ಬೆಳ್ತಂಗಡಿ: ತಂದೆ-ತಾಯಿ ನಮ್ಮ ಬದುಕಿನ ನಿಜವಾದ ಆದರ್ಶ. ತಮ್ಮ ಸಂತೋಷವನ್ನೆಲ್ಲ ತ್ಯಾಗ ಮಾಡಿ ಮಕ್ಕಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಾರೆ. ಅವರ ಕಷ್ಟ ಅರಿತು, ಶಿಕ್ಷಕರ ಮಾರ್ಗದರ್ಶನವನ್ನು ಅನುಸರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಕರೆ ನೀಡಿದರು.
ಅವರು ಸೆ.5ರಂದು ಶಿವರಾಮ ಕಾರಂತ ವೇದಿಕೆಯಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾಸಂಘ, ಸಾಹಿತ್ಯ ಸಂಘ ಮತ್ತು ಮತದಾರರ ಸಾಕ್ಷರತಾ ಸಂಘಗಳ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜೀವನದಲ್ಲಿ ಸಂತೋಷವು ಸಣ್ಣ ವಿಷಯಗಳಲ್ಲಿ ಅಡಗಿದೆ. ಆದರೆ ಆ ಸಂತೋಷವನ್ನು ಶ್ರಮ, ಶಿಸ್ತು ಮತ್ತು ಸಂಸ್ಕಾರಗಳಿAದ ಕಂಡುಕೊಳ್ಳಿ. ಅಂಕಗಳು ನಿಮ್ಮ ಬುದ್ಧಿಮಟ್ಟ ತಿಳಿಸಿದರೆ, ಮೌಲ್ಯಗಳು ಮಾತ್ರ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂದರು. ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಸಂಪೂರ್ಣ ವ್ಯಕ್ತಿತ್ವ ಪಡೆಯಲು ಸಾಧ್ಯ. ಅದು ನಿಜವಾದ ಶಿಕ್ಷಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ಅವಕಾಶಗಳು ಎಲ್ಲರಿಗೂ ದೊರೆಯುತ್ತವೆ. ಆದರೆ ಅವುಗಳನ್ನು ಆಸಕ್ತಿಗೆ ತಕ್ಕಂತೆ ಬಳಸಿಕೊಂಡು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದಾಗ ಮಾತ್ರ ನಿಜವಾದ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಇಂತಹ ವಿಫುಲ ಅವಕಾಶಗಳನ್ನು ಕಲ್ಪಿಸಿರುವುದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರ ದೂರದೃಷ್ಟಿಯ ಫಲ. ಅವರ ದೃಷ್ಟಿಕೋನ ನಿಜಕ್ಕೂ ಸ್ತುತ್ಯರ್ಹ.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ಸಂಯೋಜಕರಾದ ದಾಮೋದರ್, ಸುನಿಲ್ ಹಾಗೂ ಶ್ವೇತಶ್ರೀ ಇದ್ದರು. ವಿದ್ಯಾರ್ಥಿ ಹೇಮಂತ್ ನಿರೂಪಿಸಿ, ಜ್ಯೋತಿ ಸ್ವಾಗತಿಸಿ, ಅನನ್ಯ ವಂದಿಸಿದರು.