ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಾರದಾ ರೈ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಕಾಲೇಜ್ ವಿದ್ಯಾರ್ಥಿಗಳಿಗೆ, ದುಶ್ಚಟಗಳಿಗೆ ಬಲಿಯಾದ ವಿದ್ಯಾರ್ಥಿಗಳ ಬದುಕು ಬಲು ನರಕದ ಬದುಕು, ಅಮಲು ಸೇವನೆಯಿಂದ ಮರಣ, ಅಪಘಾತ, ಆತ್ಮಹತ್ಯೆ ಮುಂತಾದವು ಸಂಭವಿಸುತ್ತದವೆ.

ಪೋಷಕರಿಗೆ ತಮ್ಮ ಮಕ್ಕಳು ಮಾಣಿಕ್ಯವಿದ್ದಂತೆ ಆದ್ದರಿಂದ ಶಾಲಾ ಕಾಲೇಜುಗಳು ಶಿಕ್ಷಣದ ಪಾಠವನ್ನು ಹೇಳಿಕೊಟ್ಟರೆ, ಸ್ವಾಸ್ಥ್ಯ ಸಂಕಲ್ಪದಂತ ಕಾರ್ಯಕ್ರಮಗಳು ಮೌಲ್ಯಧಾರಿತ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ ಎಂಬ ಬಹಳ ಅರ್ಥಪೂರ್ಣವಾದ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ದುರಭ್ಯಾಸಗಳಿಗೆ ಬಲಿಯಾಗದಂತೆ ಪ್ರಮಾಣ ವಚನ ಮಾಡಿಸಲಾಯಿತು.
ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿ ಅಶೋಕ್ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಅವರು ಮಾತನಾಡಿ, ಮದ್ಯ, ಮಾದಕ ವಸ್ತುಗಳ ಬಗ್ಗೆ ಯುವ ಜನತೆ ಎಚ್ಚರದಲ್ಲಿರಬೇಕು. ಸ್ನೇಹಿತರೊಂದಿಗೆ ವಿನೋದಕ್ಕಾಗಿ ಪ್ರಾರಂಭವಾಗುವ ಮದ್ಯ, ಮಾದಕ ಬಳಕೆ ಕೊನೆಗೆ ಚಟವಾಗಿ ಬಿಟ್ಟು, ಚಟ್ಟವೇರಿಸಿ ಬಿಡುತ್ತವೆ ಎಂದರು. ಸೇವಾ ಪ್ರತಿನಿಧಿ ಭಾರತೀ, ಕಾಲೇಜು ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ ಪ್ರಾರ್ಥಿಸಿದರು. ಉಪನ್ಯಾಸಕ ಜಯರಾಮ್ ಹಾಗೂ ವರುಣ್ ದೇವ್ ನಿರೂಪಿಸಿದರು. ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಗುರುವಾಯನಕೆರೆ ವಲಯದ ಮೇಲ್ವಿಚಾರಕಿ ಯಶೋಧ ಧನ್ಯವಾದ ಸಮರ್ಪಣೆ ಮಾಡಿದರು.