
ನೆರಿಯ: ಅಡಿಕೆ ಕಳ್ಳತನವಾದ ಕುರಿತು ಮನೆಯ ಮಾಲಕ ದೈವದ ಮೊರೆ ಹೋದ ಬಳಿಕ ಕಳ್ಳತನ ಮಾಡಿದ ಯುವಕರು ದೈವಸ್ಥಾನದ ಎದುರು ತಪ್ಪು ಒಪ್ಪಿಕೊಂಡು ಹಣ ವಾಪಸ್ ನೀಡಿದ ಘಟನೆ ನೆರಿಯದಲ್ಲಿ ನಡೆದಿದೆ.
ಬಯಲು ಅರ್ಬಿಬೊಟ್ಟು ಮನೆಯಿಂದ ಎರಡು ದಿನದ ಹಿಂದೆ ಆಡಿಕೆ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮನೆ ಮಾಲಕರು ದೈವದ ಮೊರೆ ಹೋಗಿ ಕಳ್ಳರ ಬಗೆಗಿನ ಸುಳಿವಿಗೆ ಬೇಡಿಕೊಂಡಿದ್ದರು. ಅದೇ ದಿನ ಸಂಜೆಯ ವೇಳೆ ಸತೀಶ್ ಮಡಿವಾಳ ಮತ್ತು ಅಜಿತ್ ಎಂಬವರು ಅಲ್ಲಿನ ದೈವಸ್ಥಾನಕ್ಕೆ ಬಂದು ಕಳವು ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ.
ಈ ಯುವಕರು ನೆರೆಹೊರೆಯವರೇ ಆದುದರಿಂದ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡುವ ಉದ್ದೇಶದಿಂದ ಪೊಲೀಸ್ ದೂರು ನೀಡದೆ ಪ್ರಕರಣ ಸುಖಾಂತ್ಯಗೊಳಿಸಲಾಗಿದೆ. ಕದ್ದ ಅಡಿಕೆ ಮಾರಿ ಬಂದ ಹಣವನ್ನು ಜು. 23ರಂದು ದೈವಸ್ಥಾನದ ಎದುರು ಮನೆ ಮಾಲಕ ಶಿವಣ್ಣ ಗೌಡರಿಗೆ ನೀಡಿ ಮಾಡಿದ ತಪ್ಪಿಗೆ ಯುವಕರು ಕ್ಷಮೆ ಕೋರಿದ್ದಾರೆ.