ಮೂಡುಬಿದಿರೆ: ತಾಲ್ಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ- ಪಾರಮ್ಯ ಮೆರೆದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ

0

ಬೆಳ್ತಂಗಡಿ: ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಸಹಯೋಗದಲ್ಲಿ ಮೂಡುಬಿದಿರೆ ತಾಲ್ಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗಳು 2025-26 ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್. ಅವರು ‘ಮಕ್ಕಳು ತಾಂತ್ರಿಕ, ವೈದ್ಯಕೀಯ ಕ್ಷೇತ್ರಗಳ ಜೊತೆಗೆ ನಿಮ್ಮ ಆಸಕ್ತಿಯನ್ನು ಮೂಲ ವಿಜ್ಞಾನದ ಸಂಶೋಧನೆಗಳಿಗೆ ತೋರಿಸಬೇಕು’ ಎಂದು ಕರೆಯನ್ನಿತ್ತು ಶುಭ ಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ‘ಮಕ್ಕಳೇ ಕೇವಲ ನೀವು ಬದಲಾಗುವುದಲ್ಲ, ಅದರ ಜೊತೆಗೆ ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಅದು ನಿಮ್ಮ ಭವಿಷ್ಯವನ್ನು ಬದಲಿಸಬಲ್ಲದು. ವಿಜ್ಞಾನವೆಂಬ ಸುಜ್ಞಾನದ ಬೆಳಕಿನಲ್ಲಿ ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡುವಂತವರಾಗಿ ಬೆಳೆಯಿರಿ’ ಎಂದು ಶುಭ ಹಾರೈಸಿದರು.

ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್‌ ಅವರು ಮಾತನಾಡಿ ‘ವಿಜ್ಞಾನವೆಂಬ ವಿಶೇಷವಾದ ಜ್ಞಾನವನ್ನು ವೃದ್ಧಿಸಿಕೊಂಡು, ಹೊಸ ಹೊಸ ಆವಿಷ್ಕಾರಗಳೊಂದಿಗೆ ಸದೃಢ ದೇಶ ಕಟ್ಟುವ ಸತ್ಪ್ರಜೆಗಳಾಗಿ’ ಎಂಬ ಶುಭಾಷಯಗಳನ್ನಿತ್ತರು.

ವಿಜ್ಞಾನ ಮಾದರಿ ತಯಾರಿ ಹಾಗೂ ಪ್ರದರ್ಶನದ ಈ ಸ್ಪರ್ಧೆಯಲ್ಲಿ ಗುಂಪು ವಿಭಾಗದಲ್ಲಿ ಎಕ್ಸಲೆಂಟ್ ವಿದ್ಯಾರ್ಥಿಗಳಾದ ನಿಹಾರ್ ಹಾಗೂ ಶಾಶ್ವತ್ (ಪ್ರಥಮ), ಗಗನದೀಪ ಹಾಗೂ ಚಿನ್ಮಯಿ (ದ್ವಿತೀಯ) ಮತ್ತು ಅಭಿನೀತ್ ಹಾಗೂ ಪ್ರಣವ್ (ತೃತೀಯ) ಬಹುಮಾನ ಪಡೆದರೆ, ವೈಯುಕ್ತಿಕ ವಿಭಾಗದಲ್ಲಿ ಸಂತ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ ವಿದ್ಯಾರ್ಥಿ ಯಶಸ್ (ಪ್ರಥಮ) ಮತ್ತು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೈತ್ರಿ (ದ್ವಿತೀಯ) ಹಾಗೂ ತರುಣ್ (ತೃತೀಯ) ಬಹುಮಾನವನ್ನು ಗಳಿಸುವ ಮೂಲಕ ಈ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಶಾಲೆ ಪಾರಮ್ಯ ಮೆರೆಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನ ಶಿಕ್ಷಕ ಪಶುಪತಿ ಶಾಸ್ತ್ರಿ, ಮೂಡಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕರಾಗಿರುವ ಚೈತ್ರಾ ಹಾಗೂ ಆಶ್ವಿತಾ ತೀರ್ಪುಗಾರರಾಗಿ ಸಹಕರಿಸಿದರು. ಉಪ ಮುಖ್ಯಶಿಕ್ಷಕಿ ಜಯಶೀಲ, ವಿಜ್ಞಾನ ವಿಭಾಗದ ಮುಖ್ಯಸ್ಥ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕರಾದ ಪ್ರಜ್ವಲ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ ಅವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ, ನಂತರ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here