ಪ್ರವೀಣ್ ಎಂ. ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ‌ ಘೋಷಣೆ: ಅಪರಾಧ ಪತ್ತೆ ವಿಭಾಗದಲ್ಲಿ ಅಗ್ರಮಾನ್ಯ ಸೇವೆ

0

ಬೆಳ್ತಂಗಡಿ: ಅಪರಾಧ ಪತ್ತೆ ವಿಭಾಗದಲ್ಲಿ ಮಹತ್ವಪೂರ್ಣ ಸೇವೆ ಸಲ್ಲಿಸಿರುವ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮೂರುಗೋಳಿ ನಿವಾಸಿ, ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಪ್ರವೀಣ್ ಎಂ. ಇವರಿಗೆ 2024ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆಯಾಗಿದೆ.

ಮೂರುಗೋಳಿ ನಿವಾಸಿ ಅಣ್ಣು ದೇವಾಡಿಗ ಮತ್ತು ಬೇಬಿ ದೇವಾಡಿಗ ದಂಪತಿಯ ಪುತ್ರರಾಗಿರುವ ಪ್ರವೀಣ್ ಎಂ. ಅವರು 2002ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೊಂಡು ಬಂದರು ಠಾಣೆಯಲ್ಲಿ ಅಪರಾಧ ಪತ್ತೆ ವಿಭಾಗದಲ್ಲೇ ಕರ್ತವ್ಯಕ್ಕೆ ಹಾಜರಾಗಿದ್ದರು. ಬಳಿಕ ಬೆಳ್ತಂಗಡಿ ವೃತ್ತ ಕಚೇರಿಯಲ್ಲಿ ಅಪರಾಧ ಪತ್ತೆ ವಿಭಾಗದಲ್ಲಿ ಸೇವೆ ಸಲ್ಲಿಸಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಹೊಂದಿದ್ದರು. ಬಳಿಕ ಜಿಲ್ಲಾ ಅಪರಾಧ ಪತ್ತೆ ವಿಭಾಗ, ಬಂಟ್ವಾಳ ಡಿ.ವೈ.ಎಸ್‌.ಪಿ ಸ್ಕ್ವಾಡ್, ವೇಣೂರು ಠಾಣೆಯಲ್ಲೆಲ್ಲಾ ಸೇವೆ ಸಲ್ಲಿಸಿ ಪ್ರಸ್ತುತ ದ.ಕ ಜಿಲ್ಲಾ ಸೈಬರ್ ಕ್ರೈ ವಿಭಾಗದಲ್ಲಿ (ಸೆನ್) ಕರ್ತವ್ಯದಲ್ಲಿದ್ದಾರೆ.

ದ.ಕ ಜಿಲ್ಲೆಯಲ್ಲಿ ನಡೆದ ಗಂಭೀರ ಅಪರಾಧ ಪ್ರಕರಣಗಳಾದ ಶರತ್ ಮಡಿವಾಳ ಕೊಲೆ ಪ್ರಕರಣ, ಫರಂಗಿಪೇಟೆ ಡಬಲ್ ಮರ್ಡರ್, ಪ್ರವೀಣ್ ನೆಟ್ಟಾರು ಪ್ರಕರಣ, ಪುತ್ತೂರು ಗ್ರಾಮಾತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆ ಪ್ರಕರಣ, ವಗ್ಗ ಮನೆ ದರೋಡೆ ಪ್ರಕರಣ, ವಿಟ್ಲ ಬ್ಯಾಂಕ್ ಕಳ್ಳತನ ಪ್ರಕರಣ, ಬಂಟ್ವಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ದೇವಸ್ಥಾನ ಕಳವು ಪ್ರಕರಣ, ಇತ್ತೀಚೆಗೆ ವಿಟ್ಲ ನಾರ್ಶ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣ, ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ, ಬೆಳ್ತಂಗಡಿ ತಾಲೂಕಿನ ಬಂಗಾಡಿ ಜೈನ ಬಸದಿ ಕಳ್ಳತನ ಪ್ರಕರಣ, ಧರ್ಮಸ್ಥಳದ ರಸ್ತೆಯಲ್ಲಿ ದಿಡುಪೆಯ ವ್ಯಕ್ತಿಯನ್ನು ಕೊಲೆಮಾಡಿ ಬೆಂಕಿ ಇಟ್ಟು ಉರಿಸಿದ ಪ್ರಕರಣ, ಶಶೀಂದ್ರನ್ ಮರ್ಡರ್ ಪ್ರಮರಣ ಸೇರಿದಂತೆ ಇನ್ನೂ ಹಲವಾರು ದೇವಸ್ಥಾನ ಹಾಗೂ ಇತರ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಕೆಲಸ ಸಮಯ ಇವರು ಹೆಚ್ಚುವರಿ ಕರ್ತವ್ಯ ನಿಮಿತ್ತ ಎನ್‌.ಐ.ಎ ತಂಡದಲ್ಲೂ ಕೆಲಸ ಮಾಡಿದ್ದರು. ಇವರ ಈ ವಿಶೇಷ‌ ಸೇವೆಗಳನ್ನೆಲ್ಲ ಪರಿಗಣಿಸಿ ಇವರಿಗೆ ಸುಮಾರು 57 ನಗದು ಪುರಸ್ಕಾರ ಬಹುಮಾನ ಹಾಗೂ ಇತರ ಹಲವು ಪ್ರಶಸ್ತಿ ಲಭಿಸಿವೆ.

ಇದೀಗ ಇವರಿಗೆ ಘೊಷಣೆಯಾದ ಈ ಪ್ರಶಸ್ತಿಯನ್ನು ಏ. 2ರಂದು ನಡೆಯುವ ಪೊಲೀಸ್ ಧ್ವಜ ದಿನಚಾರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here