ತಣ್ಣೀರುಪಂಥ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರಿನ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ, 1 ತಿಂಗಳ ಬ್ರೈಡಲ್ ಮೇಕಪ್ ಹಾಗೂ ಟೈಲರಿಂಗ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ತಣ್ಣೀರುಪಂಥ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣ ಕಲ್ಲೇರಿಯಲ್ಲಿ ನಡೆಯಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಜ್ಯೋತಿ ರಾಜ್ ತರಬೇತಿ ಉದ್ಘಾಟಿಸಿ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಶುಭ ಕೋರಿದರು. ಇತ್ತೀಚಿನ ದಿನಗಳಲ್ಲಿ ಬ್ರೈಡಲ್ ಮೇಕಪ್ ಹಾಗೂ ಟೈಲರಿಂಗ್ ತರಬೇತಿ ಗೆ ಹೆಚ್ಚಿನ ಬೇಡಿಕೆಯಿದ್ದು, ತರಬೇತಿಯನ್ನು ಉತ್ತಮ ಮಟ್ಟದಲ್ಲಿ ಪಡೆದು ಮಹಿಳೆಯರು ಮುಂದೆ ಹೆಚ್ಚಿನ ಕೌಶಲ್ಯ ಪಡೆಯಲು ಪ್ರೇರೇಪಿಸಿದರು.

ಅದೇ ರೀತಿ ತರಬೇತಿ ನಂತರ ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಪ್ರಾರಂಭಿಸಲು ಸಲಹೆ ನೀಡಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ತರಬೇತಿಯ ನಿಯಮಗಳ ಬಗ್ಗೆ ವಿವರಿಸಿ, ತರಬೇತಿಯಲ್ಲಿ ಪಡೆದ ಕೌಶಲ್ಯ ವನ್ನು ಸ್ವ ಉದ್ಯೋಗ ಮಾಡುವಲ್ಲಿ ಪರಿವರ್ತನೆ ಮಾಡಲು ಕರೆ ನೀಡಿದರು. ವೇದಿಕೆಯಲ್ಲಿ ತಣ್ಣೀರುಪಂಥ ಪಂಚಾಯತ್ ಅಧ್ಯಕ್ಷೆ ಹೇಮಾವತಿ, ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯರಾಜ್ ಜೈನ್, ಬ್ರೈಡಲ್ ಮೇಕಪ್ ತರಬೇತುದಾರೆ ಸಂಧ್ಯಾ, ಟೈಲರಿಂಗ್ ತರಬೇತುದಾರೆ ಮೀನಾಕ್ಷಿ ಉಪಸ್ಥಿತರಿದ್ದರು. ಕಲ್ಲೇರಿ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 30 ಮಹಿಳೆಯರು ಈ 1 ತಿಂಗಳ ತರಬೇತಿ ಪಡೆಯಲಿದ್ದಾರೆ. ಸುಮ ಸ್ವಾಗತಿಸಿದರು. ಸ್ನೇಹ ಕಾರ್ಯಕ್ರಮ ನಿರೂಪಿಸಿ, ಶಿಲ್ಪಾ ಧನ್ಯವಾದಗೈದರು.