ಬೆಳಾಲು: ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ- ಅಳಿಯ ಮತ್ತು ಮೊಮ್ಮಗನ ಬಂಧನ

0

ಬೆಳ್ತಂಗಡಿ: ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ ಪೊಲೀಸರಿಗೆ ಆರಂಭದಲ್ಲೇ ಪರಿಚಯಸ್ಥರೇ ಕೊಲೆ ಮಾಡಿದ್ದಾರೆ ಅನ್ನೋ ಸುಳಿವು ಸಿಕ್ಕಿತ್ತು. ಇದೀಗ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮೊಬೈಲ್, ಸಿಸಿ ಕ್ಯಾಮರಾದ ದೃಶ್ಯಾವಳಿಗಳು ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಮಗಳ ಗಂಡ(ಅಳಿಯ) ರಾಘವೇಂದ್ರ ಕೆದಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರಳಿಕೃಷ್ಣ(20) ಎಂಬಾತನನ್ನು ಆ.24ರಂದು ಕಾಸರಗೋಡು ಮನೆಯಿಂದ ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಬಡೆಕ್ಕಿಲ್ಲಾಯರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕೆ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿ ರಾಘವೇಂದ್ರ ಕೆದಿಲಾಯ ತನ್ನ ಮಗ ಮುರಳಿಕೃಷ್ಣನ ಜೊತೆಗೆ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮನೆಗೆ ಕೊಲೆಗೆ ಪ್ಲಾನ್ ಮಾಡಿಕೊಂಡೇ ಬಂದಿದ್ದ ಅವರು, ಊಟ ಮಾಡಿದ ಬಳಿಕ ಕೊಲೆ ಮಾಡಿದ್ದಾರೆ. ಈ ಬಗ್ಗೆ ಮೊಮ್ಮಗ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24ರಂದು ಸಂಜೆ ಹಾಜರು ಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.ಹೆಚ್ಚಿನ ವಿಚಾರಣೆಗಾಗಿ ಆ.27ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.

ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ನಿವೃತ್ತ ಶಿಕ್ಷಕಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್‌ ಲಾಕರ್ ನಲ್ಲಿ ಇಟ್ಟಿದ್ದರು. ಇದೆ ಕಾರಣದಿಂದ ಬಾಲಕೃಷ್ಣ ಬಡೆಕ್ಕಿಲ್ಲಾಯ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20)ತಂದೆ ಕೋಪದಲ್ಲಿ ಕೊಲೆ ಮಾಡಲು ಯೋಜಿಸುತ್ತಾನೆ ಮಗ ಸೇರಿಕೊಂಡು ಕಾಸರಗೋಡಿನ ತಮ್ಮ ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿ ಅವರ ಸ್ಕೂಟರ್ ನಲ್ಲಿ ರಾಘವೇಂದ್ರ ಕೆದಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರಳಿಕೃಷ್ಣ ಮಂಗಳೂರಿಗೆ ಬಂದಿದ್ದಾರೆ.

ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದೇ ಸ್ಕೂಟರಿನಲ್ಲಿ ಅಪ್ಪ-ಮಗ ಬೆಳಾಲಿಗೆ ಬಾಲಕೃಷ್ಣ ಬಡೆಕ್ಕಿಲ್ಲಾಯ ಮನೆಗೆ ಬಂದಿದ್ದಾರೆ. ಅಳಿಯ ಮಗ ಬಂದ ಖುಷಿಗೆ ಪಾಪ ಬಾಲಕೃಷ್ಣ ಬಡೆಕ್ಕಿಲ್ಲಾಯ ಖುಷಿಯಿಂದ ಬಾಳೆಲೆಯಲ್ಲಿ ಊಟ ಬಡಿಸಿದ್ದಾರೆ. ಊಟ ಮಾಡಿ ಚಾಕುಡಿದ ಬಳಿಕ ತಂದಿದ್ದ ಆಯುಧದಿಂದ ಮೊಮ್ಮಗ ಮುರಳಿಕೃಷ್ಣ ಹಿಂಬದಿಯಿಂದ ಬಾಲಕೃಷ್ಣ ಬಡೆಕ್ಕಿಲ್ಲಾಯ ಕುತ್ತಿಗೆಗೆ ಕಡಿದಿದ್ದಾನೆ. ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ.ಬಳಿಕ ನಳ್ಳಿ ನೀರಿನ ಕೆಳಗೆ ಹಾಕಿದ್ದ ಹಾಸು ಕಲ್ಲನ್ನು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಕೊಲೆ ಮಾಡಿ ಸೀದಾ ಸ್ಕೂಟರ್ ನಲ್ಲಿಯೇ ಕಾಸರಗೋಡಿನ ಮನೆ ಸೇರಿದ್ದರು.

ಗಂಡ- ಮಗ ಸೇರಿ ಅಪ್ಪನನ್ನು ಕೊಲೆಮಾಡಿದ್ದು ಮಗಳು ವಿಜಯಲಕ್ಷ್ಮೀ ಅವರಿಗೆ ಗೊತ್ತಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ವಶಕ್ಕೆ ಪಡೆದ ಬಳಿಕ ಕೊಲೆ ಮಾಡಿದ ರಹಸ್ಯಗಳು ಗೊತ್ತಾಗಿದೆ ಎನ್ನಲಾಗಿದೆ.ಆರೋಪಿಗಳು ಬಾಲಕೃಷ್ಣ ಬಡೆಕ್ಕಿಲ್ಲಾಯರ ಕಿರಿಯ ಮಗ ಸುರೇಶ್ ಭಟ್ ರನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು ಹಾಗೂ ಬಾಲಕೃಷ್ಣ ಅವರ ಕೊಲೆ ಬಳಿಕ ಸುರೇಶ್ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಆದ್ರೆ ಬಾರದೆ ಇದ್ದಾಗ ಬಾಲಕೃಷ್ಣ ಭಟ್ ಅವರ 50 ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕನಾಗಿರುವ ಎಸ್‌.ಪಿ.ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಎಂಬವರು ಆ.20ರಂದು ಮಧ್ಯಾಹ್ನದ ಬಳಿಕ ಮನೆಯ ಆಡುಗೆ ಕೊನೆಯಲ್ಲಿರುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಅಂಗಳಕ್ಕೆ ಓಡಿ ಬಂದಿದ್ದು ಈ ವೇಳೆ ಕೂಡ ಕುತ್ತಿಗೆ, ಕೈಗೆ, ತಲೆಗೆ ದಾಳಿ ಮಾಡಿದ್ದು ಇದರಿಂದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಬಗ್ಗೆ ಕಿರಿಯ ಮಗ ಸುರೇಶ್ ಭಟ್ ಆ.20 ರಂದು ರಾತ್ರಿ ನೀಡಿದ ದೂರಿನ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ – ದಿ.ಲೀಲಾರವರಿಗೆ ಒಟ್ಟು ಮೂರು ಜನ ಮಕ್ಕಳು. ಮೊದಲ ಮಗ ಹರೀಶ್ ಭಟ್ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎರಡನೇ ಮಗಳು ವಿಜಯಲಕ್ಷ್ಮಿ(49) ಇವರನ್ನು 22 ವರ್ಷದ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಲ್ಲೇರಿಯಾದಲ್ಲಿ ಕೃಷಿ ಹಾಗೂ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ(53) ಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರಲ್ಲಿ ಕೊಲೆ ಆರೋಪಿ ಮೊದಲ ಮಗ ಮುರಳಿಕೃಷ್ಣ(20) ಹಾಗೂ ಇನ್ನೊಬ್ಬಾಕೆ ಮಗಳು. ಪಿಯುಸಿ ಓದುತ್ತಿದ್ದಾಳೆ.ಕಿರಿಯ ಮಗ ಸುರೇಶ್ ಭಟ್(48) ಅವಿವಾಹಿತನಾಗಿದ್ದು ಪುತ್ತೂರಿನಲ್ಲಿ ರಿಲಾಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದಿತ್ತು. ಆಗ ಶ್ವಾನ ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳದಲ್ಲಿ ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು. ಬಳಿಕ ಅಲ್ಲಿಂದ ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು. ಪೊಲೀಸ್ ಇಲಾಖೆಯ ಶ್ವಾನ ಬ್ರೇವ್ ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕೊಟ್ಟಿತ್ತು. ಕುಟುಂಬದೊಳಗಿನವರೇ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿತ್ತು. ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ನಂಬ‌ರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.ಬಡೆಕ್ಕಿಲ್ಲಾಯ ಕೊಲೆ ಬಳಿಕ ಬೆಳಾಲು ಮನೆಗೆ ಆ.21ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಅಳಿಯ ರಾಘವೇಂದ್ರ ಕೆದಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆದಿಲಾಯನ ಮಗ ಮುರಳಿಕೃಷ್ಣ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆದಿಲಾಯ ನೋಡುತ್ತಾ ನಿಂತಿದ್ದ. ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್‌ ಪೇಪ‌ರ್ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಮುರಳಿಕೃಷ್ಣ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈತ ಪಿಯುಸಿವರೆಗೆ ಕಾಲೇಜ್ ಹೋಗಿದ್ದು ಬಳಿಕ ಗೆಳೆಯರೊಂದಿಗೆ ತಿರುಗಿಗೊಂಡು ಹಾಗೂ ಮೋಜು ಮಸ್ತಿ ಮಾಡುತ್ತಿದ್ದ ಎನ್ನಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್‌ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸೆಕ್ಟರ್ -1 ಕಿಶೋರ್.ಪಿ, ಸಬ್ ಇನ್ಸೆಕ್ಟರ್ -2 ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here