ಬೆಳ್ತಂಗಡಿ: ಇಂದು 2 ವಿದ್ಯಾರ್ಥಿ ನಿಲಯ ಲೋಕಾರ್ಪಣೆ

0

ಬೆಳ್ತಂಗಡಿ: ತಾಲೂಕಿನಲ್ಲಿ ಅ.11ರಂದು ಎರಡು ವಿದ್ಯಾರ್ಥಿ ನಿಲಯಗಳ ಲೋಕಾರ್ಪಣೆ ಹಾಗೂ ಎರಡು ವಿದ್ಯಾರ್ಥಿ ನಿಲಯಗಳ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ನೆರವೇರಿಸಲಿದ್ದಾರೆ.

ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ಮಾಣಗೊಂಡಿರುವ ಪುಂಜಾಲಕಟ್ಟೆ ಹಾಗೂ ಮಡಂತ್ಯಾರ್‌ನ ವಿದ್ಯಾರ್ಥಿ ವಸತಿ ನಿಲಯಗಳು ಲೋಕಾರ್ಪಣೆಗೊಳ್ಳಲಿವೆ. ಇದುವರೆಗೆ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುಂಜಾಲ ಕಟ್ಟೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ 3.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, 60 ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿದೆ. ಶಾಸಕ ಹರೀಶ್ ಪೂಂಜ ಮಲೆನಾಡು ಅಭಿವೃದ್ಧಿ ನಿಗಮದಿಂದ ಇಲ್ಲಿಗೆ ಹೆಚ್ಚುವರಿಯಾಗಿ 25 ಲಕ್ಷ ರೂ.ಅನುದಾನ ಒದಗಿಸಿಕೊಟ್ಟಿದ್ದಾರೆ.

120 ವಿದ್ಯಾರ್ಥಿಗಳಿಗೆ ಅವಕಾಶ ಹೊಂದಿರುವ ಮಡಂತ್ಯಾರಿನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸಬರಬೈಲಿನಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದುವರೆಗೆ ಈ ವಿದ್ಯಾರ್ಥಿ ನಿಲಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಂದಿನಿಂದ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಳ್ಳಲಿದೆ. ಎರಡು ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಕೋಣೆ, ಸ್ಟೋರ್ ರೂಂ, ಡೈನಿಂಗ್ ಹಾಲ್, ಗ್ರಂಥಾಲಯ ಕಂಪ್ಯೂಟರ್ ರೂಂ, ಕಾಂಪೌಂಡ್, ಶೌಚಾಲಯ ಸಹಿತ ಸಕಲ ವ್ಯವಸ್ಥೆಗಳನ್ನು ಒಳಗೊಂಡಿದೆ. ಇಂದು ಶಿಲಾನ್ಯಾಸ: ತಲಾ 5. ಕೋಟಿ ರೂ. ವೆಚ್ಚದ ಇನ್ನೆರಡು ವಿದ್ಯಾರ್ಥಿ ವಸತಿ ನಿಲಯಗಳಿಗೆ
ಅ.11ರಂದು ಶಿಲಾನ್ಯಾಸ ನಡೆಯಲಿದೆ. ಬೆಳ್ತಂಗಡಿ ಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಉಜಿರೆಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಶಿಲಾ ನ್ಯಾಸ ಕಾಠ್ಯಕ್ರಮವನ್ನು ಸಚಿವರು ನಡೆಸಲಿದ್ದಾರೆ.

ಶಾಸಕರ ಪ್ರಯತ್ನ: ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಹಾಗೂ ಶಿಲಾನ್ಯಾಸ ನಡೆಯಲಿರುವ ವಸತಿ ನಿಲಯಗಳಿಗೆ ಶಾಸಕ ಹರೀಶ್ ಪೂಂಜ ಪ್ರಯತ್ನ ಸಾಕಷ್ಟು ಇದೆ. ತಾಲೂಕಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಈ ವಿದ್ಯಾರ್ಥಿ ನಿಲಯಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿ ಕೊಡಲಿವೆ. ಸಾಕಷ್ಟು ಶಿಕ್ಷಣ ಸಂಸ್ಥೆಗಳು ತಾಲೂಕಿನಲ್ಲಿದ್ದು, ಕೆಲವೆಡೆ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಇವರೆಲ್ಲರಿಗೂ ಈ ವಿದ್ಯಾರ್ಥಿ ನಿಲಯಗಳು ಪೂರಕ ವ್ಯವಸ್ಥೆ ಕಲ್ಪಿಸಲಿವೆ.

LEAVE A REPLY

Please enter your comment!
Please enter your name here