಸುತ್ತಿದೆ. ನೌಷದ್ ಮನೆಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಬೆಳ್ತಂಗಡಿ ಠಾಣಾ ಪೊಲೀಸರು ಸಾಥ್ ನೀಡಿದ್ದರು.

ಏಳು ಆರೋಪಿಗಳಿಗೆ ಶೋಧ: ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಇದುವರೆಗೆ ೧೯ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳೂ ಸೇರಿದಂತೆ ಒಟ್ಟು ೨೩ ಮಂದಿ ವಿರುದ್ಧ ಈಗಾಗಲೇ ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ತಲೆಮರೆಸಿಕೊಂಡಿರುವ ೭ ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ. ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.
ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ರಾತ್ರಿ ೮.೩೦ರ ವೇಳೆಗೆ ಬಿಜೆಪಿ ಯುವಮೋರ್ಛಾ, ಯುವವಾಹಿನಿ ಸಹಿತ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್ ನೆಟ್ಟಾರು ಅವರನ್ನು ಅವರದೇ ಮಾಲಕತ್ವದ ಅಕ್ಷಯ ಚಿಕಿನ್ ಸೆಂಟರ್ ಎದುರು ಬರ್ಬರವಾಗಿ ಕಡಿದು ಹತ್ಯೆ ನಡೆಸಿದ ಕುರಿತು ಆರಂಭದಲ್ಲಿ ಬೆಳ್ಳಾರೆ ಠಾಣಾ ಪೊಲೀಸರು ಕೊಲೆ ಪ್ರಕರಣ (63/2022)ದಾಖಲಿಸಿಕೊಂಡಿದ್ದರು. ಆ ಬಳಿಕ ವ್ಯಾಪಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಲಾಗಿತ್ತು. ಬಳಿಕ ಎನ್‌ಐಎಯವರು ೨೦೨೨ರ ಆಗಸ್ಟ್ ೪ರಂದು ಯುಎ(ಪಿ) ಮತ್ತು ಐಪಿಸಿಯಡಿ ಮರು ಪ್ರಕರಣ ದಾಖಲಿಸಿಕೊಂಡಿದ್ದರು. 2022ರ ಆಗಸ್ಟ್ ೪ರಂದು ಎನ್‌ಐಎ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಠಿಸುವ ಉzಶದಿಂದ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಪ್ರವೀಣ್ ಅವರನ್ನು ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು. ನಂತರ ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಿತ್ತು. ಆರೋಪಿಗಳಾದ ಮುಸ್ತಫಾ ಪೈಚಾರ್ ಹಾಗೂ ಎಚ್.ವೈ.ರಿಯಾಜ್ ವಿರುದ್ಧ ಎನ್‌ಐಎ ಕಳೆದ ಆಗಸ್ಟ್ ೪ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ೨೪೦ ಸಾಕ್ಷಿಗಳ ಹೇಳಿಕೆ ಸೇರಿದಂತೆ1,500ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಜನರಲ್ಲಿ ಭಯ ಹುಟ್ಟಿಸುವ ಉzಶದಿಂದ ಪ್ರವೀಣ್ ನೆಟ್ಟಾರು ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನೇರ ಆರೋಪಿಗಳಾದ ಶಿಯಾಬ್ ನಾವೂರು, ಬಶೀರ್ ಎಲಿಮಲೆ, ರಿಯಾಜ್ ಅಂಕತಡ್ಕ, ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಮಹಮ್ಮದ್ ಮುಸ್ತಫ ಪೈಚಾರು, ತುಫೈಲ್ ಮಡಿಕೇರಿ ಮತ್ತು ಕೊಲೆಗೆ ನೆರವು ನೀಡಿದ ಆರೋಪಿಗಳಾದ ಶಫೀಕ್ ಬೆಳ್ಳಾರೆ, ಝಕೀರ್ ಸವಣೂರು, ಹಾರಿಸ್ ಪಳ್ಳಿಮಜಲು, ನೌಫಲ್ ಗೌರಿಹೊಳೆ, ಆಬಿದ್ ನಾವೂರು, ಜಟ್ಟಿಪಳ್ಳದ ಅಬ್ದುಲ್ ಕಬೀರ್, ಶಾಫಿ ಬೆಳ್ಳಾರೆ, ಇಕ್ಸಾಲ್ ಬೆಳ್ಳಾರೆ, ಇಬ್ರಾಹಿಂ ಷಾ, ಸದ್ದಾಂ ಪಳ್ಳಿಮಜಲು, ಶಾಹಿದ್ ಬೆಳ್ಳಾರೆ, ಜಾಬಿರ್ ಅರಿಯಡ್ಕ ಹಾಗೂ ಮನ್ಸೂರ್ ಪಾಷಾರವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿದ್ದಿಕ್ ಬೆಳ್ಳಾರೆ, ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಶ್ರಫ್ ಕೊಡಾಜೆ, ಅಬ್ದುಲ್ ನಾಸಿರ್ ಸೋಮವಾರಪೇಟೆ, ಅಬ್ದುಲ್ ರಹಿಮಾನ್ ಸೋಮವಾರಪೇಟೆ ಹಾಗೂ ನೌಶಾದ್ ಪಡಂಗಡಿ ಬೆಳ್ತಂಗಡಿ ಎಂಬವರನ್ನು ಬಂಧನಕ್ಕಾಗಿ ಹುಡುಕಲಾಗುತ್ತಿದೆ.

ಉಪ್ಪಿನಂಗಡಿಯಲ್ಲಿ ಮನೆ ತಪಾಸಣೆ: ಪ್ರವೀಣ್ ನೆಟ್ಟಾರ್ ಹತ್ಯೆ ಸಹಿತ ಗಂಭೀರ ಪ್ರಕರಣದಲ್ಲಿ ಭಾಗಿಗಳಾಗಿ ತಲೆಮರೆಸಿಕೊಂಡಿರುವ ಉಪ್ಪಿನಂಗಡಿ ಸಮೀಪದ ೩೪ನೇ ನೆಕ್ಕಿಲಾಡಿ ನಿವಾಸಿ ಮಸೂದ್ ಅಗ್ನಾಡಿ ಹಾಗೂ ಉಪ್ಪಿನಂಗಡಿ ಗ್ರಾಮದ ಮಠದ ಹಿರ್ತಡ್ಕ ಬಳಿಯ ನಿವಾಸಿ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಎಂಬಿಬ್ಬರನ್ನು ಪತ್ತೆ ಹಚ್ಚಲು ಎನ್‌ಐಎ ತಂಡ ಗುರುವಾರ ನಸುಕಿನಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿತ್ತು. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಘೋಷಿತ ಆರೋಪಿ ಮಸೂದ್ ಅಗ್ನಾಡಿಯ ಇರುವಿಕೆಯನ್ನು ಅಂದಾಜಿಸಿ ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿನ ಆತನ ಅಣ್ಣನ ಮನೆಗೆ ಆಗಮಿಸಿದ ಅಧಿಕಾರಿಗಳ ತಂಡ ಮಸೂದ್ ಅಗ್ನಾಡಿ ಈ ವಿಳಾಸದಲ್ಲಿ ಇರುವ ಬಗ್ಗೆ ವಿಚಾರಣೆ ನಡೆಸಿತ್ತು. ಆ ವೇಳೆ ಇದು ಮಸೂದ್ ಮನೆಯಲ್ಲ. ಆತನ ಅಣ್ಣನ ಮನೆ ಎಂದೂ ಆತನ ಮನೆ ನೆಕ್ಕಿಲಾಡಿ ಗ್ರಾಮದಲ್ಲಿರುವುದಾಗಿ ತಿಳಿಸಿದ ಬಳಿಕ ೭ ಮಂದಿಯನ್ನು ಒಳಗೊಂಡ ಎನ್‌ಐಎ ತಂಡ ನಿರ್ಗಮಿಸಿದೆ. ಇನ್ನೊಂದೆಡೆ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಕೊಪ್ಪಳ ಎಂಬಾತನನ್ನು ನಿರೀಕ್ಷಿಸಿ ಮಠದ ಹಿರ್ತಡ್ಕ ಬಳಿಯಲ್ಲಿರುವ ಆತನ ಮನೆಗೆ ಉಪ್ಪಿನಂಗಡಿ ಪೊಲೀಸರ ಸಹಾಯದಿಂದ ತಪಾಸಣೆ ನಡೆಸಿದ ಎನ್‌ಐಎ ತಂಡಕ್ಕೆ ಶಂಕಿತ ಆರೋಪಿಯು ಲಭಿಸದೆ ಇದ್ದ ಕಾರಣ ಅಲ್ಲಿಂದಲೂ ನಿರ್ಗಮಿಸಿದೆ.
ಮಸೂದ್ ಅಗ್ನಾಡಿಯ ಪತ್ತೆಗಾಗಿ ಎನ್‌ಐಎ ಈಗಾಗಲೇ ಹಲವು ಬಾರಿ ಕಾರ್ಯಾಚರಣೆ ನಡೆಸಿದ್ದು ನೆಕ್ಕಿಲಾಡಿಯಲ್ಲಿರುವ ಆತನ ಮನೆಯನ್ನು ಜಪ್ತಿ ಮಾಡುವ ಸಲುವಾಗಿ ಎರಡು ಬಾರಿ ನೊಟೀಸು ಜಾರಿ ಮಾಡಿತ್ತು. ಮಾತ್ರವಲ್ಲದೆ ಸಾರ್ವಜನಿಕ ಭಿತ್ತಿ ಪತ್ರದ ಮೂಲಕ ಪ್ರಕಟಣೆ ಹೊರಡಿಸಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿತ್ತು.

ಕೆಯ್ಯೂರಿನಲ್ಲೂ ತನಿಖೆ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾದ ಅಬೂಬಕ್ಕರ್ ಸಿದ್ದಿಕ್‌ರವರ ಪತ್ನಿ ವಾಸವಾಗಿರುವ ಪುತ್ತೂರು ತಾಲೂಕಿನ ಕೆಯ್ಯೂರಿನ ಮನೆಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ ಘಟನೆ ದ.೫ರಂದು ಬೆಳಿಗ್ಗೆ ನಡೆದಿದೆ. ಕೆಯ್ಯೂರು ಕೆಪಿಎಸ್ ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್‌ರವರ ಪತ್ನಿ ವಾಸವಾಗಿದ್ದಾರೆ ಎನ್ನಲಾಗಿದ್ದು ಅಲ್ಲಿಗೆ ತೆರಳಿದ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಇದಲ್ಲದೆ ಸಿದ್ದಿಕ್‌ರವರ ಸಹೋದರನೋರ್ವ ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸವಾಗಿದ್ದು ಅಲ್ಲಿಗೂ ಆಗಮಿಸಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಪೊಲೀಸರಿಂದ ಅಮಾಯಕ ಯುವಕನ ಮೇಲೆ ದೌರ್ಜನ್ಯ-ಆರೋಪ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆಗಮಿಸಿದ ಎನ್‌ಐಎ ತಂಡ ಹಾಗೂ ಅವರೊಂದಿಗಿದ್ದ ಸ್ಥಳೀಯ ಪೊಲೀಸರು ಪ್ರಕರಣಕ್ಕೆ ಸಂಬಂಧವೇ ಇಲ್ಲದ ಅಮಾಯಕ ಯುವಕನೋರ್ವನನ್ನು ವಶಕ್ಕೆ ಪಡೆದು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷಾದ್ ಎಂಬಾತನ ಮನೆಗೆ ಎನ್‌ಐಎ ತಂಡ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಮೂವರು ಪೊಲೀಸರು ಬಂದಿದ್ದರು. ಈ ಸಂದರ್ಭ ನೌಷಾದ್ ಮನೆಯಲ್ಲಿರಲಿಲ್ಲ. ಆತ ಮದ್ದಡ್ಡದ ಯಾವುದೋ ಸಂಬಂಧಿಕರ ಮನೆಗೆ ತೆರಳಿದ್ದ ಎಂಬ ಶಂಕೆಯ ಮೇರೆಗೆ ಮದ್ದಡ್ಡಕ್ಕೆ ತೆರಳಿದ್ದ ಅಧಿಕಾರಿಗಳ ತಂಡ ಅಲ್ಲಿ ಸುಹೈಲ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನೌಷಾದ್ ಬಗ್ಗೆ ಮಾಹಿತಿ ನೀಡುವಂತೆ ಸುಹೈಲ್‌ಗೆ ಎನ್‌ಐಎ ತಂಡ ಮತ್ತು ಅವರೊಂದಿಗೆ ಇದ್ದ ಬೆಳ್ತಂಗಡಿ ಠಾಣೆಯ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ತುಳಿದು ಗನ್‌ನಿಂದ ಗುದ್ದಿ ಅಧಿಕಾರಿಗಳು ಗಾಯಗೊಳಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸುಹೈಲ್ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಮನೆಗೆ ಬಂದ ಎನ್‌ಐಎ ತಂಡದಲ್ಲಿ ಸ್ಥಳೀಯ ಪೊಲೀಸರೂ ಇದ್ದರು. ಬಂದವರು ಯಾರಿಗೆ ಕರೆ ಮಾಡಿದ್ದಿಯಾ ಎಂದು ಪ್ರಶ್ನಿಸಿ ನನ್ನ ಮೊಬೈಲ್ ತೆಗೆದುಕೊಡು ಪರಿಶೀಲಿಸಿದ್ದಾರೆ. ಪತ್ನಿಯ ಮೊಬೈಲನ್ನೂ ಪರಿಶೀಲಿಸಿದ್ದಾರೆ. ಬಳಿಕ ನೌಷಾದ್ ಎಲ್ಲಿ ಎಂದು ಪ್ರಶ್ನಿಸಿ ವಾಹನಕ್ಕೆ ಹತ್ತಿಸಿದ್ದಾರೆ. ನೌಷಾದ್‌ನ ಸಂಬಂಧಿಕರ ಮನೆ ತೋರಿಸಲು ನನ್ನನ್ನು ಕರೆದುಕೊಂಡು ಹೋಗಿದ್ದು ಈ ವೇಳೆ ಆತನ ಮನೆಗೆ ಹೋಗುವ ದಾರಿ ತಪ್ಪಿದೆ. ಈ ಸಂದರ್ಭ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಗನ್‌ನಿಂದ, ಕೈಯಿಂದ ಹೊಡೆದಿದ್ದಾರೆ. ಕಾಲಿನಿಂದ ಮರ್ಮಾಂಗಕ್ಕೆ ತುಳಿದಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ಕೊನೆಗೆ ನೌಷಾದ್‌ನ ತಾಯಿ ಹಾಗೂ ಪತ್ನಿ ಬಂದ ಬಳಿಕ ತನ್ನನ್ನು ಬಿಟ್ಟಿದ್ದಾರೆ. ಹಲ್ಲೆಗೊಳಗಾದ ನನಗೆ ಇದೀಗ ಎದ್ದು ನಿಲ್ಲಲೂ ಸಾಧ್ಯವಾಗುತ್ತಿಲ್ಲ. ಮೂತ್ರ ಮಾಡಲು ಆಗುತ್ತಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ನನಗೆ ಅನ್ಯಾಯವಾಗಿ ಹೊಡೆದಿದ್ದಾರೆ ಎಂದು ಸುಹೈಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ರಕ್ಷಿತ್ ಶಿವರಾಂ ಮನವಿ-ಕ್ರಮ ಕೈಗೊಳ್ಳಲು ದಿನೇಶ್ ಗುಂಡೂರಾವ್ ಎಸ್‌ಪಿಗೆ ಸೂಚನೆ: ತನಿಖೆಯ ನೆಪದಲ್ಲಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.
ಪ್ರಕರಣವೊಂದರ ತನಿಖೆಗೆ ಎನ್‌ಐಎ ಅಧಿಕಾರಿಗಳ ತಂಡ ಡಿ.೫ರಂದು ಬೆಳ್ತಂಗಡಿಯ ಆರೋಪಿ ಮನೆಗೆ ಬೆಳ್ತಂಗಡಿ ಪೊಲೀಸರೊಂದಿಗೆ ದಾಳಿ ನಡೆಸಿತ್ತು. ಈ ವೇಳೆ ಆರೋಪಿಯ ಸಂಬಂಧಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಬೆಳ್ತಂಗಡಿ ತಾಲ್ಲೂಕಿನ ಸೋಣಂದೂರಿನ ಸಬರಬೈಲು ನಿವಾಸಿ ಸುಹೈಲ್ ಷಾ ಎಂಬವರ ಮನೆಗೆ ತೆರಳಿದ ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸರು ಏಕಾಏಕಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಪತ್ನಿಯ ಎದುರಲ್ಲೇ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಬೂಟು ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಪಿಸ್ತೂಲು ತೋರಿಸಿ ಬೆದರಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಆರೋಪಿಸಿದ್ದವು. ಪ್ರಕರಣದಲ್ಲಿ ಭಾಗಿಯಾಗದ, ಸಾಕ್ಷ್ಯಾಧಾರ ಇಲ್ಲದ ಅಮಾಯಕ ಯುವಕನ ಮೇಲೆ ಎನ್‌ಐಎ ಅಧಿಕಾರಿಗಳೊಂದಿಗೆ ಸೇರಿ ಬೆಳ್ತಂಗಡಿ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡನೀಯ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here