ಧರ್ಮಸ್ಥಳ ಶ್ರೀ ಧ.ಮಂ.ಆಂ.ಮಾ.ಶಾಲೆಯಲ್ಲಿ ಸಂಭ್ರಮದ ಪ್ರತಿಭಾ ದಿನಾಚರಣೆ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅದ್ದೂರಿಯಾಗಿ ಪ್ರತಿಭಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.ವಿದ್ಯಾರ್ಥಿಗಳು ವಿವಿಧ ಬಣ್ಣದ ದಿರಿಸಿನೊಂದಿಗೆ ಸಂಭ್ರಮದಿಂದ ಓಡಾಡಿಕೊಂಡಿದ್ದರು.ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯ ಒಂದು ಭಾಗವಾಗಿ ಹಾಗೂ ಪ್ರತಿಭೆಗಳನ್ನು ಹೊರಹೊಮ್ಮಲು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಸಲುವಾಗಿ ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಆಗಿರುವ ಅನಿಲ್ ಕುಮಾರ್ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ತದನಂತರ ಮಾತನಾಡಿದ ಅವರು ಶಾಲೆಯ ಸಾಧನೆ ಹಾಗೂ ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿ ಶುಭ ಹಾರೈಸಿದರು.

ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿರುವ ತಾರಕೇಸರಿ ಆಗಮಿಸಿ ಶಾಲೆಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾಗಿರುವ ಹರ್ಷೇಂದ್ರ ಕುಮಾರ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಇದರ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಸುಪ್ರಿಯಾ ಹರ್ಷೇಂದ್ರ ಕುಮಾರ್ ಆಗಮಿಸಿದ್ದರು.ಇವರು ಶಾಲಾ ಹಸ್ತಪ್ರತಿ ಪತ್ರಿಕೆಯಾದ ಟ್ಯಾಲೆಂಟ್ ಹಾಗೂ ಕನಸು ಇವುಗಳನ್ನು ಅನಾವರಣಗೊಳಿಸಿದರು.

SSLC ಡಿಸ್ಟಿಂಕ್ಷನ್ ಪಡೆದವರು, ವಿಶೇಷ ಸಾಧನೆ ಮಾಡಿದವರನ್ನು, ತರಗತಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ, ರಾಜ್ಯಮಟ್ಟ ಜಿಲ್ಲಾ ಮಟ್ಟ ಇತ್ಯಾದಿಗಳಲ್ಲಿ ಸಾಧನೆ ಮಾಡಿದವರಿಗೆ ಹೀಗೆ ಅನೇಕ ವಿದ್ಯಾರ್ಥಿಗಳನ್ನು ಅಂದು ಗುರುತಿಸಲಾಯಿತು.ಆ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಲಾಯಿತು.

ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ತೆಯ್ಯಮ್ ಡ್ಯಾನ್ಸ್ ಕಥಕ್ ಫ್ಯೂಷನ್ ನೃತ್ಯ ಯೋಗ ನೃತ್ಯ ಹೀಗೆ ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು.ಈ ಬಾರಿ ಶಾಲೆ ಎಂದರೆ ಜ್ಞಾನದೇಗುಲ ಎಂಬ ವಿಷಯದ ಕುರಿತು ನೃತ್ಯ ಪ್ರದರ್ಶನವನ್ನು ನೀಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಬಿ.ಸೋಮಶೇಖರ್ ಶೆಟ್ಟಿ, ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ಧರ್ಮಸ್ಥಳ ಉಗ್ರಾಣದ ನಿವೃತ್ತ ಕಾರ್ಯನಿರ್ವಹಣಾಧಿಕಾರಿಯಾಗಿರುವ ಭುಜಬಲಿ ಜೈನ್, ಗ್ರಾಮ ಪಂಚಾಯತ್ ಧರ್ಮಸ್ಥಳದ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸಿ ಆರ್ ಪಿ ಆಗಿರುವ ಪ್ರತಿಮಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು, ಧರ್ಮಸ್ಥಳ ಅನ್ನ ಛತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಬ್ರಮಣ್ಯ ಪ್ರಸಾದ್, ಶ್ರೀಯುತ ಶಶಿಕಾಂತ್ ಜೈನ್ ಹೀಗೆ ಅನೇಕ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು.

ಶಾಲೆಯ ಕಿರುಪರಿಚಯವನ್ನು ಶಾಲೆಯ ನಾಯಕ ಜಸ್ಟೀನ್ ನೀಡಿದರು.ವಿದ್ಯಾರ್ಥಿಗಳ ನೃತ್ಯ ಸಂಯೋಜನೆಯನ್ನು ಶಾಲಾ ಶಿಕ್ಷಕ ವೃಂದ ಸಂಪೂರ್ಣ ಮುತುವರ್ಜಿಯಿಂದ ತಾವೇ ಮಾಡಿದರು.ವಿದ್ಯಾರ್ಥಿಗಳ ನೃತ್ಯಕ್ಕೆ ಮತ್ತಷ್ಟು ಮೆರುಗು ತಂದಿದ್ದು ಹೊಳ್ಳ ಆರ್ಟ್ಸ್ ಹಾಗೂ ಮಾತಾ ಆರ್ಟ್ಸ್ ನವರು ಮಾಡಿದ ಮುಖ ವರ್ಣಿಕೆ.ತಮ್ಮ ಮಕ್ಕಳ ಸಾಧನೆ ಹಾಗೂ ಪ್ರತಿಭಾ ಪ್ರದರ್ಶನವನ್ನು ಕಂಡು ಹೆತ್ತವರು ಸಂಭ್ರಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here