ಉಜಿರೆ: ಎಸ್.ಡಿ.ಎಂ ಪಾಲಿಟೆಕ್ನಿಕ್‌ನಲ್ಲಿ ಡಾ.ಬಿ.ಯಶೋವರ್ಮ ಸಂಸ್ಮರಣಾರ್ಥ ತಾಂತ್ರಿಕ ವಿಷಯಗಳ ವಿನಿಮಯ ಬಗ್ಗೆ ವಿಶೇಷ ಉಪನ್ಯಾಸ- ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಜಿಜ್ಞಾಸೆ ಮತ್ತು ಪ್ರಶ್ನಿಸುವ ಮನೋಭಾವ ಇರಬೇಕು: ಯೋಗೀಂದ್ರ ಮರವಂತೆ

0

ಉಜಿರೆ: ಆರ್ಯಭಟ, ಬ್ರಹ್ಮದತ್ತ, ಚರಕ, ಸುಶ್ರುತ ಮೊದಲಾದ ಭಾರತೀಯ ವಿಜ್ಞಾನಿಗಳು ಗಣಿತ ಮತ್ತು ಖಗೋಳಶಾಸ್ತ್ರದಲ್ಲಿ ಅನೇಕ ಸಂಶೋಧನೆ ನಡೆಸಿದ್ದಾರೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಜಿಜ್ಞಾಸೆ ಮತ್ತು ಪ್ರಶ್ನಿಸುವ ಮನೋಭಾವ ಇರಬೇಕು ಎಂದು ಯುನೈಟೆಡ್ ಕಿಂಗ್‌ಡಮ್‌ನ ವಿಮಾನಶಾಸ್ತ್ರ ತಜ್ಞ ಯೋಗೀಂದ್ರ ಮರವಂತೆ ಹೇಳಿದರು.

ಅವರು ಮಾ.22ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಪಾಲಿಟೆಕ್ನಿಕ್‌ನಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ದಿವಂಗತ ಡಾ. ಬಿ. ಯಶೋವರ್ಮ ಸಂಸ್ಮರಣಾರ್ಥ ಆಯೋಜಿಸಿದ “ತಾಂತ್ರಿಕ ವಿಷಯಗಳ ವಿನಿಮಯ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಗಣಿತದ ಬಗ್ಗೆ ಭಾರತೀಯರಿಗೆ ವಿಶೇಷ ಒಲವು, ಆಸಕ್ತಿ ಮತ್ತು ಪರಿಣತಿ ಇದೆ. ಉಪಗ್ರಹಗಳ ಉಡಾವಣೆ ಬಗ್ಗೆಯೂ ಭಾರತೀಯರು ವಿಶೇಷ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಯುವಜನತೆಯ ಸಂಖ್ಯೆ ಅಧಿಕವಾಗಿರುವುದರಿಂದ ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ತಂತ್ರಜ್ಞಾನದ ಬಳಕೆ ಹೆಚ್ಚಾದಷ್ಟು ಪ್ರಗತಿಯೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಸೋನಿಯಾಯಶೋವರ್ಮ ಮಾತನಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಲಾಗುತ್ತದೆ. ತಮಗೆ ಸಿಗುವ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಎಸ್.ಡಿ.ಎಂ. ಸಂಸ್ಕೃತಿಯ ರಾಯಭಾರಿಗಳಾಗಬೇಕು ಎಂದು ಸಲಹೆ ನೀಡಿದರು.

ಡಾ.ಬಿ.ಯಶೋವರ್ಮರು ನಡೆಸಿದ ಅನೇಕ ಹೊಸ ಪ್ರಯೋಗಗಳು ಇಂದು ಯಶಸ್ವಿಯಾಗುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಎಸ್.ಡಿ.ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದರು.

ಎಸ್.ಡಿ.ಎಮ್. ಕಾಲೇಜಿನ ಕನ್ನಡ ಉಪನ್ಯಾಸಕ ರಾಜಶೇಖರ ಹಳೇಮನೆ ಮತ್ತು ಕಾರ್ಯಕ್ರಮ ಸಂಯೋಜಕರಾದ ಚಂದ್ರನಾಥ್ ಜೈನ್ ಹಾಗೂ ಮಿಥುನ್ ಜೈನ್ ಉಪಸ್ಥಿತರಿದ್ದರು.

ಸಂಪತ್‌ಕುಮಾರ್ ಜೈನ್ ಸ್ವಾಗತಿಸಿದರು.ನಿಖಿಲ್ ಜೈನ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here