ಚಾರ್ಮಾಡಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ದಡ್ಡು ಪರಿಸರದಲ್ಲಿ ಸುಮಾರು 15ಕ್ಕಿಂತ ಅಧಿಕ ಮನೆಗಳಿಗೆ ಮಳೆಗಾಲದಲ್ಲಿ ಆಸರೆಯಾಗಿರುವ ಕಾಲುಸಂಕಕ್ಕೆ ಕೈ ದಂಡೆ ನಿರ್ಮಿಸಲಾಗಿದೆ.
ಈ ಪರಿಸರದ ಜನರ ಸಂಪರ್ಕಕ್ಕೆ ಜಾಕೇಡಿ ಹಳ್ಳಕ್ಕೆ ಊರವರೇ ಸೇರಿ ಕಾಂಕ್ರೀಟ್ ಕಂಬಗಳ ಕಾಲು ಸಂಕ ರಚಿಸಿದ್ದರು. ಆದರೆ ಇದು ಕೇವಲ ಒಂದು ಅಡಿ ಮಾತ್ರ ಅಗಲವಿದೆ. ಹಳ್ಳದಲ್ಲಿ ಹೆಚ್ಚಿನ ನೀರು ಹರಿದಾಗ ಇಲ್ಲಿ ಸಂಚಾರ ಅಪಾಯಕಾರಿ. ಇಲ್ಲಿಗೆ ಸೇತುವೆ ನಿರ್ಮಾಣ ಶತಮಾನದ ಬೇಡಿಕೆಯಾಗಿದ್ದು ಅದು ಇಂದಿನವರೆಗೂ ಈಡೇರಿಲ್ಲ. ಈ ಕಾರಣದಿಂದ ಹಂಪಸಾಲು, ಕುಂಡೊಟ್ಟು, ಗಾಣದ ಕೊಟ್ಟಿಗೆ, ದಡ್ಡು ಮತ್ತಿತರ ಪರಿಸರದ ಮಂದಿಗೆ ಮಳೆಗಾಲದ ಸಂಚಾರಕ್ಕೆ ಕಾಲುಸಂಕವೇ ಆಧಾರವಾಗಿದೆ. ಈ ಕುರಿತು ಮೇ.29ರ ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಕಟವಾಗಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಈ ಕಾಲುಸಂಕಕ್ಕೆ ಕೈದಂಡೆ ನಿರ್ಮಿಸಿ ಕೊಟ್ಟಿದ್ದು ಸಂಭವನೀಯ ಅಪಾಯವನ್ನು ತಡೆಗಟ್ಟಲು ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ. ಶೌರ್ಯ ವಿಪತ್ತು ತಂಡದ ಸದಸ್ಯರಾದ ಸ್ನೇಕ್ ಅನಿಲ್ ಕಕ್ಕಿಂಜೆ, ಸಚಿನ್ ಭಿಡೆ, ನಾಗೇಶ, ಪ್ರಮೀಳಾ, ಅನಿಲ್ ಕುಮಾರ್ ಇವರ ತಂಡ ಕೈ ದಂಡೆ ನಿರ್ಮಿಸಿದ್ದು ಸ್ಥಳೀಯ ಡಿ.ಎ.ರೆಹಮಾನ್ ಮತ್ತಿತರರು ಸಹಕರಿಸಿದರು.