ಉಜಿರೆ: ಅನುಗ್ರಹ ಶಾಲೆಯಲ್ಲಿ ಸ್ವಭಾವವನ್ನು ಬೆಳೆಸಿ, ಭವಿಷ್ಯವನ್ನು ರೂಪಿಸೋಣ ಎಂಬ ವಿಷಯಾಧಾರಿತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಫಾ. ವಿಜಯ್ ಲೊಬೊ ಅವರು ಅಧ್ಯಕ್ಷತೆ ವಹಿಸಿದ್ದರು. ವಾಣಿ ಪಿಯು ಕಾಲೇಜಿನ ಉಪನ್ಯಾಸಕ ಸುಧೀರ್ ಕೆ.ಎನ್. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಜರಿದ್ದರು.
ಪ್ರಾಂಶುಪಾಲ ಫಾ. ವಿಜಯ್ ಲೊಬೊ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಸ್ತು ಮತ್ತು ಮೌಲ್ಯಗಳ ಮಹತ್ವವನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿ ಸುಧೀರ್ ಕೆ.ಎನ್. ಅವರು ಸ್ವಭಾವ ನಿರ್ಮಾಣ ಮತ್ತು ಅದರ ಮೂಲಕ ಭವಿಷ್ಯ ರೂಪಿಸುವ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸುವಂತಹ ಸಕ್ರಿಯ ಚಟುವಟಿಕೆಗಳನ್ನೂ ನಡೆಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಜವಾಬ್ದಾರಿತನ ಬೆಳೆಸುವ ಸಂದೇಶ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮತ್ತು ಉತ್ತಮ ಭವಿಷ್ಯ ನಿರ್ಮಾಣದ ಬಲವಾದ ಪ್ರೇರಣೆಯಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿಯರಾದ ಅಶ್ವಿನಿ ಹಾಗೂ ರಕ್ಷಾ ಅವರು ನಿರ್ವಹಿಸಿದರು.