ಉಜಿರೆ: ಚರ್ಚ್ ಪಾಲಕ ಪವಾಡ ಪುರುಷ ಸಂತ ಅಂತೋನಿ ಯವರ ಹಬ್ಬ ಬಹಳ ಸಂಭ್ರಮದಿಂದ ಜೂ. 13ರಂದು ಆಚರಿಸಲಾಯಿತು.
ಹಬ್ಬದ ಪ್ರಧಾನ ದಿವ್ಯ ಬಲಿ ಪೂಜೆಯನ್ನು ಮಂಗಳೂರು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಪ್ರವೀಣ್ ಲಿಯೋ ಲಸ್ರದೋ ಅರ್ಪಿಸಿ ನಾವು ಉಪ್ಪು ಮತ್ತು ಬೆಳಕಾಗಿ ಬಾಳಬೇಕು ಎಂದು ಕರೆ ನೀಡಿದರು. ಬೆಳಕು ಹೇಗೆ ಪ್ರಕಾಶ ನೀಡುತ್ತದೋ ಅದೇ ರೀತಿ ನಾವು ತಿನ್ನುವ ಆಹಾರಕ್ಕೆ ಉಪ್ಪು ಕೂಡ ಅತೀ ಮುಖ್ಯ. ಉಪ್ಪು ಅಗತ್ಯ ತಂಕ್ಕಂತೆ ಬಳಸಿದರೆ ಮಾತ್ರ ನಾವು ತಿನ್ನುವ ಆಹಾರ ರುಚಿಯಾಗಿರುತ್ತದೆ. ನಾವು ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಸಂತ ಅಂತೋನಿಯವರು ಮಾಡಿದ ಪವಾಡಗಳು ನಮ್ಮ ಜೀವನದಲ್ಲಿ ಅಳವಡಿಸಿ ಬದುಕಿದರೆ ಜೀವನ ಸಾರ್ಥಕತೆಯಾಗುತ್ತದೆ ಎಂದರು. ಬೆಳ್ತಂಗಡಿ ವಲಯದ ಪ್ರಧಾನ ಧರ್ಮ ಗುರು ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಧರ್ಮ ಗುರು ಫಾ.ವಾಲ್ಟರ್ ಡಿಮೆಲ್ಲೊ ಹಬ್ಬದ ಶುಭಾಶಯ ಕೋರಿದರು.

ಚರ್ಚ್ ಧರ್ಮ ಗುರು ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ, ಬೆಳ್ತಂಗಡಿ ತಾಲೂಕಿನ ವಿವಿಧ ಚರ್ಚ್ ಗಳ ಧರ್ಮ ಗುರುಗಳು, ದಯಾಳ್ ಭಾಗ್ ಆಶ್ರಮದ ಧರ್ಮ ಗುರುಗಳು ಭಾಗ ವಹಿಸಿದ್ದರು.

ದಾನಿಗಳಿಗೆ ಮೇಣದ ಬತ್ತಿ ವಿತರಿಸಲಾಯಿತು. ಎಸ್. ಎಸ್. ಎಲ್. ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಅನುಗ್ರಹ ಶಾಲಾ ವಿದ್ಯಾರ್ಥಿ ಶಾರನ್ ಡಿಸೋಜರಿಗೆ ಗೌರವಿಸಲಾಯಿತು. ಆಗಮಿಸಿದ ಭಕ್ತಾದಿಗಳಿಗೆ ದಾನಿಗಳ ಸಹಕಾರದಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಹಬ್ಬ ಆಚರಣ ಸಮಿತಿ ಮುಖ್ಯಸ್ಥ ಅರುಣ್ ಸಂದೇಶ್ ಡಿಸೋಜಾ ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.