ಬೆಳಾಲು: ಕಳೆದ 7-8 ವರ್ಷಗಳಿಂದ ಸತತವಾಗಿ ರಾಜ್ಯ ಮಟ್ಟದ ಎನ್ ಎಂ ಎಂ ಏಸ್ ಪರೀಕ್ಷೆಯಲ್ಲಿ ಮಾಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯುತ್ತಾ ಬಂದಿದ್ದಾರೆ. ಅಂತೆಯೇ 2024-25ನೇ ಸಾಲಿನ ಪರೀಕ್ಷೆಯಲ್ಲಿ ಈ ಶಾಲೆಯ ಸೃಜನ್ಯ ಮತ್ತು ಸುಷ್ಮಾ ಆಯ್ಕೆ ಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಿಂದ ಪರೀಕ್ಷೆ ಬರೆದ ಸುಮಾರು 1000 ಮಂದಿ ವಿದ್ಯಾರ್ಥಿಗಳಲ್ಲಿ 37 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ಮಾಯ ಶಾಲೆಯ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ, ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ಮಾಯ ಪಲ್ಲಿದಡ್ಕ ನಾಗಪ್ಪ ನಾಯ್ಕ ಹಾಗೂ ಮಂಜುಳಾ ದಂಪತಿಯ ಪುತ್ರಿ ಸೃಜನ್ಯ ಮತ್ತು ಕೊಲ್ಪಾಡಿ ಮಂಡಾಲು ಮನೆ ನೋಣಯ್ಯ ಗೌಡ ಹಾಗೂ ಯಶೋಧಾ ದಂಪತಿಯ ಪುತ್ರಿ ಸುಷ್ಮಾ ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲೆಯ ಜಿಪಿಟಿ ಶಿಕ್ಷಕ ಯೋಗೇಶ ಹೆಚ್.ಆರ್. ಹಾಗೂ ಸುಪ್ರಿಯಾ ತರಬೇತಿ ನೀಡಿರುತ್ತಾರೆ. ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ. 12000ದಂತೆ ಮುಂದಿನ ನಾಲ್ಕು ವರ್ಷಗಳ ಕಾಲ ವಿದ್ಯಾರ್ಥಿ ವೇತನ ದೊರೆಯಲಿದೆ.