ಚಾರ್ಮಾಡಿ: ಬೆಳ್ತಂಗಡಿ ಅರಣ್ಯ ಇಲಾಖೆ ಸಹಯೋಗದಲ್ಲಿ ರೈನಾಥಾನ್ ತಂಡದಿಂದ ವನಮಹೋತ್ಸವ ಹಾಗೂ ಬಿತ್ತೋತ್ಸವ ಕಾರ್ಯಕ್ರಮ

0

ಚಾರ್ಮಾಡಿ: ಬೆಳ್ತಂಗಡಿ ಅರಣ್ಯ ಇಲಾಖೆ ಸಹಕಾರದಲ್ಲಿ ಬೆಂಗಳೂರಿನ ರೈನಥಾನ್ ತಂಡದ ವತಿಯಿಂದ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ, ಚಾರ್ಮಾಡಿ ಮತ್ತು ಬಾಂಜಾರು ಮಲೆ ಅರಣ್ಯ ಪ್ರದೇಶದಲ್ಲಿ ಬಿತ್ತೋತ್ಸವ ಕಾರ್ಯಕ್ರಮ ಜೂ.24 ರಂದು ನಡೆಯಿತು.

ಬೆಳ್ತಂಗಡಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಬಾರಿ ಮಳೆಗಾಲ ಇನ್ನೂ ಸರಿಯಾಗಿ ಕಾಲಿಡದ ಕಾರಣ ಗಿಡಗಳನ್ನು ನೆಡಲು ಸಮಸ್ಯೆಯಾಗಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಗಿಡಗಳ ನಾಟಿಗೆ ಆಶಾದಾಯಕ ವಾತಾವರಣ ನಿರ್ಮಿಸಿದೆ.ಕಾಲಕಾಲಕ್ಕೆ ಬೇಕಾದ ವಾತಾವರಣದಲ್ಲಿ ಏರುಪೇರು ಉಂಟಾದರೆ ಪ್ರಕೃತಿಯ ಸಮತೋಲನ ತಪ್ಪಿ ಜೀವಸಂಕುಲ ತೊಂದರೆ ಅನುಭವಿಸುವಂತಾಗುತ್ತದೆ.ಈ ಬಾರಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಗಿಡಗಳನ್ನು ನಾಟಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್ ಡಿ ಎಂ ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಎಸ್.ಎನ್.ಕಾಕತ್ಕರ್ ಮಾತನಾಡಿ ಪ್ರಕೃತಿಯ ರಕ್ಷಣೆಗೆ ಮಾನವನ ಕೊಡುಗೆ ಅಗತ್ಯವಾಗಿದೆ. ಅರಣ್ಯ ಇಲಾಖೆಯೊಂದಿಗೆ ಜನಸಾಮಾನ್ಯರಿಗೂ ಪ್ರಕೃತಿಯ ರಕ್ಷಣೆ ಮಾಡುವ ಜವಾಬ್ದಾರಿ ಇದೆ. ಐಷಾರಾಮಿ ಜೀವನಕ್ಕೆ ಪ್ರಕೃತಿಯನ್ನು ಬಲಿ ಕೊಡದೆ ಪ್ರಕೃತಿಯಿಂದ ನಮಗೆ ಸಿಗುವ ಕೊಡುಗೆಗಳ ಕುರಿತು ಯೋಚಿಸಿ ಅದರ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.ಉಪವಲಯ ಅರಣ್ಯ ಅಧಿಕಾರಿಗಳಾದ ರವೀಂದ್ರ ಅಂಕಲಗಿ, ಹರಿಪ್ರಸಾದ್, ಗಸ್ತು ಅರಣ್ಯ ಸಿಬ್ಬಂದಿ ಪಾಂಡುರಂಗ ಕಮತಿ, ಬಾಲಕೃಷ್ಣ ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಲಕ್ಷ್ಮಣ್, ಪರಮೇಶ್ವರ್, ವಿಜಯಕುಮಾರ್, ಮತ್ತೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ, ಮುಂಡಾಜೆ ಗ್ರಾಪಂ ಸದಸ್ಯ ಜಗದೀಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ರೈನಥಾನ್ ಪ್ರಧಾನ ಆಯೋಜಕ ಕಿಶೋರ್ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ರಶ್ಮಿ ಗೋಖಲೆ ವಂದಿಸಿದರು.

LEAVE A REPLY

Please enter your comment!
Please enter your name here