ನಾರಾವಿ: “ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದದ್ದು. ವಿದ್ಯಾರ್ಥಿಗಳು ಮಾಡುವ ತಪ್ಪುಗಳನ್ನು ಎತ್ತಿ ತೋರಿಸದೆ ನಯವಾಗಿ ತಿದ್ದಿ ಅವರನ್ನು ಸರಿ ದಾರಿಗೆ ತರುವವನೇ ನಿಜವಾದ ಶಿಕ್ಷಕ. ಗುರು ಶಿಷ್ಯರ ಸಂಬಂಧ ಅಮರವಾದುದು “ಎಂದು ಸಂತ ಅಂತೋನಿ ಕಾಲೇಜಿನ ಪ್ರಾoಶುಪಾಲ ಸಂತೋಷ್ ಸಲ್ದಾನ ಹೇಳಿದರು. ಅವರು ಸಂತ ಅಂತೋನಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಂಟಿಯಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಮೊದಲಿಗೆ ಡಾ. ಸರ್ವ ಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು. ವೇದಿಕೆಯಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಕಾವ್ಯ, ಡಾ. ಸರ್ವ ಪಳ್ಳಿ ರಾಧಾಕೃಷ್ಣನ್ ಅವರ ಜೀವನ ಸಾಧನೆಯನ್ನು ವಿವರಿಸಿದರು. ಸಭಾ ಕಾರ್ಯಕ್ರಮದ ನಂತರ ಪದವಿ ಕಾಲೇಜು ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ರಂಜಿಸಿದರು. ದ್ವಿತೀಯ ಪಿ ಯು ಸಿ ವಿದ್ಯಾರ್ಥಿನಿ ಗ್ಲೆನಿಷಾ ಎಲ್ಲರನ್ನು ಸ್ವಾಗತಿಸಿದರು. ಶೈಲಿ ಕಾರ್ಯಕ್ರಮ ನಿರೂಪಿಸಿದರು.