ಬೆಳಾಲು: ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಛೇರಿಯ ಸಿಬ್ಬಂದಿಗಳಿಬ್ಬರು ಸಂಘದ ಅಕೌಂಟಿನಿಂದ ಎರಡು ಕೋಟಿಗೂ ಆಧಿಕ ಹಣವನ್ನು ವಂಚನೆ ಮಾಡಿರುವ ಬಗ್ಗೆ ಸಂಘದ ಅಧ್ಯಕ್ಷ ಹೆಚ್. ಪದ್ಮಗೌಡ ಇವರ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ 18-02-2022 ರಿಂದ 25-03-2025 ನೇ ಅವಧಿಯ ಸಂದರ್ಭದಲ್ಲಿ ಎರಡು ಕೋಟಿಯ ಹನ್ನೆರಡು ಲಕ್ಷದ ಎಂಟು ಸಾವಿರದ ಮುನ್ನೂರ ಇಪ್ಪತ್ತೆಂಟು ರೂಪಾಯಿ ಹದಿನೈದು ಪೈಸೆ (2,12,08,328,15) ಹಣವನ್ನು ಸಿಬ್ಬಂದಿಗಳಾದ ಬೆಳಾಲು ನಿವಾಸಿ ಎಲ್ಯಣ್ಣ ಪೂಜಾರಿ ಮಗ ಸದಾಶಿವ (ಸುಜಿತ್) ಮತ್ತು ಬೆಳಾಲು ನಿವಾಸಿ ವಾಸಪ್ಪ ಗೌಡರ ಮಗ ಪ್ರಶಾಂತ ಬಿ. ಇಬ್ಬರು ಸೇರಿಕೊಂಡು ವಿವಿಧ ಮೂಲಗಳಿಂದ ವಂಚನೆ ಮಾಡಿದ್ದರು. ಅದಲ್ಲದೆ ಪ್ರಶಾಂತ ಬಿ. ಎಂಬಾತ ಸಂಘದ ಠೇವಣಿಯ ರಶೀದಿಯನ್ನು ಕಳವು ಮಾಡಿಕೊಂಡು ಹೋಗಿದ್ದ.
ಈ ಸಂದರ್ಭದಲ್ಲಿ ಮೂರನೇ ಆರೋಪಿ ಬೆಳಾಲು ನಿವಾಸಿ ಎಲ್ಯಣ್ಣ ಪೂಜಾರಿ ಮಗ ಪ್ರಕಾಶ್ ಎಂಬಾತ 10 ಲಕ್ಷ ರೂಪಾಯಿ ಹಣ ಮೂರು ವರ್ಷದ ಅವಧಿಗೆ ಸಂಘದಲ್ಲಿ ಠೇವಣಿ ಇರಿಸಿ ಆ ದಿನದಂದು ಠೇವಣಿ ಆಧಾರದಲ್ಲಿ ಮೂರು ಲಕ್ಷದ ಐವತ್ತು ಸಾವಿರ (3,50,000) ರೂಪಾಯಿ ಹಣ ಸಾಲವಾಗಿ ಪಡೆದುಕೊಂಡಿದ್ದ.
28-04-2025ರಂದು ಒಂದು ಸುಳ್ಳು ಅರ್ಜಿ ಸಂಘಕ್ಕೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಛೇರಿಯಲ್ಲಿ ಬ್ಯಾಂಕಿನ ಹಣವನ್ನು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿ ಪೂರ್ತಿ ಠೇವಣಿ ೧೦ ಲಕ್ಷ ರೂಪಾಯಿ ಬಡ್ಡಿ ಸಹಿತ ನನಗೆ ಮರುಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ನಿಜ ವಿಚಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿ ಹೇಳಿದರೂ ಪ್ರಕಾಶ ಕೇಳದೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿರುವುದಲ್ಲದೆ ನಂತರ ಪದೆ ಪದೆ ಸಂಘದ ಕಚೇರಿಗೆ ಬಂದು ಸಿಬ್ಬಂದಿಗಳಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಎಂದು ಸಂಘದ ಅಧ್ಯಕ್ಷ ಪದ್ಮ ಗೌಡ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.31ರಂದು ಸದಾಶಿವ (ಸುಜಿತ್), ಪ್ರಶಾಂತ.ಬಿ, ಪ್ರಕಾಶ್ ವಿರುದ್ಧ ಕಲಂ -314,316(4),318(೩3),336(3),306,352,351(2),R/W 3(5) BMS 2023 ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಸಿಬ್ಬಂದಿ ಸಂಘದಿಂದ ಅಮಾನತು: ಇಬ್ಬರು ಸಿಬ್ಬಂದಿ ಸದಾಶಿವ (ಸುಜಿತ್) ಮತ್ತು ಪ್ರಶಾಂತ್ ನನ್ನು ಮೇ ತಿಂಗಳಲ್ಲಿ ಸಂಘದ ನಿರ್ದೇಶಕರು ಸೇರಿ ತನಿಖೆ ಮುಗಿಯುವವರೆಗೆ ಅಮಾನತು ಮಾಡಿದ್ದಾರೆ.