ಅಭ್ಯರ್ಥಿ ಆಯ್ಕೆಗೆ ಬಿಜೆಪಿಯಿಂದ ವಿನೂತನ ಕ್ರಮ : ಆಂತರಿಕ ಮತದಾನದ ಮೂಲಕ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹ

0

ಬೆಳ್ತಂಗಡಿ: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೂ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ವೇಳಾಪಟ್ಟಿಯೂ ಪ್ರಕಟವಾಗಿದೆ.ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಬಿಡುಗಡೆಗೊಳಿಸಿದೆಯಾದರೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ವಿನೂತನ ಕ್ರಮ ಜಾರಿಗೊಳಿಸಿದ್ದು ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ ಸೇರಿದಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಆಂತರಿಕ ಅಭಿಪ್ರಾಯ ಸಂಗ್ರಹಣೆಗಾಗಿ ಮಾ.31ರಂದು ಮತದಾನ ನಡೆದಿದೆ.
ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಮಂಗಳೂರಿನಲ್ಲಿರುವ ಆರ್‌ಎಸ್‌ಎಸ್ ಸಂಘನಿಕೇತನದಲ್ಲಿ ಮತದಾನ ನಡೆದಿದೆ.ಶಾಸಕರು, ಪಕ್ಷದ ಮಂಡಲಗಳ ಅಧ್ಯಕ್ಷರ ಸಹಿತ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಮುಖರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

ಬಿಜೆಪಿ ಕೋರ್ ಕಮಿಟಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ ಪದಾಧಿಕಾರಿಗಳು, ವಿವಿಧ ಪ್ರಕೋಷ್ಠಗಳ ಅಧ್ಯಕ್ಷರು, ಯುವ, ರೈತ,ಮಹಿಳಾ,ಹಿಂದುಳಿದ ವರ್ಗಗಳ,ಎಸ್ಸಿ,ಎಸ್ಟಿ,ಅಲ್ಪಸಂಖ್ಯಾತ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಕ್ಷೇತ್ರದ ಶಕ್ತಿ ಕೇಂದ್ರಗಳ ಸಂಚಾಲಕರು ಮತ್ತು ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ, ಉಪಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು,ಚುನಾವಣಾ ಪ್ರಭಾರಿ, ವಿಸ್ತಾರಕರು, ಕಳೆದ ಐದು ವರ್ಷಗಳ ಅವಧಿಯ ಜಿ.ಪಂ.,ತಾ.ಪಂ.ಮಾಜಿ ಅಧ್ಯಕ್ಷರು, ಪಟ್ಟಣಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖರು ಮತದಾನದ ಮೂಲಕ ಪಕ್ಷದ ಅಭ್ಯರ್ಥಿಯ ಹೆಸರು ಸೂಚಿಸಲು ಅವಕಾಶ ಪಡೆದು,ಮತದಾನದಲ್ಲಿ ಭಾಗಿಯಾಗಿದ್ದರು.

ಹೀಗಿತ್ತು ಮತದಾನ: ಮತಪತ್ರಗಳ ಮಾದರಿಯಲ್ಲಿರುವ ಪತ್ರವನ್ನು ಪ್ರತಿ ಮತದಾರನಿಗೆ ಅಭಿಪ್ರಾಯ ನಮೂದಿಸಲು ನೀಡಲಾಗಿತ್ತು. ಪತ್ರದ ಮೇಲ್ಭಾಗದಲ್ಲಿ ಎರಡೂ ಬದಿಯಲ್ಲಿ ಪಕ್ಷದ ಚಿಹ್ನೆ, ಮಧ್ಯದಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ-2023 ಎಂದು ಶೀರ್ಷಿಕೆಯಿತ್ತು. ನಂತರ 1,2,3 ನಂಬ್ರ ನೀಡಲಾಗಿದ್ದು ಅಭ್ಯರ್ಥಿಗೆ ಸಂಬಂಧಿಸಿ ಪ್ರತಿ ಮತದಾರನಿಗೆ ಮೂವರ ಹೆಸರು ಬರೆಯಲು ಅವಕಾಶವಿದೆ. ಆದರೆ ಅಭಿಪ್ರಾಯ ಸಂಗ್ರಹ ಪತ್ರದಲ್ಲಿ ಯಾವುದೇ ಅಭ್ಯರ್ಥಿಯ ಹೆಸರು ಮೊದಲೇ ಮುದ್ರಿತವಾಗಿರುವುದಿಲ್ಲ. ಮತದಾರ ತಾನು ಬಯಸುವ ಯಾರ ಹೆಸರನ್ನೂ ಬರೆಯಬಹುದು ಇಲ್ಲವೇ ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ತನ್ನ ಅಭಿಪ್ರಾಯವನ್ನು ಬರೆಯಬಹುದು. ಪತ್ರದ ಕೆಳಬದಿಯಲ್ಲಿ ಮತದಾರನ ಹೆಸರು ಮತ್ತು ಫೋನ್ ನಂಬ್ರವನ್ನು ಕಡ್ಡಾಯವಾಗಿ ಬರೆಯಬೇಕು. ಹೆಸರು ಮತ್ತು ಮೊಬೈಲ್ ಸಂಖ್ಯೆ ಬರೆಯದವರ ಮತ ಪತ್ರವನ್ನು ತಿರಸ್ಕಾರ ಮಾಡಲಾಗುತ್ತದೆ.

ಜಿಲ್ಲೆಯ 8 ಕ್ಷೇತ್ರಗಳಿಗೆ ಸಂಬಂಧಿಸಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆದಿದೆ. ಬೆಳ್ತಂಗಡಿ ಕ್ಷೇತ್ರಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಶಾಸಕ ಅರುಣ್ ಕುಮಾರ್ ಮತ್ತು ಹಾಸನದ ಶಾಸಕ ಪ್ರೀತಂ ಗೌಡ ಅವರು ಮತದಾನ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸಿದ್ದರು. ಒಂದೊಂದು ಜಿಲ್ಲೆಗೆ ಸಚಿವರು ಹಾಗೂ ಮಾಜಿ ಸಚಿವರನ್ನು ಒಳಗೊಂಡ ಹಿರಿಯ ನಾಯಕರ ನೇತೃತ್ವದ ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಗಳ ನಾಯಕರು ಜಿಲ್ಲಾ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರದ ಮುಖಂಡರ ಪ್ರತ್ಯೇಕ ಸಭೆ ನಡೆಸಿ, ಮತದಾನ ಪ್ರಕ್ರಿಯೆ ಸುಗಮವಾಗುವಂತೆ ನೋಡಿಕೊಂಡಿದ್ದಾರೆ.

ಬೆಳ್ತಂಗಡಿಯಲ್ಲಿ ಒಂದೇ ಹೆಸರು!: ಬೆಳ್ತಂಗಡಿಯಿಂದ ಭಾಗಿಯಾದ ಮತದಾರರಲ್ಲಿ ಬಹುತೇಕರು ಶಾಸಕ ಹರೀಶ್ ಪೂಂಜರವರ ಹೆಸರು ಬರೆದಿದ್ದಾರೆ. ಇನ್ನುಳಿದ ಎರಡು ಹೆಸರುಗಳನ್ನು ಕೆಲವರು ಮಾತ್ರ ಬರೆದಿದ್ದು,ಅವುಗಳು ಯಾರದ್ದೆಂದು ತಿಳಿದುಬಂದಿಲ್ಲ.

ಬೆಂಗಳೂರಿನಲ್ಲಿ ಮತ ಪೆಟ್ಟಿಗೆಯಿಂದ ಅಭಿಪ್ರಾಯ ದಾಖಲಿಕರಣ: ಈ ಆಂತರಿಕ ಮತದಾನದ ಬಳಿಕ ಏ.1 ಮತ್ತು 2ರಂದು ಎರಡು ದಿನ ಎಲ್ಲ ಜಿಲ್ಲಾ ಘಟಕಗಳ ಕೋರ್ ಕಮಿಟಿಗಳ ಸದಸ್ಯರು ಬೆಂಗಳೂರಿಗೆ ತೆರಳಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ.ಬಳಿಕ ಎರಡು ದಿನ ಬೆಂಗಳೂರಿನಲ್ಲಿ ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಗಳ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸದಸ್ಯರೊಂದಿಗೆ ಚರ್ಚೆ ನಡೆಸಲಿದೆ.ಅಂತಿಮವಾಗಿ ರಾಜ್ಯ ಪ್ರಮುಖರಿಗೆ ಅಭಿಪ್ರಾಯ ಸಲ್ಲಿಕೆಯಾಗಿ ಎ.4ರ ಬಳಿಕ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ.ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here