ವೇಣೂರು: ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭ- ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಳ ಕಾರ್ಯಕ್ರಮಗಳು: ಡಾ|ಪದ್ಮಪ್ರಸಾದ ಅಜಿಲ

0

ವೇಣೂರು: 2024ರ ಫೆಬ್ರವರಿ 22ರಿಂದ ಮಾ.1ವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮೊದಲಾದ ಜನಮಂಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ|ಪದ್ಮಪ್ರಸಾದ ಅಜಿಲ ಹೇಳಿದರು.

ಸೆ.20ರಂದು ವೇಣೂರಿನ ಯಾತ್ರಿನಿವಾಸದಲ್ಲಿ ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜೈನಧರ್ಮದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ, ವಿಶ್ವಾಸವಿದ್ದು, ಅವುಗಳನ್ನು ತಿಳಿದು ಕೊಂಡು ನಮ್ಮ ದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಜೀವನ ಪಾವನವಾಗುತ್ತದೆ. ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಅವರು ಹೇಳಿದರು.
ಮಸ್ತಕಾಭಿಷೇಕ ಸಂದರ್ಭದಲ್ಲಿ ಎಲ್ಲರೂ ಕ್ಷಮಾ ಧರ್ಮದ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಕೊಡುಗೆಯಾಗಿ ನೀಡಿದ ಕೃತಕ ಕಾಲನ್ನು ಮಂಗಳೂರು ಬೊಂದೇಲ್‌ನ ಪಾರ್ವತಿ ಅವರಿಗೆ ನೀಡಲಾಯಿತು.

ಉತ್ತಮ ಕ್ಷಮಾ ಧರ್ಮದ ಬಗ್ಗೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಬೆಳ್ತಂಗಡಿಯ ಪ್ರೊ.ತ್ರಿಶಲಾ ಯು.ಮಲ್ಲ, ನಾವು ಮನೆಯಲ್ಲಿಯೂ, ಸಮಾಜದಲ್ಲಿಯೂ ಮನ, ವಚನ, ಕಾಯದಿಂದ ಶಾಂತಿ, ಸಮಾಧಾನದಿಂದ ವರ್ತಿಸಿದರೆ ನಮಗೂ, ಇತರರಿಗೂ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.ವಸ್ತುವಿನ ಸಹಜ ಗುಣವೇ ಧರ್ಮ ಆಗಿದ್ದು ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯ, ಮೊದಲಾದ ದಶಧರ್ಮಗಳು ನಮ್ಮ ಆತ್ಮನ ಸಹಜ ಗುಣಗಳಾಗಿವೆ. ಎಲ್ಲವೂ ಶ್ರೇಷ್ಠವಾದುದರಿಂದ ಉತ್ತಮ ಎಂಬ ವಿಶೇಷಣ ಬಳಸುತ್ತೇವೆ.ಮನ, ವಚನ, ಕಾಯದದಿಂದ ಕ್ರೋಧವನ್ನು ನಿಯಂತ್ರಿಸಿ ಕ್ಷಮಾ ಗುಣ ಬೆಳೆಸಿಕೊಳ್ಳಬಹುದು.ಕ್ರೋಧ ಅಳಿಸಿ, ಕ್ಷಮಾ ಗುಣವನ್ನು ಉಳಿಸಿ, ಬೆಳೆಸಬೇಕು. ಕ್ಷಮಾ ಗುಣ ವೀರರ ಲಕ್ಷಣವಾಗಿದೆ. ಬಾಹುಬಲಿ ಸಾಧಿಸಿ ತೋರಿಸಿದ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ಜೀವನಮೌಲ್ಯ ಸಾರ್ವಕಾಲಿಕ ಮಾನ್ಯತೆಯನ್ನು ಹೊಂದಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು. ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು.ಅಳದಂಗಡಿ ಮಿತ್ರಸೇನ ಜೈನ್ ಶಾಂತಿಮಂತ್ರ ಪಠಣ ಮಾಡಿದರು.ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯ್ಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಾಲೋಚನಾ ಸಭೆ: 2024ರ ಫೆಬ್ರವರ 22ರಿಂದ ಮಾ.1ರವರೆಗೆ ವೇಣೂರಿನಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆಗಳ ಬಗ್ಯೆ ಸರ್ಕಾರದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಸೆ.25ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here