ಬೆಳ್ತಂಗಡಿ: ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ಇದರ ಒಕ್ಕೂಟ ಸಾಮಾನ್ಯ ಸಭೆ ವಿಮುಕ್ತಿ ಸಭಾ ಭವನದಲ್ಲಿ ಅ.19ರಂದು ನಡೆಯಿತು. ಒಕ್ಕೂಟದ ಕಾರ್ಯದರ್ಶಿ ರೈನಾರವರು ವಾರ್ಷಿಕ ಮತ್ತು ಹಿಂದಿನ ಸಭೆಯ ವರದಿ ಮಂಡಿಸಿದರು.
ಒಕ್ಕೂಟದ ಅಧ್ಯಕ್ಷೆ ಶಾಲಿಯವರು ಘಟಕಗಳ ವರದಿಗಳನ್ನು ಪರಿಶೀಲಿಸಿ ಮಂಜೂರು ಮಾಡಿದರು. ಒಕ್ಕೂಟದಿಂದ ನಡೆಸಿದ ಎಲ್ಲಾ ಕಾರ್ಯಕ್ರಮಗಳ ಮೌಲ್ಯಮಾಪನ ನಡೆಸಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಾರ್ಷಿಕ ಲೆಕ್ಕಾಚಾರ ಹಾಗೂ ಮುಂದಿನ ಆರ್ಥಿಕ ವರ್ಷದ ಅಂದಾಜು ಬಜೆಟ್ ಮಂಡಿಸಲಾಯಿತು.
ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಉಡುಗೆ-ತೊಡುಗೆ, ಆಹಾರದ ಜೊತೆಗೆ ಶಿಕ್ಷಣ ನೀಡುವುದು ಪೋಷಕರಾದವರ ಆದ್ಯ ಕರ್ತವ್ಯ. ಹಾಗಾಗಿ ಶಿಕ್ಷಣಕ್ಕಾಗಿ ಇರುವ ವಿದ್ಯಾಸ್ನೇಹಿ ಯೋಜನೆಯನ್ನು ಅಭಿವೃದ್ಧಿಗೊಳಿಸುವುದು ಅತೀ ಮುಖ್ಯ. ಹಾಗೆಯೇ ಸಂಘದ ನಡವಳಿಕೆ ಅನ್ನುವುದು ಪ್ರತಿ ಸಂಘದ ಆಸ್ತಿ, ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸಲಹೆಯನ್ನಿತ್ತರು.
ಸಂಸ್ಥೆಯ ಸಹನಿರ್ದೇಶಕ ಫಾ. ರೋಹನ್ ಲೋಬೊರವರು ವಿದ್ಯಾಸ್ನೇಹಿ ಯೋಜನೆಯ ಬಲವರ್ಧನೆಗೆ ಮಾಡಬಹುದಾದ ಅನೇಕ ದಾರಿಗಳ ಬಗ್ಗೆ ಚರ್ಚಿಸಿದರು. ಒಕ್ಕೂಟದ ಅಧ್ಯಕ್ಷರು ಮಾತನಾಡುತ್ತಾ ಬದಲಾವಣೆಗಳು ಅತಿ ಮುಖ್ಯ. ಬದಲಾವಣೆಗಳೊಂದಿಗೆ ನಾವೂ ಬದಲಾಗಬೇಕು ಎಂದು ಹೇಳಿದರು.
ಒಕ್ಕೂಟದ ಪದಾಧಿಕಾರಿಗಳು, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕರ್ತೆ ರೋಹಿಣಿಯವರು ಪ್ರಾರ್ಥಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿಯಾದ ಪ್ರಮೀಳಾರವರು ಸ್ವಾಗತಿಸಿ, ಖಜಾಂಜಿ ಅನ್ನಮ್ಮ ಧನ್ಯವಾದವಿತ್ತರು.