ಹಿಂದೂ-ಮುಸ್ಲಿಮರ ಮಧ್ಯೆ ಮಾತುಕತೆಯ ಕೊರತೆ: ರಾಜೇಶ್ ಪದ್ಮಾರ್: ಹಿಂದುತ್ವ ಪುಸ್ತಕ ಬಿಡುಗಡೆಗೊಳಿಸಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ್ ಮಾತು

0

ಬೆಳ್ತಂಗಡಿ: ಹಿಂದು ಮತ್ತು ಮುಸ್ಲಿಂ ಧರ್ಮೀಯರ ಮಧ್ಯೆ ಪರಸ್ಪರ ಮಾತುಕತೆಯ ಕೊರತೆಯಿದೆ. ನಾವು ಮಾತನಾಡುವುದಿಲ್ಲ. ಬದಲಿಗೆ, ನಾವು ದ್ವೇಷಿಸುವುದರಲ್ಲಿ ತೊಡಗಿzವೆ. ಇದು ಸಮಸ್ಯೆ, ಕಂದಕಗಳನ್ನು ಸೃಷ್ಟಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಥನ ಪುತ್ತೂರು ವತಿಯಿಂದ ಏರ್ಪಡಿಸಲಾಗಿದ್ದ “ಹಿಂದುತ್ವ : ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ” ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಮುಸ್ಲಿಂ ಧರ್ಮೀಯರೊಂದಿಗೆ ಮಾತನಾಡುವಾಗ ನಮ್ಮತನ ಕಳೆದುಕೊಳ್ಳುವುದಲ್ಲ. ಬದಲಿಗೆ, ಹಿಂದು ಧರ್ಮಕ್ಕೆ ತೊಂದರೆಯಾಗದಂತೆ ನೋಡಿಕೊಂಡು ವ್ಯವಹರಿಸಬೇಕು. ಈ ದೇಶದ ಪ್ರತಿಯೊಬ್ಬರೂ ಹಿಂದೂಗಳೇ. ಇದು ಆರ್‌ಎಸ್‌ಎಸ್ ನಂಬಿಕೆ. ಭಾರತ ಹಿಂದೂರಾಷ್ಟ್ರ. ಯಾವುದೇ ಪುಟ್ಟ ಪುಟ್ಟ ಮತಗಳು, ಧರ್ಮೀಯರು ಇಲ್ಲಿದ್ದರೂ, ಇದು ಹಿಂದೂರಾಷ್ಟ್ರವೇ. ಭಾರತದ ಮುಸ್ಲಿಮರಿಗೂ, ವಿದೇಶಗಳ ಮುಸ್ಲಿಮರಿಗೂ ವ್ಯತ್ಯಾಸವಿದೆ ಎಂದು ವಿವರಿಸಿದ ಪದ್ಮಾರ್, ಮುಂದಿನ ೪೦ ವರ್ಷಗಳಲ್ಲಿ ಜಗತ್ತಿನ ೬ ಮಂದಿಯಲ್ಲಿ ಓರ್ವ ಆಫ್ರಿಕನ್ ಆಗಿರುತ್ತಾನೆ. ನಾವು ಜಗತ್ತಿನ ೨೦% ಜನಸಂಖ್ಯೆ ಹೊಂದಿzವೆ, ಮುಂದೆ ಆಫ್ರಿಕನ್ ಜನಸಂಖ್ಯೆಯೂ ಜಾಸ್ತಿಯಾಗಲಿದೆ. ಈ ಆಫ್ರಿಕನ್ ಜನಸಂಖ್ಯೆ ಮತ್ಯಾವುದೂ ಅಲ್ಲ ಮುಸ್ಲಿಂ ಜನಸಂಖ್ಯೆಯೇ ಎಂದು ತಿಳಿಸಿದರು.

ಆಫ್ರಿಕನ್ ದೇಶಗಳ ಜನರು ಅತ್ಯಧಿಕ ಪ್ರಮಾಣದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಅವರು ಅಮೆರಿಕ, ಯೂರೋಪ್ ಕಡೆ ವಲಸೆ ಹೋಗುತ್ತಿದ್ದಾರೆ. ಆದರೆ, ಭಾರತದಲ್ಲಿರುವ ಮುಸಲ್ಮಾನರು ವಲಸೆ ಬಂದವರಲ್ಲ. ಅವರು ಭಾರತೀಯರೇ ಮತ್ತು ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದರು. ಭಾರತದ ಮೇಲೆ ಆಕ್ರಮಣ ಮಾಡಿದ್ದ ಮುಸ್ಲಿಂ ದೊರೆಗಳು ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡಿದ್ದಲ್ಲದೆ, ಮಹಿಳೆಯರನ್ನು ಮುಸಲ್ಮಾನರಿಗೆ ಮದುವೆ ಮಾಡಿಸುತ್ತಿದ್ದರು. ಹೀಗಾಗಿ, ಒಂದೊಮ್ಮೆ ಇವರೆಲ್ಲರೂ ಹಿಂದುಗಳೇ ಆಗಿದ್ದರು ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ೩೭೦ ವರ್ಷಗಳ ಹಿಂದೆ ಮುಸಲ್ಮಾನರೇ ಇರಲಿಲ್ಲ. ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಹಿರಿಯ ರಾಜಕಾರಣಿ ಗುಲಾಂ ನಬೀ ಆಜಾದ್ ಅವರೇ ಇದನ್ನು ಸಂಸತ್ತಿನಲ್ಲಿ ಹೇಳಿದ್ದರು. ಕಾಶ್ಮೀರ ಶಾರದೆಯ ಪೀಠ. ಅಲ್ಲಿನ ಪಂಡಿತರನ್ನು ಓಡಿಸಿದರು. ಪಹಲ್ಗಾಮ್ ದಾಳಿ ಮಾದರಿಯಲ್ಲೇ ಹಿಂದುಗಳನ್ನು ಕೊಂದರು. ಇದರಿಂದ ಭಯಭೀತಗೊಂಡ ಹಿಂದುಗಳು ಇಸ್ಲಾಂಗೆ ಮತಾಂತರಗೊಂಡರು. ಕೆಲವರು ಸ್ವಯಂಪ್ರೇರಣೆಯ ಇಸ್ಲಾಂ ಹಾದಿ ತುಳಿದರು. ಕಾಶ್ಮೀರದಲ್ಲಿ ಡೋಗ್ರಿ ಭಾಷೆ ಚಾಲ್ತಿಯಲ್ಲಿತ್ತು. ಆದರೆ, ಈಗ ಉರ್ದು ರಾಜ್ಯದ ಅಧಿಕೃತ ಭಾಷೆಯಾಗಿದೆ ಎಂದರು.

ಕೇರಳದಲ್ಲಿ ೧೯೬೦-೭೦ರಲ್ಲಿ ಟೇಪ್‌ರೆಕಾರ್ಡ್‌ನಲ್ಲಿ ಅಯ್ಯಪ್ಪನ ಭಕ್ತಿ ಗೀತೆಗಳನ್ನು ಕೇಳುತ್ತಿದ್ದೆವು. ಅದರ ಮ್ಯೂಸಿಕ್ ಕಂಪೋಸ್ ಮಾಡಿದ್ದವರು ಆರ್‌ಕೆ ಶೇಖರ್ ಎಂಬವರು. ಬಹಳ ದೊಡ್ಡ ಕೃಷ್ಣಭಕ್ತರಾಗಿದ್ದ ಆರ್‌ಕೆ ಶೇಖರ್ ನಿಧನದ ನಂತರ ಅವರ ಪತ್ನಿ ಇಸ್ಲಾಂಗೆ ಮತಾಂತರಗೊಂಡರು. ಅವರು ಪುತ್ರ ದಿಲೀಪ್‌ನನ್ನು ಕರೆದುಕೊಂಡು ಚೆನ್ನೈಗೆ ಹೋಗಿ ಅಲ್ಲಿ ಮಗನ ಹೆಸರನ್ನು ಎ.ಆರ್. ರೆಹಮಾನ್ ಎಂದು ಬದಲಾಯಿಸಿದರು. ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರೂ ಕೃಷ್ಣ, ರಾಮ, ಅಯ್ಯಪ್ಪ ಹೇಳುವುದನ್ನು ನಿಲ್ಲಿಸಿದ್ದರು. ರೆಹಮಾನ್ ಅವರಿಗೆ ಹೆಣ್ಣುಮಗಳೊಬ್ಬರಿದ್ದಾರೆ. ಹೆಸರು ಖದೀಜಾ ರೆಹಮಾನ್. ಅವರೂ ಒಳ್ಳೆಯ ಗಾಯಕಿ. ನಾನು ಕೃಷ್ಣನ ಹಾಡು, ಗೀತೆಗಳನ್ನು ಎಂದಿಗೂ ಹೇಳಲಾರೆ ಎಂದು ಬಹಿರಂಗವಾಗಿ ಘೋಷಿಸಿದರು. ಖದೀಜಾ ಅವರ ಅಜ್ಜ ಆರ್‌ಕೆ ಶೇಖರ್ ಕೃಷ್ಣಭಕ್ತ. ಆದರೆ, ಮೊಮ್ಮಗಳು ಮಾತ್ರ ಹಿಂದೂ ವಿರೋಧಿ ಮುಸ್ಲಿಂ ಎಂದು ಗುರುತಿಸಿಕೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಸಮಾನ ಇತಿಹಾಸದ ಪ್ರಜ್ಞೆ ಮತ್ತು ಸಮಾನ ಪೂರ್ವಜರ ಪ್ರಜ್ಞೆ ಎಂಬ ೨ ವಿಷಯಗಳನ್ನು ಮುಸ್ಲಿಮರಿಗೆ ತಿಳಿಸಬೇಕಿದೆ. ಅಂದರೆ, ನಮ್ಮ ಪೂರ್ವಜರು ಮತ್ತು ನಮ್ಮ ಇತಿಹಾಸ ಒಂದೇ ಎಂಬುದನ್ನು ಮನದಟ್ಟು ಮಾಡಬೇಕಿದೆ. ಭಾರತದ ಪೂರ್ಣ ಇತಿಹಾಸ ಹಿಂದು-ಮುಸ್ಲಿಂ ಇಬ್ಬರಿಗೂ ಸೇರಿದ್ದಾದ್ದರಿಂದ ನಾವೆಲ್ಲರೂ ಈ ವಿಷಯಗಳನ್ನು ಭಾರತೀಯ ಮುಸಲ್ಮಾನರಿಗೆ ಮನದಟ್ಟಾಗುವಂತೆ, ವಿಶ್ವಾಸಕ್ಕೆ ತೆಗೆದುಕೊಂಡು ಹೇಳಬೇಕು ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ವಿವೇಕಾನಂದ ಪಿಯು ಕಾಲೇಜಿನ ಅಧ್ಯಕ್ಷ ರವೀಂದ್ರ ಪುತ್ತೂರು, ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರ ಪ್ರಮುಖ್ ಚರಣ್ ಅರಿಯಡ್ಕ, ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಕುಮಾರ್ ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲಿ ವಿವಿಧ ವ್ಯಕ್ತಿಗಳ ಭೇಟಿ: ಜೂನ್ ೭ರಂದು ಧರ್ಮಸ್ಥಳ, ಉಜಿರೆ ಪರಿಸರದ ಕೆಲ ಆಯ್ದ ವ್ಯಕ್ತಿಗಳನ್ನು ಭೇಟಿ ಮಾಡಿದ ರಾಜೇಶ್ ಪದ್ಮಾರ್ ಅವರು, ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್ ಕುಮಾರ್, ಧರ್ಮಸ್ಥಳ ತಾಳೆಗರಿ ಸಂಗ್ರಹಾಲಯದ ಮೇಲ್ವಿಚಾರಕ ವಿಭಾಗದ ಡಾ. ವಿಘ್ನರಾಜ್, ಉಪನ್ಯಾಸಕರಾದ ಶೈಲೇಶ್ ಕುಮಾರ್ ಮತ್ತು ರಾಜಶೇಖರ್ ಹಳೆಮನೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸುದ್ದಿ ಸಮೂಹ ಸಂಸ್ಥೆಗಳ ಪಿಆರ್‌ಒ ರಾಘವ ಶರ್ಮ ನಿಡ್ಲೆ ಅವರ ನಿವಾಸಕ್ಕೆ ತೆರಳಿ, ಪ್ರಚಲಿತ ವಿದ್ಯಮಾನಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ಅವರನ್ನು ಪುತ್ತೂರಿನಲ್ಲಿ ಭೇಟಿಯಾದರು. ಪುತ್ತೂರು ಜಿಲ್ಲಾ ಸಹ ಪ್ರಚಾರ ಪ್ರಮುಖ್ ಗಣೇಶ್ ಕೊಕ್ಕಡ, ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಕುಮಾರ್ ಜತೆಗಿದ್ದರು.

LEAVE A REPLY

Please enter your comment!
Please enter your name here