ಶ್ರೀರಾಮ ಸೊಸೈಟಿಯಿಂದ ಗ್ರಾಹಕರಿಗೆ ಪಂಗನಾಮ ಪ್ರಕರಣ: ಆಸ್ತಿ ಜಪ್ತಿಗೆ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಆದೇಶ

0

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಕಳೆದ ೨೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ನಡೆಸಿ, ಗ್ರಾಹಕರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ, ನಿರ್ದೇಶಕರು ಸೇರಿದಂತೆ ಕೆಲ ಸಿಬ್ಬಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಈ ಮೂಲಕ ಶ್ರೀರಾಮ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣದ ಅವ್ಯವಹಾರ ನಡೆದಿರುವುದು ನಿಜವೆಂದು ದೃಢಪಟ್ಟಿದೆ.

ಅವ್ಯವಹಾರಗಳ ಲೆಕ್ಕ: ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೩-೨೪ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಕಲಂ ೬೩ರಡಿ ಬೆಂಗಳೂರಿನ ತುಕಾರಾಮ್ ಎಂಬವರು ಮಾಡಿ, ವರದಿಯನ್ನು ಸಲ್ಲಿಸಿದ್ದರು. ಲೆಕ್ಕಪರಿಶೋಧನೆಯಲ್ಲಿ ವ್ಯವಹಾರದಲ್ಲಿನ ನ್ಯೂನತೆಗಳು ಕಂಡುಬಂದಿದು, ಸಂಘದಲ್ಲಿ ರೂ. ೩೦,೪೫,೨೭೮ಮೊತ್ತದಷ ಹಣದ ದುರುಪಯೋಗ ನಡೆದಿದ್ದು, ಇದನ್ನು ವಸೂಲು ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯ ಸೊಸೈಟಿ ಅಧ್ಯಕ್ಷ ಪ್ರಭಾಕರ ಸಿಎಚ್, ನಿರ್ದೇಶಕರಾದ ವಿಶ್ವನಾಥ ನಾಯಕ್, ವಿಶ್ವನಾಥ, ಪ್ರಮೋದ್ ಆರ್ ನಾಯಕ್, ಪಿ. ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಚಂದ್ರಕಾಂತ್ ಮತ್ತು ಸಿಬ್ಬಂದಿ ಸರಿತಾ ಎಸ್ ಅವರ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಮಾಡಿದೆ.

ಆರೋಪಪಟ್ಟಿಯಲ್ಲಿ ಏನೇನಿದೆ..? ಆರೋಪ ೧ : ಪುಸ್ತಕದಲ್ಲಿದ್ದ ಲೆಕ್ಕ ರೂ ೨೩,೭೩,೫೯೧ ರೂಪಾಯಿ. ಆದರೆ ಪರಿಶೀಲಿಸಿದಾಗ ಇದ್ದಿದ್ದು ರೂ. ೬ ಸಾವಿರ. ೫-೧೦-೨೦೨೪ರಂದು ನಗದು ಪರಿಶೀಲಿಸಿದಾಗ ಕೈಯಲ್ಲಿರುವ ನಗದು ರೂ ೬೦೦೦ ಮಾತ್ರ ಇತ್ತು. ಆದರೆ ಪುಸ್ತಕದಲ್ಲಿ ರೂ ೨೩,೭೯,೫೯೧ ಎಂದು ಬರೆದಿತ್ತು. ಇರುವ ನಗದಿಗೂ ಪುಸ್ತಕದಲ್ಲಿರುವ ಮೊತ್ತಕ್ಕೂ ೨೩,೭೩,೫೯೧ ರಷ ವ್ಯತ್ಯಾಸ ಕಂಡುಬಂದಿದೆ. ಆದರೆ, ೧೩-೦೮-೨೦೧೬ರ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಘದಲ್ಲಿ ಇರಬಹುದಾದ ನಗದು ಮಿತಿಯು ೮,೦೦,೦೦೦ ರೂ ನಿಗದಿಪಡಿಸಿದ್ದು, ಬೈಲಾ ಪ್ರಕಾರ, ನಗದು ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ನಗದು ಗುಮಾಸ್ತೆಯ ಜಂಟಿ ಅಧೀನದಲ್ಲಿ ಇರಬೇಕಾಗಿರುತ್ತದೆ. ಇದಲ್ಲದೇ, ಸಂಘದಲ್ಲಿ ಇರಬಹುದಾದ ನಗದು ಶಿಲ್ಕಿನ ಮೇಲೆ ತೆಗೆದುಕೊಂಡ ವಿಮೆಯ ಮೊತ್ತವು ೫ ಲಕ್ಷ ರೂ. ಆಗಿದ್ದು ಇದರ ಅವಧಿ ೯-೧೨-೨೦೨೩ರಂದು ಪೂರ್ಣಗೊಂಡಿದೆ. ಆದರೂ ಸಂಘ ವಿಮೆಯನ್ನು ನವೀಕರಣಗೊಳಿಸಿರಲಿಲ್ಲ್ಲ. ಇದು ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ನಿರ್ಲಕ್ಷ್ಯವಾಗಿದ್ದು, ಸದರಿ ಮೊತ್ತದ ದುರುಪಯೋಗವಾಗಿದೆ.

ಆರೋಪ ೨: ಸಾಲಕ್ಕಿಟ್ಟ ಆಭರಣಗಳೇ ಬ್ಯಾಂಕ್‌ನಲ್ಲಿಲ್ಲ: ಆರೋಪ ಪಟ್ಟಿಯಲ್ಲಿರುವ ಎರಡನೇ ಆರೋಪವೇನೆಂದರೆ – ಲೆಕ್ಕ ಪರಿಶೋಧನಾ ಸಮಯದಲ್ಲಿ ಆಭರಣ ಸಾಲಗಳನ್ನು ಪರಿಶೀಲಿಸಿದಾಗ ಸಂಘದ ಲೆಕ್ಕಪುಸ್ತಕಗಳಲ್ಲಿ ಆಭರಣ ಸಾಲ ೭೦ ಜನರಿಂದ ರೂ. ೨,೨೧,೮೫,೧೯೫ ನೀಡಿರುವ ಬಗ್ಗೆ ನಮೂದಿಸಲಾಗಿದೆ. ಆದರೆ ಸಂಘದಲ್ಲಿ ಆಭರಣಗಳು ಪರಿಶೀಲನೆಗೆ ಲಭ್ಯವಿರುವುದಿಲ್ಲ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ವಿವರದಂತೆ ಸಂಘ ಆರ್ಥಿಕ ದುರುಪಯೋಗಕ್ಕೊಳಗಾಗಿರುವುದರಿಂದ ಸದಸ್ಯರು ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡಲು ಬಂದಾಗ ಸಂಘದಲ್ಲಿ ನಗದು ಲಭ್ಯವಿರುತ್ತಿರಲಿಲ್ಲ. ಇದಕ್ಕಾಗಿ ಸಾಲಗಾರರು ಅಡವಿಟ್ಟ ಚಿನ್ನಾಭರಣಗಳನ್ನು ಆಡಳಿತ ಮಂಡಳಿಯ ನಿರ್ದೇಶನದಂತೆ ನೆರೆಯ ಗುರುವಾಯನಕೆರೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಇಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿ ಅಡವಿಡಲಾಗುತ್ತಿತ್ತು. ಈ ರೀತಿ ಅಡವಿಟ್ಟು ಬಂದ ನಗದನ್ನು ಸದಸ್ಯರಿಗೆ ಡ್ರಾ ಮಾಡುವ ಸಮಯದಲ್ಲಿ ನೀಡಲಾಗುತ್ತಿತ್ತು ಎಂಬ ಮಾಹಿತಿ ನೀಡಿದ್ದು, ಸಂಘದ ಉಪನಿಯಮ ೫೩ರಲ್ಲಿ ನಿಗದಿಪಡಿಸಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಅಧಿಕಾರಿಗಳು ಸಾಲ ಪ್ರಕ್ರಿಯೆಗಳಲ್ಲಿ ನಡೆದ ದುರುಪಯೋಗಗಳಿಗೆ ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ. ಅಲ್ಲದೇ ಒಡವೆಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಕಾರ್ಯನಿರ್ವಹಣಾಧಿಕಾರಿ ಮತ್ತು ಗುಮಾಸ್ತೆಯದ್ದಾಗಿರುತ್ತದೆ.

ಆರೋಪ ೩ : ಎಫ್‌ಡಿ ಮೇಲೆ ರೂ. ೧೫,೪೦,೮೫,೩೨೨ ನಕಲಿ ಸಾಲ: ಲೆಕ್ಕಪರಿಶೋಧನೆ ವೇಳೆ ನಿರಖು ಠೇವಣಿ ಮೇಲೆ ೧೫,೪೦,೮೫,೩೨೨ ರೂಪಾಯಿ ಸಾಲ ನೀಡಿದ್ದರ ಬಗ್ಗೆ ಪುಸ್ತಕಗಳಲ್ಲಿ ನಮೂದಿಸಲಾಗಿತ್ತು. ಇದು ಠೇವಣಿದಾರರ ಹಣಗಳನ್ನು ತಮ್ಮ ಸ್ವಂತಕ್ಕೆ ಬಳಸಲು ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಗದು ಗುಮಾಸ್ತರು, ಸಹಾಯಕರು ಮಾಡಿದ್ದ ಕುತಂತ್ರ ಎಂದು ಆರೋಪಿಸಲಾಗಿದೆ.

ಅಲ್ಲದೇ ಠೇವಣಿ ಸಾಲವನ್ನು ನೀಡುವಾಗ ಸಂಘದಲ್ಲಿ ಠೇವಣಿ ಪತ್ರವನ್ನು ಸಾಲದ ಅರ್ಜಿಯೊಂದಿಗೆ ಒತ್ತೆ ಇಡಬೇಕಾಗುತ್ತದೆ. ಆದರೆ ಸಂಘದಲ್ಲಿ ಸಾಲಕ್ಕೆ ಹಾಗೂ ಸಾಲಗಾರರಿಗೆ ಸಂಬಂಧಿಸಿದ ಯಾವುದೇ ಠೇವಣಿ ಪತ್ರಗಳು ಅಧಿಕಾರಿಗಳಿಗೆ ಪರಿಶೀಲನೆಗೆ ಲಭ್ಯವಿರಲಿಲ್ಲ. ಅಲ್ಲದೇ, ಸಾಲಗಳನ್ನು ನೀಡುವಾಗ ಒಪ್ಪಂದ ಕರಾರು ಪತ್ರ, ನಿಯಮಾನುಸಾರ ದಾಖಲೆ ಪಡೆದಿರುವ ಬಗ್ಗೆಯೂ ದಾಖಲೆಗಳು ಸಿಕ್ಕಿರುವುದಿಲ್ಲ. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಸದಸ್ಯರು, ಕಾರ್ಯಕಾರಿ ಸದಸ್ಯರು ಕರ್ನಾಟಕ ಸಹಕಾರಿ ಕಾಯ್ದೆ ೧೯೫೯ರ ಕಾಯ್ದೆ ಕಲಾಂ ೨೮-ಎ(೧) ಹಾಗೂ ೨೮(ಸಿ)ಯ ಉಲ್ಲಂಘನೆ ಮಾಡಿದ್ದಾರೆ. ಸಂಘದ ಹಣ ಮತ್ತು ಆಸ್ತಿಯನ್ನು ಆಡಳಿತ ಮಂಡಳಿಯವರು ಹಾಗೂ ಅಧಿಕಾರಿ ವರ್ಗದವರು ಸ್ವಂತ ಉಪಯೋಗಕ್ಕೆ ಬಳಸಿ ಠೇವಣಿದಾರರಿಗೆ ಹಾಗೂ ಸದಸ್ಯರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ.
ಆರೋಪ ೪: ಅಕ್ಷಯ ನಗದು ಪತ್ರ ಠೇವಣಾತಿ ಮೇಲೆ ೧.೩೪ ಕೋಟಿ ನಕಲಿ ಸಾಲ: ಅಕ್ಷಯ ನಗದು ಪತ್ರ ಠೇವಣಾತಿ ಮೇಲೆ ನೀಡಿರುವ ಸಾಲ ರೂ. ೧,೩೪,೧೮,೦೭೪ ಸಾಲ ಕೂಡ ನಕಲಿ ಮತ್ತು ದುರುಪಯೋಗವಾಗಿದೆ ಎಂದು ಆರೋಪಪಟ್ಟಿಯಲ್ಲಿ ಬರೆಯಲಾಗಿದೆ.

ಆರೋಪ ೫: ಚೇತನಾ ಠೇವಣಾತಿ ಮೇಲೆ ರೂ ೧೧ ಕೋಟಿ ೨೪ ಲಕ್ಷ ನಕಲಿ ಸಾಲ: ಲೆಕ್ಕ ಪರಿಶೋಧನೆ ವೇಳೆ ಚೇತನಾ ಠೇವಣಾತಿ ಮೇಲೆ ರೂ. ೧೧,೨೪,೬೨,೦೯೬ ಹಣವನ್ನು ನೀಡಿರುವುದಾಗಿ ನಮೂದಿಸಲಾಗಿದೆ. ಆದರೆ ಇದಕ್ಕೂ ಯಾವುದೇ ದಾಖಲೆ ಪತ್ರಗಳು ಲಭ್ಯವಿಲ್ಲ. ಇದನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪ, ಜೊತೆಗೆ ನಕಲಿ ಸಾಲದ ಮೂಲಕ ಠೇವಣಿದಾರರಿಗೆ ಮತ್ತು ಸದಸ್ಯರಿಗೆ ವಂಚನೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಹೀಗೆ ಒಟ್ಟು ರೂ. ೩೦,೪೫,೨೪,೨೭೮ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆಸ್ತಿ ಜಪ್ತಿಗೆ ಕೋರ್ಟ್ ಆದೇಶ: ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ೧೯೫೯ ಕಲಂ ೧೦೩(೧)ರ ಪ್ರಕಾರ ಸಹಕಾರ ಸಂಘಗಳ ಉಪನಿಬಂಧಕರು ಪ್ರತಿವಾದಿಗಳಾದ ೧೪ ಜನರ ಚರಾಸ್ತಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಪ್ರಭಾಕರ ಸಿ.ಎಚ್., ವಿಶ್ವನಾಥ್ ಆರ್ ನಾಯಕ್ ಹಾಗೂ ಅವರ ಮಗಳಿಗೆ ಸೇರಿದ ಸ್ಥಿರಾಸ್ತಿ, ಪ್ರಮೋದ್ ಆರ್ ನಾಯಕ್ ಮತ್ತು ಮಗಳಿಗೆ ಸೇರಿದ ಸ್ಥಿರಾಸ್ತಿ, ಕಿಶೋರ್, ರತ್ನಾಕರ್ ಸೇರಿಗಾರ್, ಜಗನ್ನಾಥ್, ನಯನ ಶಿವಪ್ರಸಾದ್, ಚಂದ್ರಕಾಂತ್, ಸರಿತಾ ಎಸ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ. ಈ ಆದೇಶ ತೆರವಿಗೆ ಬಯಸಿದರೆ ೨೦-೦೬-೨೦೨೫ರ ಒಳಗಾಗಿ ರೂ. ೩೦,೪೫,೨೪,೨೭೮ ಹಣವನ್ನು ನಗದು ಭದ್ರತೆಯಾಗಿ ನ್ಯಾಯಾಲಯದ ಪಿ.ಡಿ. ಖಾತೆಯಲ್ಲಿ ಠೇವಣಿ ಇರಿಸಲು ಸೂಚಿಸಲಾಗಿದೆ.

ಆತಂಕದಲ್ಲಿ ನಿರ್ದೇಶಕರು
ಆಡಳಿತ ಮಂಡಳಿಯ ಕೆಲ ನಿರ್ದೇಶಕರು ಬ್ಯಾಂಕ್‌ನ ಅವ್ಯವಹಾರಗಳಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಆದರೆ ಈಗ ಅವರ ಆಸ್ತಿಯೂ ಮುಟ್ಟುಗೋಲು ಸಾಧ್ಯತೆ ಇರುವುದರಿಂದ ನಿರ್ದೇಶಕರು ಆತಂಕದಲ್ಲಿದ್ದಾರೆ.

ಬ್ಯಾಂಕ್ ಮತ್ತೆ ಪುನಶ್ಚೇತನಗೊಳ್ಳುತ್ತದೆ
“ಸಿ ಎಚ್ ಪ್ರಭಾಕರ್ ಮತ್ತು ಚಂದ್ರಕಾಂತ್ ಅವರ ಸಮಯದಲ್ಲಿ ಅವ್ಯವಹಾರಗಳಾಗಿವೆ. ಚಂದ್ರಕಾಂತ್‌ರದ್ದು ಬೇಜವಾಬ್ದಾರಿಯ ಕೆಲಸ. ಯಾವುದೇ ನಿರ್ಣಯಗಳಿಲ್ಲದೇ ಕೆಲವರಿಗೆ ದೊಡ್ಡ ಮೊತ್ತ ಕೊಟ್ಟಿರುತ್ತಾರೆ. ಈಗ ಬ್ಯಾಂಕ್‌ನವರು ಕಟ್ಟಡದ ಬಾಡಿಗೆ ಕೂಡ ಕೊಟ್ಟಿಲ್ಲ. ರೂ. ೨೨ ಕೋಟಿಯಷ ಹಣ ದುರುಪಯೋಗ ಆಗಲು ಪ್ರಭಾಕರ್ ಮತ್ತು ಚಂದ್ರಕಾಂತ್ ಕಾರಣ. ಒಂದು ಡೈರೆಕ್ಟರ್‌ಗೆ ಒಂದು ಕೋಟಿ ತೆಗೆದುಕೊಳ್ಳುವ ಹಕ್ಕನ್ನು ಬೈಲಾ ಮಾಡಿದ್ದಾರೆ ಅಂತ ಹೇಳಲಾಗಿದೆ. ಜೂನ್ ೨೦ರೊಳಗೆ ಆಸ್ತಿ ಮುಟ್ಟುಗೋಲು ಹಾಕಿದ್ರೆ ಹಣ ಕೊಡಲು ಸಾಧ್ಯ. ಡಿಆರ್‌ಗೆ ಮನವರಿಕೆ ಮಾಡಿದರೆ ಆಸ್ತಿ ಮುಟ್ಟುಗೋಲು ತಪ್ಪಿಸಬಹುದು. ಮುಂದೆ ಹೊಸ ಆಡಳಿತ ಮಂಡಳಿ ನೇಮಕವಾಗಲಿದೆ. ಡೆಪಾಸಿಟರ್‌ಗೆ ಹಣ ಕೊಡಲು ಮುಟ್ಟುಗೋಲು ಹಾಕಿದ ಹಣವೇ ಸಾಕಾಗಬಹುದು. ೧೦೦ ಶೇಕಡ ನಾವು ಹಣ ವಾಪಸ್ ಕೊಡುತ್ತೇವೆ.

  • ವಿ.ಆರ್. ನಾಯಕ್, ಹಂಗಾಮಿ ಅಧ್ಯಕ್ಷರು
    ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ

LEAVE A REPLY

Please enter your comment!
Please enter your name here