
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಲು ಸಿದ್ದವಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ರಿ ವ್ಯಕ್ತಿಯ ಪರವಾಗಿ ವಕೀಲರ ತಂಡ ಜಿಲ್ಲಾ ಪೊಲೀಸರ ಕಛೇರಿಗೆ ಭೇಟಿ ನೀಡಿದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿಗೆ ಲಭ್ಯವಿರದ ಬಗ್ಗೆ ವರದಿ ಪ್ರಕಟಿಸಿದ ಹೊಸಕನ್ನಡ ವೆಬ್ ನ್ಯೂಸ್ ಚಾನೆಲ್ ನ ಸುದರ್ಶನ ಬೆಳಾಲು ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಹೊಸ ಕನ್ನಡ ಎಂಬ ವೆಬ್ ನ್ಯೂಸ್ ಚಾನೆಲ್ ನಲ್ಲಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ಭೀತಿಯನ್ನು ಹುಟ್ಟಿಸುವಂತೆ ಸುಳ್ಳು ಮಾಹಿತಿಯನ್ನು ವರದಿ ಮಾಡಲಾಗಿದೆ. ಈ ವರದಿಯ ಬಗ್ಗೆ ಆರೋಪಿತ ಸುದರ್ಶನ್ ಬೆಳಾಲು ಅವರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ವಕೀಲರ ತಂಡ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಲು ಪೂರ್ವಾನುಮತಿ ಪಡೆದಿದ್ದಾರೆಯೇ ಎಂಬ ಬಗ್ಗೆ ಹಾಗೂ ವಕೀಲರ ತಂಡ ಬಂದಾಗ ಪೊಲೀಸ್ ವರಿಷ್ಠಾಧಿಕಾರಿಗಳು ಲಭ್ಯರಿಲ್ಲದಿರಲು ಕಾರಣವೇನು ಎಂಬ ಯಾವುದೇ ಮಾಹಿತಿಗಳನ್ನು ಪರಿಶೀಲಿಸದೆ ಯಾವುದೇ ಸೂಕ್ತ ಸಾಕ್ಷಿ/ಪುರಾವೆಗಳು ಇಲ್ಲದೆ ಸುಳ್ಳು ಮಾಹಿತಿಯನ್ನು ವರದಿ ಮಾಡಿರುವುದು ದೃಢಪಟ್ಟಿದೆ. ಆದ್ದರಿಂದ ಸದ್ರಿ ಆರೋಪಿತ ಸುದರ್ಶನ ಬೆಳಾಲು ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 40/2025 ಕಲಂ :352, 353(1)b BNSರಂತೆ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.