ಬೆಳ್ತಂಗಡಿ: ಗ್ರಾಹಕರ ಸೇವೆಗಾಗಿ ಹೊಸತನದೊಂದಿಗೆ ಹೊಸ ವಿನ್ಯಾಸಗಳನ್ನು ಕಳೆದ 40 ವರ್ಷಗಳಿಂದ ನೀಡುವ ಮೂಲಕ ಚಿನ್ನಾಭರಣಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ ಬೆಳ್ತಂಗಡಿಯ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಗೋಲ್ಡನ್ ಹಾರ್ವೆಸ್ಟ್ ಪ್ಲಾನ್ ಸ್ಕೀಮ್ ನ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವು ಜೂ.1ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಬಿ.ಕೆ. ಧನಂಜಯ್ ರಾವ್ ಹಾಗೂ ಎಸ್. ಡಿ. ಎಂ ಕಾಲೇಜಿನ ಪ್ರಯೋಗಾಲಯದ ಪ್ರಾಧ್ಯಾಪಕ ಪರಮೇಶ್ವರ್ ನೆರವೇರಿಸಿದರು.

ಸಂಸ್ಥೆಯ ಶಾಖಾ ಪ್ರಬಂಧಕ ಅಶೋಕ್ ಬಂಗೇರ ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ಕೇವಲ ವ್ಯಾಪಾರ ಮಾತ್ರವಲ್ಲದೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಲಾಭಾಂಶದ ಒಂದಿಷ್ಟು ಪಾಲನ್ನು ಮೀಸಲಿರಿಸಿ ಜನರಿಗೆ ಸೇವೆಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಗೋಲ್ಡನ್ ಹಾರ್ವೆಸ್ಟ್ ಪ್ಲಾನ್ ನಲ್ಲಿ ಗ್ರಾಹಕರು ಕನಿಷ್ಠ ರೂ. 2000 ದ ತಿಂಗಳ ಕಂತುಗಳೊಂದಿಗೆ ಹೂಡಿಕೆ ಮಾಡಬಹುದು. ಕಂತು ಜಮಾ ಮಾಡಿದ ದಿನದ ಬೆಲೆಗೆ ಅನುಗುಣವಾಗಿ ಚಿನ್ನವನ್ನು ಖರೀದಿ ಮಾಡಬಹುದಾದ ನೂತನ ಯೋಜನೆಯಲ್ಲಿ ಸುಲಭ ಕಂತಿನ ಮೂಲಕ ಚಿನ್ನವನ್ನು ಪಡೆಯುವ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗ ಪಡೆಸಿಕೊಳ್ಳಿ ಎಂದರು.

ಬಿ.ಕೆ. ಧನಂಜಯ್ ರಾವ್ ಮಾತನಾಡಿ, ಪೃಥ್ವಿ ಎಂದರೆ ಭೂಮಿ, ಆ ಭೂಮಿಯ ಸ್ವಚ್ಛತೆಯ ಕಡೆಗೆ ಕಾಳಜಿ ತೋರಿಸಿ ಸೇವೆ ಮಾಡುತ್ತಿರುವ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕರನ್ನು ಅಭಿನಂದಿಸಿರುವುದು ಪೃಥ್ವಿ ಜ್ಯುವೆಲ್ಸ್ ಗ್ರಾಹಕರ ಸೇವೆಯೊಂದಿಗೆ ಸಾಮಾಜಿಕ ಅಭಿವೃದ್ಧಿಯ ಒಡನಾಟ ಬೆಳೆಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು. ಜೊತೆಗೆ ಪ್ರತಿಯೊಬ್ಬ ವ್ಯಕ್ತಿಗೆ ಆಪತ್ಧನವಾಗಿ, ಹೂಡಿಕೆಯ ದೃಷ್ಟಿಯಿಂದ ಚಿನ್ನ ಬೇಕಾಗಿದೆ, ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಉಂಟಾದಾಗ ಮೊದಲು ನೆನಪಾಗುವುದು ಚಿನ್ನವಾದ್ದರಿಂದ ಗೋಲ್ಡನ್ ಹಾರ್ವೆಸ್ಟ್ ಪ್ಲಾನ್ ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡುವುದು ನಿಜವಾದ ಬುದ್ಧಿವಂತ ನಾಗರಿಕನ ಲಕ್ಷಣ. ಹಾಗೆಯೇ ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ಪೃಥ್ವಿ ಸಂಸ್ಥೆಯು ಹೆಸರುವಾಸಿಯಾಗಿದೆ ಎಂದರು.

ಪ್ರಾಧ್ಯಾಪಕ ಪರಮೇಶ್ವರ್ ಮಾತನಾಡಿ, ವಿವಿಧ ಕ್ಷೇತ್ರಗಳಿಗೆ ಪೃಥ್ವಿ ಸಂಸ್ಥೆಯು ತನ್ನದೇ ಆದ ಕೊಡುಗೆ ಹಾಗೂ ಸಹಕಾರವನ್ನು ನೀಡುವ ಮೂಲಕ ಗ್ರಾಹಕರೊಂದಿಗೆ ಹಾಗೂ ಸಮಾಜದಲ್ಲಿ ಜನರೊಂದಿಗೆ ಬೆರೆತಿರುವುದು ಗಮನಾರ್ಹವಾಗಿದೆ. ಪೌರ ಕಾರ್ಮಿಕರ ಸೇವೆಯನ್ನು ಮೆಚ್ಚುವಂತಹದ್ದು. ತಿಂಗಳ ಸುಲಭ ಕಂತುಗಳ ಮೂಲಕ ಹೂಡಿಕೆ ಮಾಡಿ ಉತ್ತಮ ಬೆಲೆಯ ಚಿನ್ನ ಖರೀದಿಸಲು ಈ ಯೋಜನೆಯು ಬಹಳ ಪ್ರಯೋಜನವಾಗಲಿದೆ ಎಂದರು.
ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಸ್ವಚ್ಛತೆಯನ್ನೇ ಉಸಿರಾಗಿಸಿಕೊಂಡಿರುವ ಪಟ್ಟಣ ಪಂಚಾಯತ್ ನ ಪೌರ ಕಾರ್ಮಿಕರಾದ ಸುರೇಶ್, ಹರೀಶ್ ಕುಮಾರ್, ಸುರೇಶ್ ಕೆ., ಚಂದ್ರ, ವಸಂತ, ಸದಾನಂದ, ಅಶೋಕ ಭಟ್ಯ, ಹಾಗೂ ಲಿಂಗಪ್ಪರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಯಿ ಹೋಟೆಲ್ ಮಾಲಕ ಗೌತಮ್, ಪೌರ ಕಾರ್ಮಿಕರು, ಪೃಥ್ವಿ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಸಂಸ್ಥೆಯ ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ಸತೀಶ್ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.