ಬೆಳ್ತಂಗಡಿ: ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ ಎ.೨೬ರಂದು ಕುತ್ತಿಗೆ ಹಾಗೂ ಎದೆಗೆ ಚೂರಿಯಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಡೆನ್ನಿಸ್ ಪಿಂಟೋ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಳದಂಗಡಿಯ ಶೀನ ಎಂಬಾತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದ ವೇಣೂರು ಠಾಣಾ ಪೊಲೀಸರು ಇದೀಗ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ: ಅಳದಂಗಡಿಯಲ್ಲಿರುವ ಸಂತೆ ಮಾರುಕಟ್ಟೆಯಲ್ಲಿ ಎ.೨೬ರಂದು ಡೆನ್ನಿಸ್ ಪಿಂಟೋ ಎಂಬವರನ್ನು ಹತ್ಯೆ ಮಾಡುವ ಉzಶದಿಂದ ಸ್ಥಳೀಯ ನಿವಾಸಿ ಶೀನ ಎಂಬಾತ ಚೂರಿಯಿಂದ ಇರಿದು ಕುತ್ತಿಗೆ ಹಾಗೂ ಎದೆಗೆ ಗಾಯಗೊಳಿಸಿದ್ದ. ತೀವ್ರ ಗಾಯಗೊಂಡಿದ್ದ ಡೆನ್ನಿಸ್ ಪಿಂಟೋ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಠಾಣಾ ಪೊಲೀಸರು ಶೀನನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೇನಿಸ್ ಪಿಂಟೋ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ.೯ರಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ಪರಿವರ್ತಿಸಿ ಕೊಲೆ ಕೇಸು ದಾಖಲು ಮಾಡಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದಾರೆ. ಡೆನ್ನಿಸ್ ಪಿಂಟೋ ಅವರ ಕೊಲೆಗೆ ಯತ್ನಿಸಿದ್ದ ಆರೋಪದಡಿ ಜೈಲು ಸೇರಿದ್ದ ಶೀನ ಇದೀಗ ಡೆನ್ನಿಸ್ ಪಿಂಟೋ ಅವರನ್ನು ಕೊಲೆ ಮಾಡಿದ ಆರೋಪದಡಿ ಜೈಲಿನಲ್ಲಿದ್ದಾನೆ.