ಉಜಿರೆ: ಬೃಹತ್ ಮರ ಬಿದ್ದು ಆಟೋ ಚಾಲಕ ಸಹಿತ ಇಬ್ಬರಿಗೆ ಗಂಭೀರ ಗಾಯ- ಮೂರು ವಾಹನಗಳು ಜಖಂ- ಪರಿಹಾರ ಕೊಡಲು ಇಲಾಖೆಗಳ ನಡುವೆ ಗೊಂದಲ, ಹಿಂದೇಟು- ಅರಣ್ಯ ಇಲಾಖೆ ಹೊಣೆಯೆಂದ ಶಾಸಕ ಹರೀಶ್ ಪೂಂಜ

0

ಉಜಿರೆ: ರಸ್ತೆ ಬದಿಯ ಅಪಾಯಕಾರಿ ಬೃಹತ್ ಮರಗಳು ಉಜಿರೆ ಆಸುಪಾಸಿನಲ್ಲಿ ಆಗಾಗ ಜೀವ ಹಿಂಡುತ್ತಿವೆ. ಇಲಾಖೆಗಳ ನಡುವಿನ ಮೇಲಾಟದಿಂದಾಗಿ ಪ್ರತಿಬಾರಿ ಅಪಘಡ ಸಂಭವಿಸಿದ ನಂತರವಷ್ಟೇ ಎಚ್ಚೆತ್ತುಕೊಳ್ಳುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಂಥಹ ಒಂದು ಘಟನೆ ಜೂ.24ರಂದು ನಡೆದಿದ್ದು, ಹಲವು ಕುಟುಂಬಗಳನ್ನು ದಿಕ್ಕೆಡಿಸಿದೆ. ಉಜಿರೆಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಜೂ.24ರ ಮಧ್ಯಾಹ್ನ 1.30ರ ವೇಳೆ ಬೃಹತ್ ಮರ ಧರೆಗುರುಳಿದ ಪರಿಣಾಮ, ಒಂದು ಆಟೋ ರಿಕ್ಷಾ ನಜ್ಜುಗುಜ್ಜಾದರೆ, ಶಿರ್ಲಾಲಿನ ಹರೀಶ್ ಪೂಜಾರಿಯವರ ನಿಲ್ಲಿಸಿದ್ದ ಕಾರಿನ ಮುಂಭಾಗ ಜಖಂಗೊಂಡಿದೆ. ಚಾರ್ಮಾಡಿಯ ವಿಕ್ರಂರವರ ಓಮ್ನಿ ವಾಹನವೂ ಜಖಂಗೊಂಡಿದೆ.

ಉಜಿರೆಯ ಹಳೆಪೇಟೆಯ ರತ್ನಾಕರ್ ಎಂಬವರ ಚಲಿಸುತ್ತಿದ್ದ ಆಟೋದ ಮೇಲೆಯೇ ಮರ ಬಿದ್ದ ಪರಿಣಾಮ ರತ್ನಾಕರ್ ಗಂಭೀರ ಗಾಯಗೊಂಡಿದ್ದಾರೆ. ಆಟೋದಲ್ಲಿದ್ದ ಪ್ರಯಾಣಿಕ ಶಾಂತಪ್ಪರಿಗೂ ಗಾಯಗಳಾಗಿವೆ. ಉಜಿರೆಯ ಗ್ರಾಮ ಪಂಚಾಯತ್‌ನವರು, ಸ್ಥಳೀಯರು, ಹೆದ್ದಾರಿ ಕಾಮಗಾರಿ ಕಂಪನಿಯವರು ಆಗಮಿಸಿ ಆಟೋದಲ್ಲಿದ್ದವರನ್ನು ರಕ್ಷಿಸಿದ್ದು, ಮರ ತೆರವುಗೊಳಿಸಿದರು.

ಪುಟ್ಟ ಮಗು ಪಾರು!: ಚಾರ್ಮಾಡಿಯ ವಿಕ್ರಂ ಪತ್ನಿ, ಪುಟ್ಟ ಮಗುವಿನೊಂದಿಗೆ ಉಜಿರೆಗೆ ಬಂದಿದ್ದು, ಮರ ಬೀಳುವ ಕೆಲವೇ ಕ್ಷಣಗಳ ಮೊದಲು ಓಮ್ನಿ ನಿಲ್ಲಿಸಿ ಹೆಂಡತಿ ಮಗುವಿನ ಜೊತೆ ಮಾವಂತೂರು ರೆಸಿಡೆನ್ಶಿಯ ಕಡೆಗೆ ತೆರಳಿದ್ದರು. ಬಳಿಕ ಮರ ಬಿದ್ದದ್ದರಿಂದ ಈ ಮೂವರು ಬಚಾವಾಗಿದ್ದಾರೆ.

ಆಟೋ ಚಾಲಕರಿಂದ ಪ್ರತಿಭಟನೆ: ಮರ ಬಿದ್ದ ಸ್ಥಳದಲ್ಲಿ ಸಾರ್ವಜನಿಕರು, ರತ್ನಾಕರ್‌ರ ಸ್ನೇಹಿತರು, ಉಜಿರೆಯ ಆಟೋ ಚಾಲಕ -ಮಾಲಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಗಾಯಗೊಂಡವರಿಗೆ ಕೂಡಲೇ ಪರಿಹಾರ ಕೊಡಬೇಕೆಂದು ಆಗ್ರಹಿಸಿ, ಉಜಿರೆಯಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವರ ಮಾತಿಗೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಆಟೋ ಚಾಲಕ ಮಾಲಕರು, ಸ್ಥಳೀಯರು ನಜ್ಜುಗುಜ್ಜಾದ ಆಟೋವನ್ನು ರಸ್ತೆಯ ಮಧ್ಯಭಾಗದಲ್ಲಿ ನಿಲ್ಲಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ನ್ಯಾಯ ಬೇಕು, ಪರಿಹಾರ ನೀಡಬೇಕೆಂದು ಘೋಷಣೆ ಕೂಗಿದರು.

ಅರಣ್ಯ, ಹೆದ್ದಾರಿ ಇಲಾಖೆಯ ಮೇಲೆ ಜನಾಕ್ರೋಶ: ಉಜಿರೆಯಲ್ಲಿ ಬಿದ್ದ ಮರ ಅರಣ್ಯ ಇಲಾಖೆಗೆ ಸೇರಿದ್ದು ಅನ್ನುವ ಸುದ್ದಿ ಹರಡಿದ ಬೆನ್ನಲ್ಲೇ ಜನರು ಅರಣ್ಯ ಇಲಾಖೆಯವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಒಂದು ಮರದ ರೆಂಬೆ ಕತ್ತರಿಸಿದರೆ ಕಾನೂನು, ಕಾಯ್ದೆ ಅಂತ ಹೇಳುವವರು ಈಗೇನು ಹೇಳುತ್ತಾರೆ? ಈ ಅವಘಡಕ್ಕೆ ಆದ ತೊಂದರೆಗಳಿಗೆ ಅರಣ್ಯ ಇಲಾಖೆಯೇ ಹೊಣೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಹೆದ್ದಾರಿ ಇಲಾಖೆಯ ಬಗ್ಗೆಯೂ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಹಲವೆಡೆ ಹೆದ್ದಾರಿ ನಿರ್ಮಾಣದ ಕಾರ್ಯಗಳಿಂದಾಗಿಯೇ ಮರಗಳು ಬೀಳುವ ಹಂತ ತಲುಪಿವೆಯೆಂದು ಕಿಡಿ ಕಾರಿದರು. ಕೆಲಕಾಲ ಟ್ರಾಫಿಕ್ ಜಾಮ್: ಮರ ಬಿದ್ದ ನಂತರದ ಒಂದು ಗಂಟೆ ಉಜಿರೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ರಸ್ತೆ ತಡೆ ನಡೆಸಿದಾಗಲೂ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗಾಯಾಳುಗಳಿಗೆ ಪರಿಹಾರ ಕೊಡುವವರು ಯಾರು?: ಇದು ಸಾರ್ವಜನಿಕರ ಪ್ರಶ್ನೆ. ಹೆದ್ದಾರಿ ಕಾಮಗಾರಿ ವೇಳೆ ಮರಗಳ ತೆರವು ಮಾಡಬೇಕಿತ್ತು, ಹಾಗಾಗಿ ಹೆದ್ದಾರಿ ಇಲಾಖೆಯವರೇ ಜವಾಬ್ದಾರಿ ಎಂದು ಕೆಲವರು ಹೇಳಿದರೆ, ಇದಕ್ಕೆ ಅರಣ್ಯ ಇಲಾಖೆ ಹೊಣೆ, ಅವರು ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವು ಮಾಡಿಸಬೇಕಿತ್ತು ಅನ್ನುವ ವಾದವೂ ಇದೆ. ಇದರ ನಡುವೆ ಎರಡೂ ಇಲಾಖೆಯವರು ಗಾಯಾಳುಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ನುಣುಚಿಕೊಳ್ಳುತ್ತಿರುವಂತೆ ಕಾಣುತ್ತಿದೆ.

ಪರಿಹಾರ ಕೇಳಿ ರಸ್ತೆ ತಡೆ ನಡೆಸಿದ್ದ 15 ಮಂದಿ ವಿರುದ್ಧ ಕೇಸು ದಾಖಲು: ಉಜಿರೆಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ಎದುರಿನಲ್ಲಿ ಬೃಹತ್ ಮರ ಏಕಾಏಕಿ ಧರೆಗುರುಳಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ, ನಿಲ್ಲಿಸಿದ್ದ ಕಾರು ಮತ್ತು ಓಮ್ನಿ ಜಖಂಗೊಂಡ ಘಟನೆಯನ್ನು ಖಂಡಿಸಿ ಮತ್ತು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೂನ್ 24ರಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದ 15 ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಜೂನ್ 24ರಂದು ಉಜಿರೆಯ ಶ್ರೀ ದುರ್ಗಾ ಕಾಂಪ್ಲೆಕ್ಸ್ ಎದುರಿನ ಬೃಹತ್ ಮರ ಏಕಾಏಕಿ ಧರೆಗುರುಳಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ, ನಿಲ್ಲಿಸಿದ್ದ ಕಾರು ಮತ್ತು ಓಮ್ನಿ ಜಖಂಗೊಂಡಿತ್ತು. ಈ ಘಟನೆಯನ್ನು ಖಂಡಿಸಿ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಯೊಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂಬ ಆರೋಪದಡಿ ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 15 ಮಂದಿ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮಚಂದ್ರರವರು ಜೂ. 24ರಂದು ರೌಂಡ್ಸ್ ಕರ್ತವ್ಯದಲ್ಲಿದ್ದು ಚಾರ್ಮಾಡಿಯಿಂದ ಬೆಳ್ತಂಗಡಿ ಕಡೆಗೆ ಆಗಮಿಸುತ್ತಿದ್ದರು. ಈ ವೇಳೆ ಉಜಿರೆ ಪೇಟೆಯ ಮಾವಂತೂರು ಲಾಡ್ಜ್ ಎದುರುಗಡೆ ಕೆಲವು ಜನರು ಸೇರಿ ರಸ್ತೆ ತಡೆ ನಡೆಸಿ ಸಾರ್ವಜನಿಕ ಡಾಮಾರು ರಸ್ತೆಯ ಮಧ್ಯೆ ಕೂತು ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ತಡೆ ಒಡ್ಡುತ್ತಿದ್ದರು. ಈ ವೇಳೆ ರಾಮಚಂದ್ರರವರು ಸ್ಥಳಕ್ಕೆ ಹೋಗಿ ನೋಡಿದಾಗ ಪರಿಚಯ ಇರುವ ಪ್ರವೀಣ್ ಫೆನಾಂಡಿಸ್, ರಮೇಶ ಗಾಂಧಿನಗರ, ಶೀನ ಗಾಂಧಿನಗರ, ಇಕ್ಬಾಲ್ ಅತ್ತಾಜೆ, ಸಂತೋಷ್ ಉಜಿರೆ, ಉಮೇಶ ಆಚಾರ್ಯ, ಅಣ್ಣು ಗಾಂಧಿನಗರ, ಸುಜನ್ ಪಜಿರಡ್ಕ, ಬಾಬು ಗಾಂಧಿನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿನಗರ, ಗಣೇಶ ಬಡೆಕೊಟ್ಟು, ಉಮರ್ ಟಿ.ಬಿ. ಕ್ರಾಸ್, ರಂಜನ್ ಗಾಂಧಿನಗರ ಮತ್ತು ಇತರರು ಸ್ಥಳದಲ್ಲಿ ಸೇರಿ ಮಾವಂತೂರು ಲಾಡ್ಜ್ ಎದುರು ಪಾರ್ಕ್ ಮಾಡಿದ್ದ ಅಟೋರಿಕ್ಷಾ ಒಂದರ ಮೇಲೆ ಮರಬಿದ್ದು ಅಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆ ಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೈವೇ, ಅರಣ್ಯ ಇಲಾಖೆ ಹೊಣೆ: ಕಳೆದ ವಾರದಲ್ಲಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದೆವು. ಅವರು ಪತ್ರ ಕೊಡುತ್ತೇವೆ, ತೆರವುಗೊಳಿಸುತ್ತೇವೆ ಎಂದು ಹೇಳಿದ್ದರು. ಇನ್ನೊಂದು ಮರ ಇಲ್ಲಿ ಅಪಾಯದ ಮಟ್ಟದಲ್ಲಿ ಬಾಗಿ ನಿಂತಿದೆ. ಅದನ್ನು ತೆರವುಗೊಳಿಸುತ್ತಿದ್ದೇವೆ. ಈಗ ಮೂರು ವಾಹನಕ್ಕೆ ಹಾನಿಯಾಗಿದೆ, ಕೆಲವರಿಗೆ ಗಾಯವಾಗಿದೆ, ಇದಕ್ಕೆ ಪರಿಹಾರ ಯಾರು ಕೊಡುವುದು? ಇದರ ಹೊಣೆಯನ್ನು ಅರಣ್ಯ ಇಲಾಖೆ ಅಥವಾ ಹೈವೇಯವರು ಹೊರಬೇಕು.- ರವಿ ಬರಮೇಲು, ಉಪಾಧ್ಯಕ್ಷರು, ಗ್ರಾ.ಪಂ.ಉಜಿರೆ

ಮಂದಿ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮಚಂದ್ರರವರು ಜೂ. 24ರಂದು ರೌಂಡ್ಸ್ ಕರ್ತವ್ಯದಲ್ಲಿದ್ದು ಚಾರ್ಮಾಡಿಯಿಂದ ಬೆಳ್ತಂಗಡಿ ಕಡೆಗೆ ಆಗಮಿಸುತ್ತಿದ್ದರು. ಈ ವೇಳೆ ಉಜಿರೆ ಪೇಟೆಯ ಮಾವಂತೂರು ಲಾಡ್ಜ್ ಎದುರುಗಡೆ ಕೆಲವು ಜನರು ಸೇರಿ ರಸ್ತೆ ತಡೆ ನಡೆಸಿ ಸಾರ್ವಜನಿಕ ಡಾಮಾರು ರಸ್ತೆಯ ಮಧ್ಯೆ ಕೂತು ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ತಡೆ ಒಡ್ಡುತ್ತಿದ್ದರು. ಈ ವೇಳೆ ರಾಮಚಂದ್ರರವರು ಸ್ಥಳಕ್ಕೆ ಹೋಗಿ ನೋಡಿದಾಗ ಪರಿಚಯ ಇರುವ ಪ್ರವೀಣ್ ಫೆನಾಂಡಿಸ್, ರಮೇಶ ಗಾಂಧಿನಗರ, ಶೀನ ಗಾಂಧಿನಗರ, ಇಕ್ಬಾಲ್ ಅತ್ತಾಜೆ, ಸಂತೋಷ್ ಉಜಿರೆ, ಉಮೇಶ ಆಚಾರ್ಯ, ಅಣ್ಣು ಗಾಂಧಿನಗರ, ಸುಜನ್ ಪಜಿರಡ್ಕ, ಬಾಬು ಗಾಂಧಿನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿನಗರ, ಗಣೇಶ ಬಡೆಕೊಟ್ಟು, ಉಮರ್ ಟಿ.ಬಿ. ಕ್ರಾಸ್, ರಂಜನ್ ಗಾಂಧಿನಗರ ಮತ್ತು ಇತರರು ಸ್ಥಳದಲ್ಲಿ ಸೇರಿ ಮಾವಂತೂರು ಲಾಡ್ಜ್ ಎದುರು ಪಾರ್ಕ್ ಮಾಡಿದ್ದ ಅಟೋರಿಕ್ಷಾ ಒಂದರ ಮೇಲೆ ಮರಬಿದ್ದು ಅಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆ ಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮರ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ: ನಾವು ಉಜಿರೆಯಲ್ಲಿ ಹೆದ್ದಾರಿ ಕಾಮಗಾರಿ ಟೇಕ್ ಆಫ್ ಮಾಡಿಲ್ಲ. ಆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ, ತೆಗೆದುಕೊಂಡಿzವೆ. ಮರ ಆಕಸ್ಮಿಕವಾಗಿ ಬಿದ್ದಿದೆ. ಆ ನಂತರ ನಮ್ಮ ಇಲಾಖೆಯಿಂದ ತುರ್ತು ನೆರವು ಕಾರ್ಯ ಕೈಗೊಂಡಿದ್ದೇವೆ. ಅರಣ್ಯ ಇಲಾಖೆಯಿಂದ ಅನುಮತಿ ಬಂದ ನಂತರವೇ ಮರ ಕಡಿಯಬಹುದಾಗಿದೆ. ಅರಣ್ಯ ಇಲಾಖೆ ಕಡೆಯಿಂದ ನಮಗೆ ಅನುಮತಿ ಬಂದಿಲ್ಲ. ಜೂನ್ ೬ರಂದು ನಾವು ಅರಣ್ಯ ಇಲಾಖೆಗೆ ಮತ್ತೊಂದು ಪತ್ರ ಕಳುಹಿಸಿದ್ದೇವೆ. ಅರಣ್ಯ ಇಲಾಖೆಯಿಂದ ನಮಗೆ ಅನುಮತಿ ಬರಬೇಕಿದೆ, ಆ ಕಾರ್ಯ ಆಗುತ್ತಿದೆ. ನಮಗೆ ಮಡಂತ್ಯಾರಿನಿಂದ ಟಿ.ಬಿ. ಕ್ರಾಸ್‌ವರೆಗೆ ಮಾತ್ರ ಮರ ತೆರವಿಗೆ ಅನುಮತಿ ದೊರೆತಿದೆ, ಟಿ.ಬಿ. ಕ್ರಾಸ್‌ನಿಂದ ಚಾರ್ಮಾಡಿವರೆಗೂ ನಮಗೆ ಅನುಮತಿ ದೊರೆತಿಲ್ಲ. ಆದ್ದರಿಂದ ಜೂ.೨೪ರ ಘಟನೆಗೆ ಅರಣ್ಯ ಇಲಾಖೆಯೆ ಹೊಣೆಯಾಗುತ್ತದೆ.- ಮೋಹನ್, ವ್ಯವಸ್ಥಾಪಕ ಇಂಜಿನಿಯರ್, ಹೆದ್ದಾರಿ ಇಲಾಖೆ

ಅರಣ್ಯ ಇಲಾಖೆ ಕಾಯ್ದೆಗಳನ್ನು ಮುಂದಿಟ್ಟು ನಿರ್ಲಕ್ಷ್ಯ ಮಾಡುತ್ತಿದೆ: ಹರೀಶ್ ಪೂಂಜ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿಸಿ, ಆಸ್ಪತ್ರೆಯಲ್ಲಾಗುವ ಖರ್ಚುವೆಚ್ಚಗಳ ಆರ್ಥಿಕ ನೆರವು ನೀಡುತ್ತೇನೆಂದು ತಿಳಿಸಿದ್ದೇನೆ. ಆಟೋ ಸಂಪೂರ್ಣವಾಗಿ ಹಾನಿಯಾಗಿದೆ. ಅದಕ್ಕೂ ಸಹಕಾರ ಕೊಡುತ್ತೇನೆ. ನಾನು ಶಾಸಕನಾದ ನಂತರ ಅನೇಕ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆಸಿ ವಿದ್ಯುತ್ ಕಂಬಗಳು ಇರುವಲ್ಲಿ ಮರವನ್ನು ಮೊಟಕುಗೊಳಿಸುವುದು, ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಿzನೆ. ಆದರೆ ಅರಣ್ಯ ಇಲಾಖೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದೆ. ಏನಾದರೂ ಕೇಳಿದರೆ ಕಾಯ್ದೆಗಳ ಬಗ್ಗೆ ಹೇಳುತ್ತಾರೆಯೇ ಹೊರತು ಸಾರ್ವಜನಿಕರಿಗೆ ನೆರವಾಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇ ವರ್ಷದ ಹಿಂದೆ ಅಧಿಕೃತವಾಗಿ ಅರಣ್ಯ ಇಲಾಖೆಗೆ ಪತ್ರ ಕೊಟ್ಟಿದ್ದಾರೆ. ಅಪಾಯಕಾರಿ ಮರ ತೆರವಿನ ಬಗ್ಗೆಯೂ ಕೊಟ್ಟಿದ್ದಾರೆ. ಆ ಮರಗಳ ತೆರವು ಮಾಡದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಡಿಎಫ್‌ಒರಿಗೆ ತಿಳಿಸುತ್ತೇನೆ. – ಹರೀಶ್ ಪೂಂಜ, ಶಾಸಕ

ಎರಡು ಮನೆಗಳ ಆಧಾರ ಸ್ತಂಭಗಳೇ ಈಗ ಸ್ತಬ್ಧ: ದಿಕ್ಕೇ ತೋಚದಂತಾಗಿದ್ದಾರೆ ಗಾಯಾಳುಗಳ ಮನೆಯವರು * ಜೀವನ ನಿರ್ವಹಣೆಯದ್ದೇ ಚಿಂತೆ: ಉಜಿರೆಯಲ್ಲಿ 20 ವರ್ಷಕ್ಕೂ ಹೆಚ್ಚು ಕಾಲದಿಂದ ಆಟೋ ಓಡಿಸುತ್ತಾ ಜೀವನ ನಿರ್ವಹಿಸುತ್ತಿದ್ದವರು ರತ್ನಾಕರ್. ಇವರು ಹಳೆಪೇಟೆಯ ತಮ್ಮ ಮಾವನ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಜೀವನ ಮಾಡುತ್ತಿದ್ದಾರೆ. ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಪುತ್ರಿಯರ ಕಾಲೇಜು ಶುಲ್ಕಕ್ಕಾಗಿ ಸಾಲ ಮಾಡಿದ್ದು, ಅದರ ಕಂತು ಕಟ್ಟುವುದು, ಮನೆ ನಿರ್ವಹಣೆ, ಅಗತ್ಯತೆಗಳ ಪೂರೈಕೆ ಎಲ್ಲವೂ ಕೂಡ ಆಟೋದಿಂದ ಬರುವ ಆದಾಯದಿಂದಲೇ ಆಗಬೇಕಾಗಿದೆ. ಇವರ ಹೆಂಡತಿ ಅಕ್ಷರ ದಾಸೋಹದ ಕೆಲಸಕ್ಕೆ ಹೋಗುತ್ತಿದ್ದು ಈಗ ಮನೆಯ ಪರಿಸ್ಥಿತಿಯ ಬಗ್ಗೆ ಚಿಂತೆಗೀಡಾಗಿದ್ದಾರೆ. ಸಾಲ ಕಟ್ಟುವುದು ಹೇಗೆಂಬ ಚಿಂತೆಯಲ್ಲಿದ್ದಾರೆ.ಮತ್ತೊಬ್ಬ ಗಾಯಾಳು ಶಾಂತಪ್ಪ ಉಜಿರೆಯ ಎಣ್ಣೆಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ 45 ದಿನಗಳ ಕಾಲದ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಇವರಿಗೂ ಇಬ್ಬರು ಮಕ್ಕಳಿದ್ದು, ಅವರ ವಿಧ್ಯಾಭ್ಯಾಸಕ್ಕೆ ತಗುಲುವ ನಿತ್ಯ ಖರ್ಚು, ಮನೆಯ ನಿರ್ವಹಣೆ ಎಲ್ಲವೂ ಕೂಡ ಇವರ ದುಡಿಮೆಯಿಂದಲೇ ಆಗಬೇಕಿದೆ. ಇವರ ಹೆಂಡತಿ ಕೂಲಿ ಕೆಲಸಕ್ಕೆ ಹೋಗುವವರಾಗಿದ್ದು ಈಗ ಗಂಡನನ್ನು ನೋಡಿಕೊಳ್ಳಲು ರಜೆ ಹಾಕಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈ ಎರಡೂ ಕುಟುಂಬಗಳು ಮತ್ತು ಜಖಂಗೊಂಡ ವಾಹನಗಳ ಮಾಲೀಕರು ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಗಾಯಾಳುಗಳನ್ನು ಭೇಟಿಯಾದ ಶಾಸಕ ಪೂಂಜ: ಉಜಿರೆಯ ಮರಬಿದ್ದ ಘಟನೆಯಲ್ಲಿ ಗಾಯಗೊಂಡ ರತ್ನಾಕರ್ ಮತ್ತು ಶಾಂತಪ್ಪರನ್ನು ಜೂ.೨೫ರಂದು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಶಾಸಕ ಹರೀಶ್ ಪೂಂಜ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಉಜಿರೆಯ ಗ್ರಾಮ ಪಂಚಾಯತ್ ಅಧ್ಯಕ್ಷ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಬರೆಮೇಲು, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಉಜಿರೆ ಮಹಾ ಶಕ್ತಿಕೇಂದ್ರದ ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಉಜಿರೆ ಗ್ರಾ.ಪಂ.ಸದಸ್ಯೆ ಶಶಿಕಲಾ, ರವಿ ಚಕ್ಕಿತ್ತಾಯ, ಜಯಪ್ರಕಾಶ್ ಶೆಟ್ಟಿ ಜೊತೆಗಿದ್ದರು.

ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ: ಉಜಿರೆಯಲ್ಲಿ ಮರ ಬಿದ್ದು ಗಾಯಗೊಂಡ ರತ್ನಾಕರ್ ಮತ್ತು ಶಾಂತಪ್ಪರನ್ನು ಘಟನೆ ನಡೆದ ದಿನವೇ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಕಾಂಗ್ರೆಸ್ ಮುಖಂಡ ಪ್ರವೀಣ್ ಫೆರ್ನಾಂಡಿಸ್ ಜೊತೆಗಿದ್ದರು.

ಮುಂದಿನ ದುಡಿಮೆಯ ಚಿಂತೆ: ಮರ ಬಿದ್ದ ಅವಘಡದಲ್ಲಿ ಭುಜಕ್ಕೆ, ತಲೆ, ಕೈ, ಕಾಲುಗಳಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಮ್ಮ ಮನೆಯಲ್ಲಿ ನಾನು- ನನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಾನು ರಿಕ್ಷಾದಲ್ಲಿ ದುಡಿಯುವುದರಿಂದ ಜೀವನ ಸಾಗುತ್ತಿತ್ತು. ಇನ್ನು ಮುಂದಿನ ದುಡಿಮೆಯ ಬಗ್ಗೆ ಚಿಂತೆಯಾಗಿದೆ. ಇಲ್ಲಿಗೆ ಶಾಸಕರು, ತಹಶೀಲ್ದಾರ್, ಅಧ್ಯಕ್ಷ ರಕ್ಷಿತ್ ಶಿವರಾಂ ಮತ್ತಿತ್ತರು ಆಗಮಿಸಿದ್ದಾರೆ. ಒಂದಷ್ಟು ಭರವಸೆಯನ್ನು ಕೊಟ್ಟಿದ್ದಾರೆ ಹಾಗು ನೆರವಿನ ನಿರೀಕ್ಷೆಯಲ್ಲಿದ್ದೇವೆ. ರತ್ನಾಕರ್, ಆಟೋ ರಿಕ್ಷಾ ಚಾಲಕ -ಗಾಯಾಳು

ಸೂಕ್ತ ಪರಿಹಾರದ ನಿರೀಕ್ಷೆ: ಘಟನೆಗೆ ಜವಾಬ್ದಾರಿಯಾದ ಇಲಾಖೆ ಪರಿಹಾರ ಒದಗಿಸಬೇಕು. ಮರ ಕಡಿಯದಿದ್ದರೆ ನಾಳೆ ನಮ್ಮ ಪರಿಸ್ಥಿತಿಯೂ ಇದೇ ಆಗಲಿದೆ. ಗಾಯಗೊಂಡ ರಿಕ್ಷಾ ಚಾಲಕನ ಜೀವನ ಇದರಲ್ಲಿಯೇ ಅವಲಂಬಿತಗೊಂಡಿದೆ. ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿ ನಾವಿದ್ದೇವೆ.-ಉಮೇಶ್, ಅಧ್ಯಕ್ಷರು, ರಿಕ್ಷಾ ಚಾಲಕ ಮಾಲಕರ ಸಂಘ, ಉಜಿರೆ

ಜೀವನ ಸಾಗಿಸುವುದು ಕಷ್ಟ: ಮನೆಯ ಪರಿಸ್ಥಿತಿ ಹದಗೆಟ್ಟಿದೆ. ಅವರಿಗೆ ಸದ್ಯದ ಮಟ್ಟಿಗೆ ಕೆಲಸಕ್ಕೆ ಹೋಗಲು ಕಷ್ಟ ಸಾಧ್ಯ, ನಾನು ಹಾಳೆತಟ್ಟೆ ತಯಾರಿಕಾ ಕೇಂದ್ರದಲ್ಲಿ ಕೆಲಸಕ್ಕೆ ಹೋಗುತ್ತಿzನೆ. ಇನ್ನು ಅವರನ್ನು ನೋಡಿಕೊಳ್ಳಲು ನಾನು ರಜಾ ಮಾಡಬೇಕಾಗುತ್ತದೆ. ಜೀವನ ಸಾಗಿಸಲು ಕಷ್ಟವಾಗುತ್ತದೆ ಎಂಬ ಚಿಂತೆಯಾಗುತ್ತಿದೆ.-ಚಂದ್ರಾವತಿ, ಶಾಂತಪ್ಪರವರ ಪತ್ನಿ

ಸಾಲ ಕಟ್ಟುವ ಚಿಂತೆ: ಅವರು ಬದುಕುಳಿದಿದ್ದು ನಮ್ಮ ಪುಣ್ಯ: ನಾನು ಬಿಸಿಯೂಟ ತಯಾರಿಕೆಗೆ ಶಾಲೆಗೆ ಕೆಲಸಕ್ಕೆ ಹೋಗುತ್ತಿzನೆ. ಮನೆಯ ಖರ್ಚು ಎಲ್ಲ ಅವರ ರಿಕ್ಷಾದ ದುಡಿಮೆಯಿಂದಲೇ ಅವಲಂಬಿತವಾಗಿತ್ತು. ಈಗ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಮುಂದಕ್ಕೆ ಅದರ ರಿಪೇರಿ ಕಷ್ಟಸಾಧ್ಯ. ಅಷ್ಟು ದೊಡ್ಡ ಮರ ಬಿದ್ದರೂ ಪ್ರಾಣಾಪಾಯ ಸಂಭವಿಸದೆ ಇರುವುದು ನಮ್ಮ ಪುಣ್ಯ. ನನಗೆ ೩,೬೦೦ ರೂ. ಸಂಬಳ ಸಿಗುತ್ತದೆ. ಅದರಲ್ಲಿಯೇ ಅವರು ಗುಣಮುಖವಾಗುವವರೆಗಿನ ಜೀವನ ಸಾಗಬೇಕಿದೆ. ಯಾವ ಇಲಾಖೆಯವರು ನೆರವಾಗುತ್ತಾರೆ ಎಂಬ ನಿರೀಕ್ಷೆಯಲ್ಲಿzವೆ. ಮಕ್ಕಳ ವಿದ್ಯಾಭ್ಯಾಸಕಾಗಿ ೫೦,೦೦೦ ರೂ. ಸಾಲ ತೆಗೆದುಕೊಂಡಿzನೆ. ಹಣ ಮರುಪಾವತಿ ಮಾಡುವುದು ಎಂಬ ಚಿಂತೆಯಲ್ಲಿದ್ದೇವೆ. -ವಸಂತಿ, ರತ್ನಾಕರ್‌ರ ಪತ್ನಿ

ಸುದ್ದಿ ನ್ಯೂಸ್ ವರದಿ ಬೆನ್ನಲ್ಲೇ ಅಧಿಕಾರಿಗಳಿಂದ ಅಪಾಯಕಾರಿ ಮರ ತೆರವು: ಉಜಿರೆಯ ಮರಬಿದ್ದ ಅವಘಡದ ನಂತರ ಮತ್ತೆಷ್ಟು ಅಪಾಯಕಾರಿ ಮರಗಳಿವೆ ಎಂಬ ಬಗ್ಗೆ ಸುದ್ದಿ ನ್ಯೂಸ್ ಜೂ.೨೫ರಂದು ವಿಸ್ತತ ವರದಿ ಮಾಡಿತ್ತು. ಉಜಿರೆ ಪೇಟೆಯಿಂದ ಬೆಳ್ತಂಗಡಿ ಬರುವ ಮಾರ್ಗದಲ್ಲಿ ಈಗಾಗಲೇ ಹೆದ್ದಾರಿ ಇಲಾಖೆಯವರು ಗುರುತು ಹಾಕಿರುವ ಕೆಲ ಮರಗಳು ಅಪಾಯಕಾರಿಯಾಗಿ ರಸ್ತೆಗೆ ಬಾಗಿಕೊಂಡಿವೆ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು, ಇಲ್ಲವೆ, ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ವರದಿ ಮಾಡಿದ ಬೆನ್ನಲ್ಲೇ ಜೂ.೨೬ರಂದು ಉಜಿರೆ ಗ್ರಾಮ ಪಂಚಾಯತ್, ಅರಣ್ಯ ಇಲಾಖೆ, ಹೆದ್ದಾರಿ ಇಲಾಖೆಯ ಸಹಭಾಗಿತ್ವದಲ್ಲಿ ಹಲವು ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಹಲವು ಮರಗಳನ್ನು ತೆರವುಗೊಳಿಸಲಾಗಿದೆ.

ಮೆಸ್ಕಾಂ,ಅರಣ್ಯ ಇಲಾಖೆಯ ಅಧಿಕಾರಿಗಳಿಂದ ವೀಕ್ಷಣೆ: ಉಜಿರೆಯಲ್ಲಿ ಮರ ಬಿದ್ದು ಅವಘಡ ನಡೆದ ಮರುದಿನ (ಜೂ.25) ಮೆಸ್ಕಾಂನ ಎಇಇ ಕ್ಲೆಮೆಂಟ್, ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿ.ಪಿ. ಜೈನ್ ಕಂಪನಿಯ ಇಂಜಿನಿಯರ್ ನರೇಂದ್ರ ನೀಲಂ ಹಲವು ಅಪಾಯಕಾರಿ ಮರಗಳನ್ನು ವೀಕ್ಷಿಸಿದರು.

110 ಅಪಾಯಕಾರಿ ಮರಗಳ ಕುರಿತು ಅರಣ್ಯ ಇಲಾಖೆಗೆ ಮೆಸ್ಕಾಂ ಪತ್ರ: ಮೆಸ್ಕಾಂ ಕೂಡ ಅಪಾಯಕಾರಿ ಮರಗಳನ್ನು ಗುರುತಿಸಿದ್ದು, ಈ ಪ್ರಕಾರ ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿ ೧೫ ಮರ, ಉಜಿರೆಯ ಭಾಗದಲ್ಲಿ 40 ಮರ, ಸೋಮಂತಡ್ಕ -ಮುಂಡಾಜೆ ಭಾಗದಲ್ಲಿ 45, ಮಡಂತ್ಯಾರ್ ಭಾಗದಲ್ಲಿ 10ರಷ್ಟು ಮರಗಳನ್ನು ಅಪಾಯಕಾರಿಯೆಂದು ಗುರುತಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಗೂ ಮೆಸ್ಕಾಂ ಪತ್ರ ಬರೆದಿದೆ.

ಮರ ತೆರವಿಗೆ ಸಿಗದ ಅನುಮತಿ: ಹೆದ್ದಾರಿ ಇಲಾಖೆಗೆ ಅರಣ್ಯ ಇಲಾಖೆಯಿಂದ ಮರ ತೆರವಿಗೆ ಅನುಮತಿ ದೊರೆತಿಲ್ಲ. ಮಡಂತ್ಯಾರ್‌ನಿಂದ ಟಿ.ಬಿ. ಕ್ರಾಸ್‌ವರೆಗೆ ಅನುಮತಿ ಪಡೆದಿದ್ದು, ನಂತರ ಅನುಮತಿ ನೀಡುವಂತೆ ಪತ್ರ ಬರೆದಿದ್ದರೂ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ಜೂನ್ 15ರಂದು ಪತ್ರ ಅರಣ್ಯ ಇಲಾಖೆಗೆ ತಲುಪಿದೆ, ಅದನ್ನು ಸರಿಯಾಗಿ ಗಮನಿಸಿ ಅನುಮತಿ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು ಎಂಬ ಮಾಹಿತಿಯೂ ಇದೆ.

ಉಜಿರೆಯಲ್ಲಿ ಜನಸಂಚಾರವೇ ಕಷ್ಟ: ಉಜಿರೆಯ ಜನತೆಗೆ ಒಂದು ಕಡೆ ರಸ್ತೆ ಕಾಮಗಾರಿಯಿಂದಾಗಿ ಕೆಸರುಮಯ ರಸ್ತೆಗಳಲ್ಲಿ ಓಡಾಡುವ ಪರಿಸ್ಥಿತಿ. ಮತ್ತೊಂದು ಕಡೆ ರಸ್ತೆಗೆ ಬಾಗಿರುವ ಮರಗಳನ್ನು ನೋಡಿ ಭಯದಲ್ಲೇ ಓಡಾಡುವ ಸ್ಥಿತಿ. ಇನ್ನೊಂದೆಡೆ, ಪ್ರತಿವರ್ಷದಂತೆ ಈ ವರ್ಷವೂ ಉಜಿರೆಯ ಜನಾರ್ದನ ಸ್ವಾಮಿ ಶಾಲೆಯ ಮುಂಭಾಗ ರಸ್ತೆಯಲ್ಲೇ ನೀರು ಹಳ್ಳದಂತೆ ಹರಿಯುತ್ತಿದ್ದು ಇಲ್ಲಿ ಜನರು ನಡೆದಾಡಲು ಕಷ್ಟಪಡುತ್ತಿದ್ದಾರೆ.

ನಾವು ಮಾರ್ಗದಲ್ಲಿ ಕುಳಿತುಕೊಳ್ಳುವುದು ಗ್ಯಾರಂಟಿ: ಉಜಿರೆಯಲ್ಲಿ ಇಂತಹ ಹಲವು ಅಪಾಯಕಾರಿ ಮರಗಳಿವೆ, ಹೈವೇ ಕೆಲಸ ಕಾಮಗಾರಿಯಲ್ಲಿದ್ದು, ಇದನ್ನು ಕಡಿಯದೆ ಬಿಟ್ಟದ್ದು ತಪ್ಪು. ಎಲ್ಲ ಅನಾಹುತಗಳು ಉಜಿರೆಯಲ್ಲಿ ನಡೆಯುತ್ತಿವೆ. ಇಲ್ಲಿಯ ಮಾರ್ಗದಲ್ಲಿ ಚಲಿಸುವಾಗ ಮರ ಬಿದ್ದು ಮತ್ತೆ ಅನಾಹುತವಾಗುವ ಭೀತಿಯಿದೆ. ರೇಂಜರ್ ಬಳಿ ಮಾತನಾಡುವಾಗ ಇದನ್ನು ತೆರವುಗೊಳಿಸಬೇಕಾಗಿ ಎನ್.ಎಚ್.ನವರಿಗೆ ಪತ್ರ ಕೊಟ್ಟಿದೇವೆ ಎಂದು ಹೇಳಿದ್ದಾರೆ. ಇದಕ್ಕೆ ಪರಿಹಾರ ಕೊಡದಿದ್ದರೆ ನಾವು ಮಾರ್ಗದಲ್ಲಿ ಕುಳಿತುಕೊಳ್ಳುವುದು ಗ್ಯಾರಂಟಿ. -ಪ್ರವೀಣ್ ಫರ್ನಾಂಡಿಸ್, ಉದ್ಯಮಿ

ಮತ್ತಷ್ಟು ಮರಗಳ ತೆರವು: ಮಳೆ ಬಂದು ಅದರ ಮಣ್ಣು ಹೋಗಿ ಮರ ಬಿದ್ದಿದೆ. ಗ್ರಾ.ಪಂ ಹಾಗೂ ಸಾರ್ವಜನಿಕರು ಸೇರಿ ಉಜಿರೆಯಲ್ಲಿ ಬಿದ್ದ ಮರ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಅಪಾಯದ ಹಂತದಲ್ಲಿ ಕೆಲವು ಮರಗಳಿದ್ದು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಜೊತೆಗೂಡಿ ಶೀಘ್ರವಾಗಿ ಮರವನ್ನು ತೆರವುಗೊಳಿಸುತ್ತೇವೆ.-ಉಷಾ ಕಿರಣ್ ಕಾರಂತ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ

ಹೈವೇ, ಅರಣ್ಯ ಇಲಾಖೆ ಹೊಣೆ: ಕಳೆದ ವಾರದಲ್ಲಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದೆವು. ಅವರು ಪತ್ರ ಕೊಡುತ್ತೇವೆ, ತೆರವುಗೊಳಿಸುತ್ತೇವೆ ಎಂದು ಹೇಳಿದ್ದರು. ಇನ್ನೊಂದು ಮರ ಇಲ್ಲಿ ಅಪಾಯದ ಮಟ್ಟದಲ್ಲಿ ಬಾಗಿ ನಿಂತಿದೆ. ಅದನ್ನು ತೆರವುಗೊಳಿಸುತ್ತಿದ್ದೇವೆ. ಈಗ ಮೂರು ವಾಹನಕ್ಕೆ ಹಾನಿಯಾಗಿದೆ, ಕೆಲವರಿಗೆ ಗಾಯವಾಗಿದೆ, ಇದಕ್ಕೆ ಪರಿಹಾರ ಯಾರು ಕೊಡುವುದು? ಇದರ ಹೊಣೆಯನ್ನು ಅರಣ್ಯ ಇಲಾಖೆ ಅಥವಾ ಹೈವೇಯವರು ಹೊರಬೇಕು.-ರವಿ ಬರಮೇಲು, ಉಪಾಧ್ಯಕ್ಷರು, ಗ್ರಾ.ಪಂ.ಉಜಿರೆ

LEAVE A REPLY

Please enter your comment!
Please enter your name here