ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಸಾಮಾಜಿಕ ಅಭಿವೃದ್ಧಿ, ಸುಸ್ಥಿರತೆಗೆ ಸಂಶೋಧನೆ ಪೂರಕವಾಗಿರಲಿ: ಡಾ.ಎ.ಜಯಕುಮಾರ್ ಶೆಟ್ಟಿ

0

ಉಜಿರೆ: ಸಂಶೋಧನೆಯೆಂಬುವುದು ವೈಜ್ಞಾನಿಕವಾಗಿ, ಸಾಮಾಜಿಕ ಅಭಿವೃದ್ಧಿ ಮತ್ತು ಸುಸ್ಥಿರತೆಗೆ ಪೂರಕವಾಗಿ ಇರುವುದು ಅಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ. ಜಯಕುಮಾರ್ ಶೆಟ್ಟಿ ಹೇಳಿದರು.


ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಶೋಧನಾ ವಿನ್ಯಾಸ: ಲೇಖನ ಬರವಣಿಗೆ ಮತ್ತು ಪ್ರಕಟಣೆ- ಭವಿಷ್ಯದ ಹಾದಿ’ ಎಂಬ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಂಶೋಧನೆಯೆಂಬುದು ಉನ್ನತ ಶಿಕ್ಷಣ ಹಂತದ ಒಂದು ಪ್ರಮುಖ ಅಂಶ. ಇದು ಒಂದು ಹೊಸ ವಿಷಯದ ಉಗಮಕ್ಕೆ ಕಾರಣವಾಗುತ್ತದೆ. ಕಲಿಕೆಗೆ ಕೊನೆಯೆಂಬುದು ಇಲ್ಲ. ಅದು ನಿರಂತರ ಪ್ರಕ್ರಿಯೆ. ಒಬ್ಬ ವ್ಯಕ್ತಿಗೆ ಯಾವುದೇ ಕಟ್ಟುಪಾಡುಗಳಿಲ್ಲದೆ ಅಭಿಪ್ರಾಯಗಳನ್ನು ಮತ್ತು ಸತ್ಯಗಳನ್ನು ವ್ಯಕ್ತಪಡಿಸಲು ಸಂಶೋಧನೆಯು ಅನುವು ಮಾಡಿಕೊಡುತ್ತದೆ. ಸಮಾಜದಲ್ಲಿರುವ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಶೋಧನೆಗಳ ಪಾತ್ರ ದೊಡ್ಡದು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಗುಣ ಹೊಂದಿರಬೇಕು. ಮಾನವ ವಿಕಾಸ ಹೊಂದಿದಂತೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡನು. ಒಂದು ಉತ್ತಮ ಸಂಶೋಧನಾ ಮನಃಸ್ಥಿತಿ ಉಂಟಾಗಲು ಪ್ರಶ್ನೆಯ ಪಾತ್ರವೂ ಬಹಳಷ್ಟಿದೆ. ಪ್ರಶ್ನೆಗಳು ಹೊಸ ಚಿಂತನೆಗೆ ಪೂರಕವಾಗಿ, ಅಗೋಚರವಾದ ಹೊಸ ವಿಷಯಗಳ ಹುಡುಕುವಿಗೆ ಹಾದಿಯಾಗಿ, ಅಂತಿಮವಾಗಿ ಒಂದು ಉತ್ತಮ ಸಂಶೋಧನಾ ಪ್ರಬಂಧ ಮೂಡಿ ಬರಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಅನಿತಾ ರವಿಶಂಕರ್ ಮಾತನಾಡಿದರು. ಸಂಶೋಧನೆಗಳಲ್ಲಿ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ನೋಡಬೇಕು. ಒಂದು ಉತ್ತಮವಾದ ಸಂಶೋಧನೆ ಮೂಡಿಬರಲು ಓದುವಿಕೆಯ ಪಾತ್ರ ಬಹಳ ಮಹತ್ತರ. ಸಂಶೋಧನೆಗೆ ನಿರಂತರ ಪ್ರಕ್ರಿಯೆ ಮತ್ತು ಪ್ರಾಮಾಣಿಕ ಬದ್ಧತೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
“ಇಂದಿನ ಹೆಚ್ಚಿನ ವಿದ್ಯಾರ್ಥಿಗಳು ಕೈಗೊಳ್ಳುವ ಸಂಶೋಧನೆಗಳಲ್ಲಿ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಹೆಚ್ಚಿನ ಸಂಶೋಧನಾ ಪ್ರಬಂಧಗಳಲ್ಲಿ ಕೃತಿಚೌರ್ಯದ ಪ್ರಮಾಣ ಹೆಚ್ಚಾಗಿ ವ್ಯಾಪಿಸುತ್ತಿದೆ. ಇಂದು ಹೆಚ್ಚಿನ ವಿದ್ಯಾಸಂಸ್ಥೆಗಳು ಸಂಶೋಧನೆಗೆ ಕಡಿಮೆ ಒತ್ತು ನೀಡುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ನಿಜಕ್ಕೂ ಕಳವಳಕಾರಿ ಸಂಗತಿ” ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ನವೀಕೃತವಾಗಿರಲು ಸಂಶೋಧನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ. ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು ಸಾಮಾಜಿಕ ಸುಸ್ಥಿರತೆ ಮತ್ತು ಅಭಿವೃದ್ಧಿಗೆ ಪೂರಕವಾಗಿದ್ದಾಗ ಅದು ಉತ್ತಮ ಸಂಶೋಧನಾ ಕೃತಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ., ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here