

ಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಸನ್ನಿಧಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ 6 ಆಡಿ ಎತ್ತರದ ಗೋಪಾಲಕೃಷ್ಣ ವಿಗ್ರಹವನ್ನು ಕಾರ್ಕಳದಿಂದ ತೆಕ್ಕಾರಿನವರೆಗೆ ಪುರಪ್ರವೇಶ ಮೆರವಣಿಗೆ ಮೂಲಕ ಸಾಗಿಸಲಾಯಿತು.
ಎ. 3ರಂದು ಸಂಜೆ ಗೋಪಾಲಕೃಷ್ಣ ದೇವರ ಮೂರ್ತಿಯು ಕಾರ್ಕಳದಿಂದ ಹೊರಟು ಅಳದಂಗಡಿಯ ಸತ್ಯದೇವತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಗುರುವಾಯನಕೆರೆಯಲ್ಲಿರುವ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿಯವರ ಮನೆ “ನವಶಕ್ತಿ”ಯಲ್ಲಿರಿಸಲಾಗಿತ್ತು. ಇದರ ಅಂಗವಾಗಿ ರಾತ್ರಿ ನಾಳ ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಕೃಷ್ಣ ಲೀಲಾಮೃತ ಕಥಾನಕ ಆಡಿ ತೋರಿಸಲಾಗಿತ್ತು.
ಏ. 5ರಂದು ಬೆಳಗ್ಗೆ ವೈದಿಕ ವಿಧಿ ವಿಧಾನಗಳೊಂದಿಗೆ ಗೋಪಾಲಕೃಷ್ಣ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿ ಶಶಿಧರ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಭವ್ಯ ಮೆರವಣಿಗೆ ಮೂಲಕ ತೆಕ್ಕಾರಿನಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೊರಟಿದೆ. ಮೆರವಣಿಗೆ ಶಾಸಕ ಹರೀಶ್ ಪೂಂಜ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.