ಶಿಬಾಜೆ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಶಿಬಾಜೆ ಗ್ರಾಮದ ಶಿರಾಡಿ ಶಿಶಿಲ ಮೀಸಲು ಅರಣ್ಯದ ವಿಸ್ತರಿತ ಬ್ಲಾಕ್ 1963 ಅರಣ್ಯ ಪ್ರದೇಶದ ಅರಂಪಾದೆ ಎಂಬಲ್ಲಿ 184/1ಸಿ 1.9 ಎಕರೆ ಭೂಮಿಯನ್ನು ಒತ್ತುವರಿ ಮಾಡಿ ರಬ್ಬರ್ ಕೃಷಿಯನ್ನು ಅನಧಿಕೃತವಾಗಿ ಸ್ವಾಧೀನ ಹೊಂದಿರುವ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಸ್ವಾಧೀನ ಪಡಿಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.
ಅರಂಪಾದೆ ಮನೆಯ ನಿವಾಸಿ ಒ.ಪಿ. ಜಾರ್ಜ್ ಎಂಬವರು ಈ ಭೂಮಿಯನ್ನು ಅತಿಕ್ರಮಣ ಮಾಡಿದ್ದರು. ಮತ್ತು ಈ ಭೂಮಿಯನ್ನು ವಾಪಸ್ ಪಡೆಯುವಂತೆ ಹೈಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ ರಬ್ಬರ್ ತೋಟ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಖಾಸಗಿ ವ್ಯಕ್ತಿಯು ಅರಣ್ಯಕ್ಕೆ ಸಂಬಂಧಿಸಿದ ಜಾಗವನ್ನು ಅತಿಕ್ರಮಣ ಮಾಡಿರುವುದರಿಂದ ಇದನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್, ಅರಣ್ಯ ಅಧಿಕಾರಿಗಳಿಗೆ 3 ತಿಂಗಳ ಒಳಗೆ ತೆರವುಗೊಳಿಸಬೇಕೆಂದು ಗಡುವು ನೀಡಿತ್ತು.
ಎಸಿಎಫ್ ಸುಬ್ಬಾ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ರಾಘವೇಂದ್ರ, ಪುತ್ತೂರು ವಲಯ ಅರಣ್ಯಧಿಕಾರಿ ಕಿರಣ್, ಶಿಬಾಜೆ ವಿಭಾಗದ ಫಾರೆಸ್ಟರ್ ರಾಜೇಶ್ ಗಸ್ತು ಅರಣ್ಯ ಪಾಲಕ ಸುನಿಲ್ ನಾಯ್ಕ್ ಹಾಗೂ ಇತರ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ತೆರವು ಕಾರ್ಯಾಚರಣೆ ನಡೆಸುತ್ತಿದೆ.