ಕನ್ಯಾಡಿ: ಬ್ರಹ್ಮಾನಂದ ಶ್ರೀಗಳಿಗೆ ಯಲ್ಲಾಪುರದಲ್ಲಿ ಗುರುವಂದನೆ, ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ

0


ಕನ್ಯಾಡಿ: ಬದುಕಿನಲ್ಲಿ ಶಾಂತಿ, ನೆಮ್ಮದಿಗಳು ಪ್ರತಿಯೊಬ್ಬರ ಬಯಕೆಯಾಗಿದ್ದು ಇದನ್ನು ಪಡೆಯಲು ಮೌಲ್ಯಯುತ ಶಿಕ್ಷಣ ಅತ್ಯಗತ್ಯ. ಕಣ್ಣಿಗೆ ಕಾಣದ ಸುಖವನ್ನೇ ಪರಮಾನಂದವೆಂದು ಬಗೆಯುವ ಪ್ರತಿಯೊಬ್ಬರಿಗೂ ಯಶಸ್ಸು ಗಳಿಸಲು ಶ್ರದ್ಧೆ ಇದ್ದರೆ ಮಾತ್ರ ಭಗವಂತನ ಅನುಗ್ರಹ ದೊರಕಲು ಸಾಧ್ಯ ಎಂದು ಧರ್ಮಸ್ಥಳದ ನಿತ್ಯಾನಂದನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ನುಡಿದರು.

ಅವರು ಯಲ್ಲಾಪುರದ ಮಂಚಿಕೇರಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಡಿ.4ರಂದು ನಡೆದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಯಲ್ಲಾಮರ ಹಾಗೂ ಗುರುವಂದನಾ ಸಮಿತಿ ಮಂಚಿಕೇರಿ ಇವರು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಗುರುವಂದನೆ, ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಣದ ಆಕಾಂಕ್ಷಿಗಳು ಮೌಲ್ಯ ಮತ್ತು ನೈತಿಕತೆಗಳನ್ನು ಮರೆಯದೇ ಸಮಾಜ ನಿರ್ಮಾಣದ ಸ್ತಂಭಗಳಾಗಬೇಕು ಮತ್ತು ಯಾರೊಬ್ಬರೂ ಮೇಲೇರಲು ಬಳಸಿದ ಮೆಟ್ಟಿಲುಗಳನ್ನು ಮರೆಯದೇ ಎಲ್ಲ ಹಂತದಲ್ಲಿಯೂ ತಮ್ಮ ನಡವಳಿಕೆಗಳನ್ನು ರೂಪಿಸಿಕೊಳ್ಳಬೇಕು, ಪಾಲಕರಾದವರು ತಮ್ಮ ಮಕ್ಕಳಿಗೆ ಯಾವುದೇ ತರಹದ ಒತ್ತಡ ಹೇರದೇ, ಅವರ ಎಲ್ಲ ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ಪ್ರತಿಯೊಬ್ಬರಿಗೂ ಬದುಕಿನ ಗುರಿ ಮತ್ತು ಸ್ಥಿರತೆಗಳನ್ನು ತಲುಪಲು ಗುರುವಿನ ಅವಶ್ಯಕತೆ ಇರುವುದರಿಂದ ಗುರುಗಳ ಆಶೀರ್ವಾದ ಪಡೆಯುವ ಇಂತಹ ಕಾರ್ಯಕ್ರಮಗಳು ಉಪಯುಕ್ತ. ನಾಮಧಾರಿ ಸಮುದಾಯ ಸಮಾಜದಲ್ಲಿ ಎಲ್ಲರೊಡನೆ ಒಂದಾಗಿ ಬೆರೆಯುವ ಮನೋಭಾವ ಹೊಂದಿದೆ. ಈ ಸಮಾಜದ ಜನ ಅನ್ಯ ಸಮಾಜದ ಜನರೊಂದಿಗೆ ಪ್ರೀತಿ, ವಿಶ್ವಾಸಗಳನ್ನು ಮತ್ತು ಮಾನವೀಯ ಗುಣಗಳನ್ನು ತೋರುವ ಪರಿ ಅನನ್ಯ ಎಂದರು.

ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷರು ಮಾಜಿ ಶಾಸಕ ಎ.ಎಸ್.ಪಾಟೀಲ್‌ ಮಾತನಾಡಿದರು. ಶ್ರೀಗಳನ್ನು ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಶೋಭಾಯಾತ್ರೆಯಲ್ಲಿ ಬೈಕ್ ಡ್ಯಾಲಿಯಲ್ಲಿ ಮಂಚಿಕೇರಿಗೆಯಿಂದ ಬಾಲಕನ ಯಕ್ಷ ನೃತ್ಯ, ಮಹಿಳೆಯರ ಪೂರ್ಣ ಕುಂಭ, ಸವಣೆಯ ಕಲಾವಿದರ ಡೊಳ್ಳುಕುಣಿತದೊಂದಿಗೆ ಶ್ರೀ ಗಳನ್ನು ಕರೆ ತರಲಾಯಿತು.

ಭಟ್ಕಳದ ಉದ್ಯಮಿ ಈಶ್ವರ ನಾಯ್ಕ, ಪ್ರೊ| ನಾಗೇಶ ನಾಯ್ಕ ಕಾಗಾಲ್, ಸಂತೋಷ ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಎ.ಜಿ. ನಾಯ್ಕ ಭರಣಿ ಮತ್ತಿತರರು ಸಾಂದರ್ಭಿಕ ಮಾತನಾಡಿದರು.
ಗುರುವಂದನಾ ಸಮಿತಿಯ ಅಧ್ಯಕ್ಷ ನರಸಿಂಹ ನಾಯ್ಕ ಅಧ್ಯಕ್ಷತೆ ವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಶಿರಸಿಯ ಡಿ.ವೈ.ಎಸ್.ಪಿ ರವಿ ನಾಯ್ಕ, ಇಡಗುಂಜಿಯ ಆರ್.ಎಫ್.ಒ. ಶಿಲ್ಪಾ ನಾಯ್ಕ, ನ್ಯಾಯವಾದಿ ರವೀಂದ್ರ ನಾಯ್ಕ, ಯಲ್ಲಾಮರದ ಶ್ರೀ ಗುರು ಸಹಕಾರಿ ಸಂಘದ ಅಧ್ಯಕ್ಷ ರವಿ ನಾಯ್ಕ, , ಟ್ರಸ್ಟ್ ಅಧ್ಯಕ್ಷ ಮೋಹಿನಿ ಪೂಜಾರಿ, ಹಿರಿಯರಾದ ಪಿ.ಎನ್. ನಾಯ್ಕ ಮಂಚಿಕೇರಿ, ನಾಮಧಾರಿ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಶೀನಾ ಪೂಜಾರಿ ಹೊಟಗೇರಿ, ಹಾಸಣಗಿ ಗ್ರಾ.ಪಂ ಅಧ್ಯಕ್ಷ ಪುರಂದರ ನಾಯ್ಕ, ಕಂಪ್ಲಿ ಗ್ರಾ.ಪಂ ಅಧ್ಯಕ್ಷ ವಿನಾಯಕ ನಾಯ್ಕ, ಉಮಚಗಿ ಗ್ರಾಪಂ ಅಧ್ಯಕ್ಷೆ ರೂಪಾ ಪೂಜಾರಿ, ಮೆಸ್ಕಾಂ ಅಧಿಕಾರಿ, ರಮಾಕಾಂತ ಉಪಸ್ಥಿತರಿದ್ದರು.
ಗಿರಿಧರ ನಾಯ್ಕ ಸ್ವಾಗತಿಸಿ, ಸಂಘದ ಸಂಸ್ಥಾಪಕ ಅಧ್ಯಕ್ಷ ಆರ್.ಎ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು, ವೆಂಕಟೇಶ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here