

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳ ಎಂಬಲ್ಲಿ ೨೦೧೨ರ ಡಿಸೆಂಬರ್ 10ರಂದು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬಿನಿದಳದ ಮುಖ್ಯಸ್ಥೆ ಸಾವಿತ್ರಿಯವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿವಾರಂಟ್ ಮೂಲಕ ವಶಕ್ಕೆ ಪಡೆದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ಪೊಲೀಸರು ಎ.೭ರಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ವೇಳೆ ನ್ಯಾಯಾಧೀಶ ಸಂದೇಶ್ ಅವರು ಹೆಚ್ಚಿನ ತನಿಖೆಗಾಗಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಬಂಧಿತರ ಪರ ವಕೀಲ ಶಿವಕುಮಾರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕಿ ಆಶಿತಾ ಉಪಸ್ಥಿತರಿದ್ದರು. ಬಂಧಿತ ನಕ್ಸಲರಾದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರಾಗಿರುವ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸದವರಾಗಿರುವ ಸಾವಿತ್ರಿ ಅವರ ವಿರುದ್ಧ ೨೦೧೨ರ ಡಿಸೆಂಬರ್ ೧೦ರಂದು ಮಿತ್ತಬಾಗಿಲು ಗ್ರಾಮದ ಬೊಳ್ಳ ಎಂಬಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪ ಇದೆ. ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿರುವವರು ಮಿತ್ತಬಾಗಿಲು ಗ್ರಾಮದ ಬೊಳ್ಳ ಎಂಬ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ನಕ್ಸಲರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ನಿವಾಸಿ ವಿಕ್ರಂ ಗೌಡ ಮತ್ತು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಅಲ್ಲಿಂದ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಮತ್ತು ಅಲ್ಲಿ ಉಳಿದಿದ್ದ ನಕ್ಸಲ್ ತಂಡದ ನಡುವೆ ನಡೆದ ದಾಳಿ ಪ್ರತಿ ದಾಳಿ ವೇಳೆ ಪೊಲೀಸ್ ಇಲಾಖೆಯ ಸದಾಶಿವ ಚೌಧರಿ ಅವರಿಗೆ ಗುಂಡೇಟು ತಗುಲಿತ್ತು. ಈ ಪ್ರಕರಣದಲ್ಲಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೇಸ್ನಲ್ಲಿ ಸಾವಿತ್ರಿ ಮೂರನೇ ಆರೋಪಿಯಾಗಿದ್ದು ಬಿ.ಜಿ. ಕೃಷ್ಣಮೂರ್ತಿ ಐದನೇ ಆರೋಪಿಯಾಗಿದ್ದಾನೆ. ಒಂದನೇ ಆರೋಪಿ ಕುಪ್ಪು ಸ್ವಾಮಿ ಮೃತಪಟ್ಟಿದ್ದು ವಿಕ್ರಂ ಗೌಡ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಸುಂದರಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಶರಣಾಗಿದ್ದು ಬೆಂಗಳೂರು ಜೈಲಿನಲ್ಲಿದ್ದಾಳೆ. ಇದೀಗ ಪೊಲೀಸರ ಮೇಲಿನ ಗುಂಡಿನ ದಾಳಿ ಪ್ರಕರಣ ಮರುಜೀವ ಪಡೆದಿದೆ.
ಬಾಡಿವಾರಂಟ್ ಮೂಲಕ ವಶಕ್ಕೆ ಪಡೆದ ಪೊಲೀಸರು: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನೂ ಆಗಿದ್ದ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ ಬಿ.ಜಿ.ಕೃಷ್ಣಮೂರ್ತಿ(50ವ) ಮತ್ತು ಕಾರ್ಮಿಕರ ಪರ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದ ಸಾವಿತ್ರಿ(40ವ) ಅವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದ ಪ್ರಕರಣದ ತನಿಖಾಧಿಕಾರಿಯಾಗಿರುವ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಎ.7ರಂದು ಹಾಜರುಪಡಿಸಿದರು. ಈ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶ ಸಂದೇಶ್ ಅವರು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದ್ದ ನಕ್ಸಲರನ್ನು ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದರು.
2005ರಿಂದ ನಕ್ಸಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಬಿ.ಜಿ. ಕೃಷಮೂರ್ತಿ ಮತ್ತು ಕೇರಳ ವಯನಾಡಿನ ಕಬಿನಿ ದಳದ ಮುಖ್ಯಸ್ಥೆಯಾಗಿದ್ದ ಸಾವಿತ್ರಿಯವರನ್ನು 2021ರ ನವೆಂಬರ್ ೯ರಂದು ಬಂಧಿಸಿ ಕೇರಳದ ತ್ರಿಶೂರ್ ಜೈಲಿನಲ್ಲಿರಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳದಲ್ಲಿ ನಡೆದಿರುವ ಪೊಲೀಸರ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಬಾಡಿ ವಾರಂಟ್ ಮೂಲಕ ತ್ರಿಶೂರ್ ಜೈಲಿನಿಂದ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ವಶಕ್ಕೆ ಪಡೆದ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಿಚಾರಣೆ ನಡೆಸಿದ್ದಾರೆ. ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫೩ ಕೇಸು ಮತ್ತು ಸಾವಿತ್ರಿ ವಿರುದ್ಧ 22 ಕೇಸ್ ದಾಖಲಾಗಿದೆ.
ಕುತ್ಲೂರಿನಲ್ಲಿ ರಾಮಚಂದ್ರ ಭಟ್ರವರ ಕಾರಿಗೆ ಬೆಂಕಿ ಹಚ್ಚಿದ, ಕಾಯರ್ತಡ್ಕದಲ್ಲಿ ಗೋಡೆ ಬರಹ ಬರೆದ ಪ್ರಕರಣದಲ್ಲಿಯೂ ಬಂಧಿತರ ವಿಚಾರಣೆ
ಮಿತ್ತಬಾಗಿಲು ಗ್ರಾಮದ ಬೊಳ್ಳದಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎ.೭ರಂದು ಬೆಳ್ತಂಗಡಿಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೇಶ್ ಅವರ ಎದುರು ಹಾಜರಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಏ.9ರಂದು ಬೆಳಿಗ್ಗೆ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನಲ್ಲಿ ರಾಮಚಂದ್ರ ಭಟ್ ಎಂಬವರ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾಯರ್ತಡ್ಕ ಬಸ್ ನಿಲ್ದಾಣದಲ್ಲಿ ನಕ್ಸಲ್ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಏ.9ರಂದು ಸಂಜೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರ ಎದುರು ಹಾಜರು ಪಡಿಸಲಾಗಿದೆ. ಈ ವೇಳೆ ಹೆಚ್ಚಿನ ತನಿಖೆಗಾಗಿ ಅವರನ್ನು ಏ.೧೧ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಡಿವೈಎಸ್ಪಿ ವಿಜಯಪ್ರಸಾದ್, ಬಂಧಿತರ ಪರ ವಕೀಲ ಶಿವಕುಮಾರ್ ಮತ್ತು ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಉಪಸ್ಥಿತರಿದ್ದರು.
ಕೋರ್ಟ್ಗೆ ಬಂದ ಸಾವಿತ್ರಿ ಸಂಬಂಧಿಕರು: ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸಾವಿತ್ರಿ ಅವರ ಸಂಬಂಧಿಕರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಾವಿತ್ರಿಯ ಸಂಬಂಧಿಕ ಅನಿಲ್ ಕುಮಾರ್ ಅವರು ಸುಮಾರು 12 ವರ್ಷಗಳ ಹಿಂದೆ ಸಾವಿತ್ರಿ ಮನೆ ಬಿಟ್ಟು ಹೋಗಿದ್ದರು. ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಳಿಕ ನಕ್ಸಲ್ ಚಳವಳಿಯಲ್ಲಿದ್ದಾರೆ, ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿಯಿತು. ಇದೀಗ ಆಕೆಯನ್ನು ಭೇಟಿಯಾಗಿದ್ದೇವೆ. ಆಕೆಯನ್ನು ನೋಡಿ ತುಂಬಾ ಸಂತಸವಾಗಿದೆ. ಅವರ ಮೇಲೆ ತುಂಬಾ ಕೇಸುಗಳಿವೆ ಎಂದು ತಿಳಿಯಿತು. ಎಲ್ಲ ಪ್ರಕರಣಗಳಿಂದ ಮುಕ್ತರಾಗಿ ಅವರು ಮನೆಗೆ ಬರುವುದನ್ನು ಕಾಯುತ್ತಿzವೆ ಎಂದು ತಿಳಿಸಿದ್ದಾರೆ.
ವಿಕ್ರಂಗೌಡ ಎನ್ಕೌಂಟರ್ ಬಳಿಕ ಬೆಳ್ತಂಗಡಿ ತಾಲೂಕು ನಕ್ಸಲ್ ಮುಕ್ತ!
ಬೆಳ್ತಂಗಡಿ ತಾಲೂಕಿನಲ್ಲಿಯೂ ಸಖತ್ ಸದ್ದು ಮಾಡಿದ್ದ ಮತ್ತು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ(48ವ) ೨೦೨೪ರ ನ.೧೮ರಂದು ಮಧ್ಯರಾತ್ರಿ ತನ್ನ ಊರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ಎಂಬಲ್ಲಿ ಎನ್ಕೌಂಟರ್ಗೆ ಬಲಿಯಾದ ಘಟನೆ ನಡೆದ ಬಳಿಕ ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದೆ. ಕೊಲೆ, ದರೋಡೆ, ಬೆದರಿಕೆ ಸೇರಿದಂತೆ 60ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿಕ್ರಂ ಗೌಡನನ್ನು ಖಾಕಿ ಪಡೆ ಬಲಿ ಪಡೆದ ಬಳಿಕ ೨೦೨೫ರ ಜನವರಿ ೮ರಂದು ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ ಕುತ್ತೂರು, ಕೆ. ವಸಂತ ತಮಿಳುನಾಡು ಮತ್ತು ಟಿ.ಎನ್.ಜಿಷಾ ಕೇರಳ ಅವರು ಏಕಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರು ಶರಣಾದ ಬಳಿಕ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆ ನಂತರ ತಲೆಮರೆಸಿಕೊಂಡಿದ್ದ ಶೃಂಗೇರಿಯ ರವೀಂದ್ರ ಮತ್ತು ಕುಂದಾಪುರದ ಲಕ್ಷ್ಮಿ ಶರಣಾದ ನಂತರ ನಕ್ಸಲ್ ಯುಗ ಅಂತ್ಯ ಕಂಡಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಕ್ಸಲ್ ನಿಗ್ರಹ ಪಡೆಯನ್ನು ಬರ್ಖಾಸ್ತುಗೊಳಿಸಿದೆ.
ಬಾಡಿವಾರಂಟ್ ಮನವಿ ಪರಿಶೀಲನೆ ನಡೆಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೂಚಿಸಿದ್ದ ಹೈಕೋರ್ಟ್: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ಕೇರಳ ಪೋಲೀಸರಿಂದ ಬಂಧನಕ್ಕೆ ಒಳಗಾಗಿ ತೃಶೂರು ಜೈಲಿನಲ್ಲಿರುವ ಸಾವಿತ್ರಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧ ವಿಚಾರಣೆಗೆ ಒಳಪಡಿಸಲು ಬಾಡಿ ವಾರಂಟ್ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನು ಮರು ಪರಿಶೀಲಿಸುವಂತೆ ಬೆಳ್ತಂಗಡಿಯ ಎಸಿಜೆಎಂ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ವ್ಯಾಪ್ತಿಯ ವೇಣೂರು ಠಾಣೆ ಪೊಲೀಸರು ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣವನ್ನು ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್ಸಿ ಕೋರ್ಟ್ಗೆ ಹಿಂದಿರುಗಿಸಿತ್ತು. ಅಲ್ಲದೆ ಸರಕಾರದ ಮನವಿಯನ್ನು ಮರು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿತ್ತು. ಸಾವಿತ್ರಿ ಅಲಿಯಾಸ್ ಉಷಾ ಅಲಿಯಾಸ್ ರಜಿತಾ ಬಂಧನಕ್ಕೆ ಒಳಗಾಗಿದ್ದಾಳೆ. ಸದ್ಯ ಆಕೆ ಕೇರಳದ ತೃಶೂರ್ ಜೈಲಿನಲ್ಲಿದ್ದಾಳೆ. ೨೦೧೨ರಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ವಿವರಿಸಿದ್ದರು. ಈ ವೇಳೆ ನ್ಯಾಯಮೂರ್ತಿಗಳು ಸಾವಿತ್ರಿ ವಿರುದ್ಧ ಬಾಡಿ ವಾರಂಟ್ ಜಾರಿಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರಲ್ಲದೆ ಪ್ರಕರಣ ತನ್ನ ಮುಂದಿಲ್ಲ. ಪ್ರಕರಣದ ವಿಚಾರಣೆ ವ್ಯಾಪ್ತಿ ಹೊಂದಿರುವ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು.
ವಿಕ್ರಂ ಗೌಡನನ್ನು ಪ್ರೀತಿಸಿ ಮದುವೆಯಾಗಿದ್ದ ಸಾವಿತ್ರಿ!
ದಶಕಗಳ ಕಾಲ ನಕ್ಸಲ್ ತಂಡ ಮುನ್ನಡೆಸಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿರುವ ವಿಕ್ರಂ ಗೌಡನನ್ನು ಸಾವಿತ್ರಿ ಅಲಿಯಾಸ್ ಉಷಾ ಪ್ರೀತಿಸಿ ಕಾಡಿನಲ್ಲಿಯೇ ಮದುವೆಯಾಗಿದ್ದಳು. ಕ್ರಾಂತಿಕಾರಿ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಾವಿತ್ರಿಯನ್ನು ವಿವಾಹವಾದ ಬಳಿಕ ವಿಕ್ರಂ ಗೌಡ ಮತ್ತು ಸಾವಿತ್ರಿ ಹಲವು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ಒಟ್ಟಿಗೆ ತೊಡಗಿಸಿಕೊಂಡಿದ್ದರು. ೧೫ ವರ್ಷ ಸಾವಿತ್ರಿ-ವಿಕ್ರಂ ಜತೆಯಾಗಿದ್ದರೂ ಮಕ್ಕಳಾಗದಂತೆ ಎಚ್ಚರ ವಹಿಸಿದ್ದರು. ಕಬಿನಿ ದಳ ೨ರ ನಾಯಕ ವಿಕ್ರಂ ಗೌಡನನ್ನು ಶರಣಾಗುವ ನಿಟ್ಟಿನಲ್ಲಿ ಮನವೊಲಿಸಿದ್ದು ಒಪ್ಪದಿದ್ದಾಗ ಸಾವಿತ್ರಿ ಮತ್ತು ವಿಕ್ರಂ ಪರಸ್ಪರ ದೂರವಾಗಿದ್ದರು. ನಂತರ ಸಾವಿತ್ರಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ನೇತೃತ್ವದ ಕಬಿನಿ ದಳಂ ಸೇರಿಕೊಂಡಿದ್ದಳು. ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ತಂಡ ಸೇರಿದ್ದ ಸಾವಿತ್ರಿ ಕೇರಳದ ವಯನಾಡು ಕೋಯಿಕ್ಕೋಡಿನಲ್ಲಿ ಕಬಿನಿ ದಳದ ಕಮಾಂಡರ್ ಆಗಿದ್ದಳು. ಕಾರಲ್ಲಿ ಬಿ.ಜಿ.ಕೃಷ್ಣಮೂರ್ತಿ ಜತೆ ತೆರಳುತ್ತಿದ್ದಾಗ ಕರ್ನಾಟಕ-ಕೇರಳ ಗಡಿಯಲ್ಲಿ ೨೦೨೧ರ ನ.೯ರಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ಇಬ್ಬರೂ ಕೇರಳದ ತ್ರಿಶೂರಿನ ವಿಯ್ಯುರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅಲ್ಲಿಂದ ಇದೀಗ ಬೆಳ್ತಂಗಡಿಗೆ ಕರೆ ತರಲಾಗಿದೆ.