ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

0

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಕಕ್ಕಿಂಜೆ ಶಾಖೆಯ ದಶಮಾನೋತ್ಸವದ ಪ್ರಯುಕ್ತ ಕೆ.ಎಮ್.ಸಿ ಆಸ್ಪತ್ರೆ, ಅತ್ತಾವರ ಮಂಗಳೂರು ಮತ್ತು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಇದರ ವತಿಯಿಂದ ಹಾಗೂ ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ(SNDP), ಚಾರ್ಮಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ಇವರ ಜಂಟಿ ಸಹಯೋಗದೊಂದಿಗೆ ಸೆ.9ರಂದು ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಭವನ ಕಕ್ಕಿಂಜೆಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಘದ ಉಪಾಧ್ಯಕ್ಷ ಭಗೀರಥ ಜಿ ಇವರು ವಹಿಸಿಕೊಂಡು ಆರೋಗ್ಯದ ಕಾಳಜಿಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚಾರ್ಮಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಾರದ ಐ ಇವರು ಮಾತಾನಾಡಿ ಸಂಘದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಬಗ್ಗೆ ಸವಿವರದ ಮಾಹಿತಿಯನ್ನು ಸಂಘದ ವಿಶೇಷಾಧಿಕಾರಿ ಎಮ್. ಮೋನಪ್ಪ ಪೂಜಾರಿ ಕಂಡೆತ್ಯಾರುರವರು ನೀಡಿದರು.

ಸುಮಾರು 250ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಚಾರ್ಮಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಯಶೋಧರ ಚಾರ್ಮಾಡಿ, ತೋಟತ್ತಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸನತ್ ಕುಮಾರ್, ಹಾಗೂ ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಹೊಸ್ಮಠ, ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಪುರುಷೋತ್ತಮ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಚಾರ್ಮಾಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಸುರೇಶ್ ಇವರು ಸ್ವಾಗತಿಸಿ, ಕಕ್ಕಿಂಜೆ ಶಾಖೆ ಶಾಖಾ ವ್ಯವಸ್ಥಾಪಕ ಜಾರಪ್ಪ ಪೂಜಾರಿಯವರು ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಹಿರಿಯ ವ್ಯವಸ್ಥಾಪಕ ಕೀರ್ತನ್ ಕುಮಾರ್, ಹಿರಿಯ ವ್ಯವಸ್ಥಾಪಕಿ ರೂಪಲತಾ, ಆಂತರಿಕ ಲೆಕ್ಕ ಪರಿಶೋಧಕ ಶರತ್ ಕುಮಾರ್, ಇತರ ಶಾಖೆಗಳ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here