ತುಳುನಾಡಿನ ನಿಷ್ಠಾವಂತ ಸಾಂಸ್ಕೃತಿಕ ಸೇವಕ ಡಾ. ದಿವ ಕೊಕ್ಕಡ ತುಳುವ ಮಹಾಸಭೆ ಬೆಳ್ತಂಗಡಿ ತಾಲೂಕು ಸಂಚಾಲಕರಾಗಿ ಆಯ್ಕೆ

0

ಬೆಳ್ತಂಗಡಿ: ತುಳುನಾಡಿನ ಸಾಂಸ್ಕೃತಿಕ ಅಧ್ಯಯನ ಮತ್ತು ಭಾಷಾ ಚಟುವಟಿಕೆಗಳಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿರುವ ಡಾ. ದಿವಾಕರ ಕೆ. (ದಿವ ಕೊಕ್ಕಡ) ಅವರನ್ನು ತುಳುವ ಮಹಾಸಭೆ ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕರಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ.

ಈ ನೇಮಕಾತಿ ತುಳುನಾಡಿನ ಪರಂಪರೆ, ಸಂಸ್ಕೃತಿ ಮತ್ತು ಭಾಷೆಯ ಸಂರಕ್ಷಣೆಗೆ ನೂರಾರು ವರ್ಷಗಳಿಂದ ಶ್ರಮಿಸುತ್ತಿರುವ ಮಹಾಸಭೆಯ ಶತಮಾನೋತ್ಸವ ಪುನಶ್ಚೇತನ ಅಭಿಯಾನಕ್ಕೆ ಶಕ್ತಿಯುತ ಸಹಕಾರ ನೀಡಲಿದೆ ಎಂದು ಸಂಘಟಕರ ಅಭಿಪ್ರಾಯಪಟ್ಟಿದ್ದಾರೆ.

ದಿವ ಕೊಕ್ಕಡ ಅವರು ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಡಾ. ಹಾಮಾನಾ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿಗಳೂ ಆಗಿದ್ದಾರೆ. ತುಳುನಾಡಿನ ವಾರ್ಷಿಕ ಆಚರಣೆಗಳ ಕುರಿತು ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಲಭಿಸಿದೆ.

ಅವರು ರಚಿಸಿರುವ ‘ತುಳುನಾಡಿನ ಆಚರಣೆಗಳು’ ಸಂಶೋಧನಾ ಗ್ರಂಥ ಹಾಗೂ ಕದಿರು, ಮುಂದುವರಿಸಿ, ನುಡಿದೀಪಿಕಾ ಎಂಬ ಮೂರು ಕವನ ಸಂಕಲನಗಳು ಸಾಹಿತ್ಯ ಪ್ರೇಮಿಗಳಿಂದ ಉತ್ತಮ ಮೆಚ್ಚುಗೆ ಪಡೆದಿವೆ. ಶೋಧ ಸಂಶೋಧನಾ ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಹೋಬಳಿಯ ಅಧ್ಯಕ್ಷರೂ ಆಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಇವರು 2009ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಪುಸ್ತಕ ಪ್ರಕಟಣೆ ಸಮಿತಿಯ ಸಂಯೋಜಕರಾಗಿ 52 ಪುಸ್ತಕಗಳ ಪ್ರಕಟನೆಯಲ್ಲಿ ಶ್ರಮಿಸಿರುತ್ತಾರೆ.

ಪತ್ರಿಕಾಲೇಖನ, ಗಮಕ ವಾಚನ, ಆಕಾಶವಾಣಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಡಾ. ಕೊಕ್ಕಡ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ ಮೂಲಕವೂ ಗುರುತಿಸಿಕೊಂಡಿದ್ದಾರೆ.

ತುಳುವ ಮಹಾಸಭೆ ತನ್ನ ಪುನಶ್ಚೇತನ ಗುರಿಯಲ್ಲಿ, ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆ, ತುಳುನಾಡ ಕಳರಿ ತರಬೇತಿ ಮತ್ತು ಮರ್ಮ ಚಿಕಿತ್ಸೆ, ನಶಿಸಿದ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನ ಪುನರ್ ಉದ್ಧಾರಣ, ಹಾಗೂ ಜಾತಿ–ಮತ–ಭಾಷಾ ಸೌಹಾರ್ದತೆ ಕಾಪಾಡುವ ಮಹತ್ವದ ಯೋಜನೆಗಳಿಗೆ ನಾಂದಿ ಹಾಡಿದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಲ್ಲಲ್ಲಿ ತುಳುವ ಮಹಾಸಭಾ ಸಮಿತಿಗಳನ್ನು ರೂಪೀಕರಿಸಲಾಗುವುದು.

ದಿವ ಕೊಕ್ಕಡ ಅವರು ತಮ್ಮ ನೇಮಕಾತಿಗೆ ಪ್ರತಿಕ್ರಿಯಿಸುತ್ತಾ, “ತುಳುನಾಡು ನನ್ನ ಹೃದಯ, ತುಳು ಭಾಷೆ ನನ್ನ ಉಸಿರು. ಈ ಹೊಣೆಗಾರಿಕೆಯನ್ನು ನಾನು ಸಮರ್ಪಣಾ ಭಾವದಿಂದ ನಿಭಾಯಿಸುತ್ತೇನೆ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here