ಗುರುವಾಯನಕೆರೆ: ಶಿವಂ ಟೆಕ್ಸ್ಟೈಲ್ ಮಾಲೀಕ ರಮೇಶ್ ಅವರ ಸಹೋದರ ಶರ್ವಣ್ ಮೇ.26ರಂದು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೂಲತಃ ರಾಜಸ್ಥಾನದವರಾಗಿದ್ದ ಶರ್ವಣ್ ಅವರು ಗುರುವಾಯನಕೆರೆಯ ಹವ್ಯಕ ಭವನದ ಹತ್ತಿರ ಬಾಡಿಗೆಗಿದ್ದ ಮನೆಯಲ್ಲಿ ತಲೆ ತಿರುಗುತ್ತಿದೆ ಎಂದು ಹೇಳಿ ಮಲಗಿದವರು ಎದ್ದೇಳದೆ ಇದ್ದಾಗ ಗಾಬರಿಗೊಂಡ ಮನೆಯವರು ಶರ್ವಣರನ್ನು ತಕ್ಷಣ ಅಭಯ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಪರಿಶೀಲಿಸಿದ ವೈದ್ಯರು ಶರ್ವಣ್ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಧೃಢಪಡಿಸಿದ್ದು, ಇದೀಗ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಸ್ಟ್ ಮಾರ್ಟಂ ನಂತರ ಶರ್ವಣ್ ರ ಮೃತಶರೀರವನ್ನು ಅವರ ಊರಾದ ರಾಜಸ್ಥಾನಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಮನೆ ಮಂದಿ ತಿಳಿಸಿದ್ದಾರೆ. ಶರ್ವಣ್ ಅವರು ಅಂದಾಜು 28 ರಿಂದ 30 ವರ್ಷದ ಅಸುಪಾಸಿನವರಾಗಿದ್ದು, ನವೆಂಬರ್ನಲ್ಲಿ ಮದುವೆ ಗೊತ್ತು ಮಾಡಲಾಗಿತ್ತು. ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.