ಆಪರೇಷನ್ ಸಿಂಧೂರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್ ಬೆಳಾಲಿನ ರೇಷ್ಮಾ ವಿರುದ್ಧ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲು

0

ಬೆಳ್ತಂಗಡಿ: ಉಗ್ರರ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂದೂರ್ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್ ಹಾಕಿದ ಆರೋಪದಲ್ಲಿ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಬೆಳಾಲಿನ ರೇಷ್ಮಾ ಎಂಬಾಕೆಯ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ರೇಷ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಆಪರೇಷನ್ ಸಿಂದೂರ್ ಕುರಿತ ಪೋಸ್ಟ್ ವೈರಲ್ ಆಗಿತ್ತು. ಪೋಸ್ಟ್‌ನಲ್ಲಿ ಬಳಸಿದ ಭಾಷೆ ಮತ್ತು ಹ್ಯಾಶ್‌ಟ್ಯಾಗ್‌ಗಳು ವಿವಾದಕ್ಕೆ ಕಾರಣವಾಗಿತ್ತು. ಅಪರೇಷನ್ ಸಿಂಧೂರ್‌ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪೋಸ್ಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ರೇಷ್ಮಾ ತಮ್ಮ ಪೋಸ್ಟ್ ಡಿಲೀಟ್ ಮಾಡಿದ್ದರು. ಅಲ್ಲದೇ ಭಾರತ ದೇಶದ ಮೇಲೆ ಅಪಾರ ಗೌರವ ನನಗಿದೆ, ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ-ಶಾಂತಿ-ನೆಮ್ಮದಿ ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ, ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆಯಿದೆ ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ, ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ. ಯಾವುದೇ ಯುದ್ಧವಾದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸಬೇಕಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ ಸೌಹಾರ್ಯ ನೆಲೆಸಲಿ, ಭಯೋತ್ಪಾದನೆ ನಿರ್ಮೂಲನೆಯಾಗಲಿ, ಸಾವು-ನೋವು ಇಲ್ಲವಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ ಎಂದು ಪೋಸ್ಟ್ ಹಾಕಿದ್ದರು. ರೇಷ್ಮಾ ಹಾಕಿರುವ ಮೊದಲ ಕಮೆಂಟ್ ಖಂಡಿಸಿದ್ದ ಎಬಿವಿಪಿ ವಿದ್ಯಾರ್ಥಿಗಳು ರೇಷ್ಮಾಳನ್ನು ಅಮಾನುತು ಗೊಳಿಸುವಂತೆ ಮಂಗಳೂರು ವಿವಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಇಂತಹ ದೇಶದ್ರೋಹದ ಮನಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ಹೊಸಕಿ ಹಾಕುವಂತೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದರು.

ಬಳಿಕದ ಬೆಳವಣಿಗೆಯಲ್ಲಿ ಉತ್ತರಕನ್ನಡದ ಶಿರಸಿಯ ಮಂಜುಗುನಿಯ ಕಲ್ಲಹಳ್ಳಿಯ ಸಾವಲೆ ನಿವಾಸಿ ಚಂದ್ರಶೇಖರ ಪುಟ್ಟ ಎಂಬವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ರೇಷ್ಮಾ ವಿರುದ್ಧ ಅಪರಾಧ ಕ್ರಮಾಂಕ ೦೦೫೯/೨೦೨೫ರಂತೆ ಭಾರತೀಯ ನ್ಯಾಯಸಂಹಿತೆ ೨೦೨೩ರ ಸೆಕ್ಷನ್ ೧೯೨, ೧೯೬, ೩೫೩(೧)(ಬಿ), ೩೫೩(೨)ರನ್ವಯ ಕೇಸು ದಾಖಲಿಸಿದ್ದಾರೆ. ದಿನಾಂಕ ೦೭-೦೫-೨೦೨೫ರಂದು ದೂರುದಾರ ಚಂದ್ರಶೇಖರ ಪುಟ್ಟ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಗ್ರಾಂ ನೋಡುತ್ತಿದ್ದ ಸಮಯದಲ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೇಷ್ಮಾ ಎಂಬವರು ಭಾರತ ಸೇನೆಯ ಆಪರೇಷನ್ ಸಿಂಧೂರ್ ಎಂಬ ಕಾರ್ಯಾಚರಣೆಯ ಬಗ್ಗೆ ತನ್ನ ರೇಷ್ಮಾ_ಬಾರಿಗ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು… ಎಲ್ಲೆಲ್ಲೂ ಕತ್ತಲು…! ಧಿಕ್ಕಾರ ಆಪರೇಷನ್ ಸಿಂಧೂರ ಎಂದು ಪೋಸ್ಟ್ ಮಾಡಿ ನಮ್ಮದೇ ದೇಶ ಹಾಗೂ ದೇಶದ ಸೇನೆಯನ್ನು ವಿರೋಧಿಸಿ ಹಾಗೂ ಭಯೋತ್ಪಾದನೆಯನ್ನು ಸಮರ್ಥಿಸುವಂತಹ ದೇಶವಿರೋಧಿ ವಿಚಾರವನ್ನು ತೋರಿಸಿದ್ದಾರೆ.

ನಮ್ಮ ಭಾವನೆಯಲ್ಲದೆ ದೇಶದ ಎಲ್ಲಾ ಪ್ರಜೆಗಳಿಗೆ ಧಕ್ಕೆಯಾಗುವಂತಹ ಕೃತವನ್ನು ಈಕೆ ಮಾಡಿರುತ್ತಾರೆ. ಈಕೆಯ ಈ ಸ್ಟೋರಿಯಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುವ ಸಾಧ್ಯತೆ ಕೂಡಾ ಇರುತ್ತದೆ ಹಾಗೂ ದೇಶದ ಒಳಗಿರುವ ದುಷ್ಟಶಕ್ತಿಗಳಿಗೆ ಪ್ರೇರಣೆ ಕೊಡುವಂತದು ಆಗಿರುತ್ತದೆ. ಈ ಪೋಸ್ಟ್ ಶೈಲಿ ಮತ್ತು ಭಾಷೆ ಬೇರೆಯವರ ಭಾವನೆಗಳನ್ನು ದ್ವೇಷದತ್ತ ಎಳೆದೊಯ್ಯುವ ತೀವ್ರ ಶಕ್ತಿ ಹೊಂದಿದ್ದು ಇದು ಸಮುದಾಯಗಳ ನಡುವೆ ಶತ್ರುತ್ವವನ್ನು ಹುಟ್ಟುಹಾಕುವಂತಾಗಿದೆ. ಈಕೆಯು ಹಾಕಿರುವ ಇನ್‌ಸ್ಟಾಗ್ರಾಂ ಸ್ಟೋರಿಯ ದಿಕ್ಕಾರ ಎಂಬ ಶಬ್ದ ತೀರಾ ಅವಮಾನಕಾರಿ ಆಗಿದ್ದು ಆಪರೇಷನ್ ಸಿಂಧೂರ ಎಂಬ ಸೇನೆಯ ಕಾರ್ಯಾಚರಣೆಯು ಹಿಂಸಾತ್ಮಕ ಅಥವಾ ಸಂಘಟಿತ ದಾಳಿ ಎಂಬ ಅರ್ಥವನ್ನು ನೀಡುತ್ತದೆ. ಈ ಪೋಸ್ಟ್ ಅವಮಾನಕಾರಿ ಮತ್ತು ವ್ಯಕ್ತಿಗತ ಮಾನಹಾನಿಗೆ ಕಾರಣವಾಗಿದೆ. ಸಾಮಾಜಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಭಾವನಾತ್ಮಕವಾಗಿ ನೋವುಂಟು ಮಾಡುವ ವಿಷಯವನ್ನು ಒಳಗೊಂಡಿದೆ. ಸಾಮಾಜಿಕ ಮೀಡಿಯಾದಲ್ಲಿ ದ್ವೇಷಭರಿತ ಅಭಿಯಾನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಇದು ಜನರಲ್ಲಿ ಅಶಾಂತಿಯನ್ನುಂಟು ಮಾಡುವ ಉದ್ದೇಶ ಹೊಂದಿದ್ದು ಸಾರ್ವಜನಿಕರ ಭಾವನೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರ ಮೂಲಕ ಸಾರ್ವಜನಿಕರ ಶಾಂತಿ ಹಾಗೂ ನೈತಿಕತೆಯ ಮೇಲೆ ಧಕ್ಕೆಯುಂಟಾಗಿ ಉದ್ರೇಕಕ್ಕೆ ಒಳಪಡಿಸಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆಯನ್ನು ನೀಡಿರುವ ಪೋಸ್ಟ್ ಆಗಿರುತ್ತದೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಠಾಣಾಧಿಕಾರಿ ಪುನೀತ್ ಗಾಂವ್ಕಾರ್ ಅವರು ಪ್ರಕರಣ ದಾಖಲಿಸಿ ಮಂಗಳೂರು ನಗರ ಏಳನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here