
ನಾರಾವಿ: ಜು.22ರಂದು ನಾರಾವಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆಯನ್ನು ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸ್ವಾಮಿ ಜೆರೋಮ್ ಡಿಸೋಜಾ “ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ಪೋಷಕರ ಜವಾಬ್ದಾರಿಯು ಪ್ರಮುಖವಾದದ್ದು. ಪೋಷಕರ ಉಪಸ್ಥಿತಿ ಇದ್ದಲ್ಲಿ ಮಾತ್ರ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ” ಎಂದರು.
ಪ್ರಾಂಶುಪಾಲ ಡಾ. ಆಲ್ವಿನ್ ಸೆರಾವೋ ” ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಯಶಸ್ವಿಗೆ ಕಾರಣಕರ್ತರು. ಶಾಲೆಯಲ್ಲಿ ಶಿಕ್ಷಕರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಮನೆಯಲ್ಲಿ ಪೋಷಕರಿಗೂ ಇರಬೇಕು” ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಉಪನ್ಯಾಸಕ ದಿನೇಶ್ ಬಿ.ಕೆ. “ವಿದ್ಯಾರ್ಥಿಗಳಲ್ಲಿ ಶ್ರಮದ ಮಹತ್ವವನ್ನು ಎಳವೆಯಲ್ಲಿಯೇ ತಿಳಿಸಿಕೊಡಬೇಕು. ಹಿರಿಯರಿಗೆ, ತಂದೆ-ತಾಯಿಯರಿಗೆ ಗೌರವ ಕೊಡುವ ಶಿಕ್ಷಣವನ್ನು ಪೋಷಕರು ಮನೆಯಿಂದಲೇ ನೀಡಬೇಕು” ಎಂದರು. ವೇದಿಕೆಯಲ್ಲಿ ನಾರಾವಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಎವ್ಜಿನ್ ರೊಡ್ರಿಗಸ್, ಉಪಪ್ರಾಂಶಪಾಲ ಸಂತೋಷ್ ಸಲ್ಡಾನ ಉಪಸ್ಥಿತರಿದ್ದರು. ಉಪನ್ಯಾಸಕಿ ರಾಜೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು. ಸೋನಿಯಾ ಡಿ’ಸೋಜಾ ಧನ್ಯವಾದವಿತ್ತರು.