ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಟ್ರಸ್ಟಿ ಹಾಗು ಪ್ರಾಂಶುಪಾಲ ಡಾ. ಎಸ್.ಎನ್. ವೆಂಕಟೇಶ್ ನಾಯಕ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭೂಮಿಯ ಮೇಲೆ ಬದುಕುತ್ತಿರುವ ಪ್ರತಿಯೊಂದು ಪ್ರಾಣಿ ಪಕ್ಷಿಗಳು ಹಾಗು ಜೀವ ಸಂಕುಲಗಳಿಗೆ ಬದುಕಲು ಬೇಕಾದ ಗಾಳಿ, ನೀರು, ಆಹಾರವನ್ನು ಈ ಪ್ರಕೃತಿ ನೀಡುತ್ತಾ ಬಂದಿದೆ.
ಎಲ್ಲರೂ ಈ ಪ್ರಕೃತಿಯನ್ನು ಅವಲಂಬಿಸಿಕೊಂಡೇ ಬದುಕುತ್ತಿದ್ದೇವೆ. ಪರಿಸರ ಇಲ್ಲದಿದ್ದರೆ ನಾಳೆ ನಾವು ಇಲ್ಲ ಆದರೆ ನಮ್ಮ ದುರಾಸೆಯಿಂದಾಗಿ ಇಂದು ಪ್ರಕೃತಿಯಲ್ಲಿ ಅಸಮತೋಲನಗಳು ಉಂಟಾಗುತ್ತಿದೆ.
ಇವತ್ತು ಪ್ರಕೃತಿಯ ಅಸಮತೋಲನವನ್ನು ಸರಿದೂಗಿಸಿ ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ, ಸುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುವುದರೊಂದಿಗೆ ನಮ್ಮನ್ನು ಪೋಷಿಸುವ ಪರಿಸರಕ್ಕೆ ನಮ್ಮ ಋಣ ತೀರಿಸಬೇಕಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಟ್ರಸ್ಟಿಗಳಾದ ಶರತ್ ಗೋರೆ, ಚಂದ್ರಶೇಖರ ರಜೆ ಅರಸ್, ಸುಭಾಷ್ ಝಾ, ಯೋಗೇಶ್ ಬೆಡೆಕರ್, ಮೆಹಬೂಬ ಬಾಷಾ, ಹಾಗು ಉಪನ್ಯಾಸಕರಾದ ನಿತಿನ್ ಪಿ.ಎಸ್., ಹರೀಶ್ ನಂಬಿಯಾರ್, ಅಶೋಕ್, ವರ್ಷ ಕಾಮತ್, ಪ್ರಾದ್ವಿ, ರೂಪಶ್ರೀ ಬಂಗೇರ ಉಪಸ್ಥಿತರಿದ್ದರು.