ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ರಿಕ್ಷಾ ಡ್ರೈವರ‍್ಸ್ ಯೂನಿಯನ್ ದೂರುಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ: ಬಿ.ಎಂ.ಭಟ್

0

ಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಶೆಟ್ಟಿ ಅವರ ದ್ವೇಷಕಾರಕ, ಉದ್ರೇಕಕಾರಿ, ಕೋಮುವಿಭಾಜಕ ಭಾಷಣದ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ಪ್ರಬುದ್ಧ ಸಮಾಜಕ್ಕೆ ಹಾಗೂ ಭಾರತೀಯರಿಗೆ ನ್ಯಾಯ ಒದಗಿಸಬೇಕು ಎಂದು ಸಿಐಟಿಯು ಸಂಯೋಜಿತ ಫೆಡರೇಶನ್ ಆಫ್ ಕರ್ನಾಟಕ ಅಟೋ ರಿಕ್ಷಾ ಡ್ರೈವರ‍್ಸ್ ಯೂನಿಯನ್ಸ್ ದ.ಕ. ಜಿಲ್ಲಾ ಗೌರವಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.

ಮೇ.೧೧ರಂದು ಗುರುವಾಯನಕೆರೆಯ ಬಂಟರಭವನಲ್ಲಿ ದಿ.ಸುಹಾಸ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹೆಸರಲ್ಲಿ ನಡೆದ ಕಾರ್ಯಕ್ರಮವನನು ದುರುಪಯೋಗ ಪಡಿಸಿಕೊಂಡು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಹಾಗೂ ಇತರರು ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯೂನಿಯನ್ ವತಿಯಿಂದ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಭಾಷಣದಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತಾಗಿದೆ. ಅಟೋ ಚಾಲಕರ ಮಧ್ಯೆ ಪರಸ್ಪರ ಘರ್ಷಣೆ ಬರಲು ಪ್ರಚೋದನೆ ನೀಡುವ ಭಾಷಣ ಇದಾಗಿದೆ.

ಅಟೋ ಡ್ರೈವರ್‌ಗಳನ್ನು ಕೋಮು ಆಧಾರಿತವಾಗಿ ವಿಭಜಿಸಲು ಉತ್ತೇಜಿಸುವಂತೆ ಮಾತನಾಡಿ ಸಮಾಜದ ಶಾಂತಿ ಕದಡುವ ರೀತಿ ಭಾಷಣ ಮಾಡಿರುವುದು ಖಂಡನೀಯ. ಹಿಂದುಗಳು ಅನ್ಯ ಧರ್ಮಿಯರ ಅಟೋ ರಿಕ್ಷಾದಲ್ಲಿ ಹೋಗಬಾರದು, ಬಟ್ಟೆ ಅಂಗಡಿಗಾಗಲಿ, ಯಾವುದೇ ಅಂಗಡಿಗಳಿಗೆ ಆಗಲೀ ಹೋಗಬಾರದು, ಅಲ್ಲಿ ಅವರು ನಮ್ಮ ಮನಸ್ಸನ್ನು ಕೆಡಿಸುತ್ತಾರೆ ಎಂದು ಗ್ರಾಮ ಪಂಚಾಯತು ಅಧ್ಯಕ್ಷರಾಗಿ ಸಂವಿಧಾನಾತ್ಮಕ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಸಮಾಜಕ್ಕೆ ತಪ್ಪು ಸಂದೇಶ ನೀಡಿ ಮಾತಾಡಿರುವುದು ಖಂಡನೀಯ ಎಂದು ಹೇಳಿದ ಬಿ.ಎಂ. ಭಟ್ ಅವರು ದಾರಿ ತಪ್ಪಿದ ಶಾಸಕರ ಮೇಲೆ ಕಠಿಣ ಕ್ರಮ ಕೈಗೊಳ್ಳದ ಸರಕಾದರ ನಿರ್ಲಕ್ಷ ನಡೆ ಇಂದು ಇತರರು ಅದೇ ತಪ್ಪು ದಾರಿಯಲ್ಲಿ ನಡೆಯಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದರು.

ಸರ್ಕಾರ ಈಕೆಯ ಮತ್ತು ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಕ್ರಮ ಕೈಗೊಳ್ಳದೇ ಇಲ್ಲವಾದಲ್ಲಿ ತಾಲೂಕಿನ ಎಲ್ಲಾ ಅಟೋ ಡ್ರೈವರ‍್ಸ್ ಒಟ್ಟಾಗಿ ಪ್ರಜ್ಞಾವಂತ ಸಂವಿಧಾನ ಪ್ರೇಮಿ ನಾಗರಿಕರು, ಸಮಾನ ಮನಸ್ಕರು ಸೇರಿ ದೊಡ್ಡ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು. ಅಟೋ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಪಡೀಲ್, ತಾಲೂಕು ಅಧ್ಯಕ್ಷ ಬಿ.ಎ. ರಝಾಕ್, ಸಿಐಟಿಯು ಮುಖಂಡರಾದ ಈಶ್ವರಿ ಶಂಕರ್ ಪದ್ಮುಂಜ, ಗಣೇಶ್ ಪ್ರಸಾದ್, ಅಬೂಬಕ್ಕರ್, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here