ಬೆಳ್ತಂಗಡಿ: ಚಾರಣ ಸ್ಥಳಗಳಿಗೆ ಪ್ರವೇಶ ನಿಷೇಧ

0

ಬೆಳ್ತಂಗಡಿ: ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಬೆಳ್ತಂಗಡಿ ವನ್ಯಜೀವಿ ವಲಯದ ಪ್ರಮುಖ ಚಾರಣ ಸ್ಥಳಗಳಿಗೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಚಾರಣವನ್ನು ನಿಷೇಧಿಸಲಾಗಿದೆ.

ಇಲಾಖೆಯ ಆದೇಶದ ಪ್ರಕಾರ ಐತಿಹಾಸಿಕ ಸ್ಥಳವಾದ ನಡ ಗ್ರಾಮದ ಗಡಾಯಿಕಲ್ಲು, ಮಲವಂತಿಗೆ ಗ್ರಾಮದ ನೇತ್ರಾವತಿ ಪೀಕ್ ಸೇರಿದಂತೆ ತಾಲೂಕಿನ ಯಾವುದೇ ಚಾರಣ ಪ್ರದೇಶಗಳಿಗೆ ತೆರಳಲು ಅವಕಾಶವಿರುವುದಿಲ್ಲ.ಇದು ಮುಂದಿನ ಆದೇಶದ ತನಕ ಜಾರಿ ಇರಲಿದೆ.

ಗಡಾಯಿಕಲ್ಲು, ನೇತ್ರಾವತಿ ಪೀಕ್ ಸೇರಿದಂತೆ ಮಲವಂತಿಗೆ ಗ್ರಾಮದ ಹಲವು ಸ್ಥಳಗಳಿಗೆ ರಾಜ್ಯದ ನಾನಾ ಭಾಗಗಳಿಂದ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.ಇದೀಗ ಚಾರಣ ನಡೆಸಲು ಅನುಕೂಲ ಸಮಯವೂ ಆಗಿದೆ.ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆ ಪ್ರವೇಶ ನಿಷೇಧ ಕ್ರಮ ಕೈಗೊಂಡಿದೆ.

ಕಾರಣವೇನು?- ಚಾರಣ ಪ್ರದೇಶಗಳು ಅರಣ್ಯ ಪರಿಸರದಲ್ಲಿ ಇವೆ.ಆಗಮಿಸುವ ಪ್ರವಾಸಿಗರು ಇಲ್ಲಿ ಧೂಮಪಾನ,ಅಡುಗೆ ಮಾಡುವುದು ಇತ್ಯಾದಿ ಸಾಮಾನ್ಯವಾಗಿದೆ ಬಳಿಕ ಬೆಂಕಿಯನ್ನು ಆರಿಸದೆ ಹಿಂದಿರುಗುವವರು ಇದ್ದಾರೆ.ಇಂತಹ ಸಂದರ್ಭ ಬೆಂಕಿ ಅರಣ್ಯ ಪ್ರದೇಶವನ್ನು ಪಸರಿಸಿ ಕಾಡ್ಗಿಚ್ಚು ಉಂಟಾಗುವ ಸಾಧ್ಯತೆ ಅಧಿಕವಿರುವ ಕಾರಣ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಕಳೆದ ವರ್ಷ ಈ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗಿ ಹೆಚ್ಚಿನ ಹಾನಿ ಉಂಟಾಗಿತ್ತು.ಕಾಡ್ಗಿಚ್ಚು ಹತೋಟಿಗೆ ತರಲು ಇಲಾಖೆ ಅಹರ್ನಿಶಿ ಕೆಲಸ ಮಾಡಿತ್ತು. ಆದರೂ ಅರಣ್ಯ ಪ್ರದೇಶದಲ್ಲಿ ಬೆಂಕಿ ಪಸರಿಸಿ ಗಿಡ,ಮರ, ಔಷಧೀಯ ಸಸ್ಯಗಳು ನಾಶವಾಗಿದ್ದು ಅಲ್ಲದೆ ವನ್ಯಜೀವಿಗಳಿಗೂ ತೊಂದರೆ ಉಂಟಾಗಿತ್ತು.ಇದರ ಜತೆ ಆಗಮಿಸುವ ಪ್ರವಾಸಿಗರು ಯಾವುದೇ ಕಡಿವಾಣ ಇಲ್ಲದೆ ಚಾರಣ ಪ್ರದೇಶದಲ್ಲಿರುವ ನದಿ, ಹಳ್ಳಗಳ ಪರಿಸರದಲ್ಲಿ ತ್ಯಾಜ್ಯವನ್ನು ಸುರಿಯುವುದರಿಂದ ನೀರು ಕಲುಷಿತಗೊಳ್ಳುತ್ತದೆ.ಈ ನೀರು ಹಲವರಿಗೆ ದಿನನಿತ್ಯದ ಉಪಯೋಗ,ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದು ಸಮಸ್ಯೆ ಅನುಭವಿಸುವ ಮವಂತಾಗುತ್ತದೆ.ಇದರಿಂದ ಪ್ರವೇಶ ನಿಷೇಧ ಆ ಪರಿಸರದ ಜನರಿಗೂ ಅನುಕೂಲ ನೀಡಲಿದೆ.

ಜಲಪಾತಗಳಿಗೂ ನಿಷೇಧ?-ತಾಲೂಕಿನ ಮಲವಂತಿಗೆ ಗ್ರಾಮದಲ್ಲಿ ಹಲವು ಜಲಪಾತಗಳಿದ್ದು ಇವಕ್ಕು ಪ್ರವಾಸಿಗರಿಗೆ ಪ್ರವೇಶ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ ಆದರೆ ಇದು ಇನ್ನೂ ಕೂಡ ಅಧಿಕೃತಗೊಂಡಿಲ್ಲ. ಜಲಪಾತ ಪ್ರದೇಶಗಳು ಅರಣ್ಯ ಪ್ರದೇಶದಲ್ಲಿದ್ದು ಇಲ್ಲೂ ಕೂಡ ಬೆಂಕಿ ಪ್ರಕರಣ,ನೀರು ಕಲುಷಿತಗೊಳ್ಳಲು ಪ್ರವಾಸಿಗರು ಕಾರಣರಾಗುತ್ತಿದ್ದಾರೆ.

ಆದಾಯಕ್ಕೆ ಹೊಡೆತ- ಚಾರಣ ಸ್ಥಳ, ಜಲಪಾತಗಳಿಗೆ ಪ್ರವೇಶ ದರವಿದ್ದು ಇವುಗಳನ್ನು ವೀಕ್ಷಿಸುವ ಸರಿಯಾದ ಸಮಯಕ್ಕೆ ನಿಷೇಧ ಹೇರಿರುವುದರಿಂದ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ.ಅಲ್ಲದೆ ಇಲ್ಲಿ ಕೆಲವೊಂದು ಅಧಿಕೃತ ಹಾಗೂ ಅನಧಿಕೃತ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರವಾಸಿಗರಿಗೆ ಕಡಿವಾಣ ಇರುವ ಕಾರಣ ಹೋಂ ಸ್ಟೇಗಳ ಆದಾಯ ಕುಂಠಿತಗೊಳ್ಳಲಿದೆ.ಇಲಾಖೆ ನಿರ್ಬಂಧ ಹೇರಿದ್ದರು ಅನ್ಯಮಾರ್ಗಗಳ ಮೂಲಕ ಪ್ರವಾಸಿಗರು ಆಗಮಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಈ ಬಗ್ಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here