ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಸೌತಡ್ಕದಲ್ಲಿ ಜು.17ರಂದು ಬೆಳಿಗ್ಗೆ 2 ಕಾಡಾನೆಗಳು ದಿಢೀರ್ ಪ್ರತ್ಯಕ್ಷವಾಗಿ ಸ್ಥಳೀಯ ನಿವಾಸಿ ಬಾಲಕೃಷ್ಣ ಶೆಟ್ಟಿಯವರನ್ನು ಸೊಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿ ಅವರು ಮೃತಪಟ್ಟ ಘಟನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತೀವ್ರ ದುಃಖ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಕಾಡಾನೆಗಳು ದಾಳಿ ನಡೆಸಿ ಹಾನಿ ಮಾಡುತ್ತಿರುವ ಬಗ್ಗೆ ತಾನು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರೂ ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಸಂತ್ರಸ್ತ ಕೃಷಿಕರ ನೋವನ್ನು ಅಂದು ಸದನದಲ್ಲಿ ತಾನು ವ್ಯಕ್ತಪಡಿಸಿರುವುದನ್ನು ಬೆಳ್ತಂಗಡಿ ಕಾಂಗ್ರೆಸ್ ಗರು ಅಪಹಾಸ್ಯ ಮಾಡಿದ್ದರು. ಆದರೆ ಇದರ ಗಂಭೀರತೆಗೆ ಓರ್ವ ನಾಗರೀಕನನ್ನು ಕಳೆದುಕೊಂಡದ್ದು, ತನಗೆ ಅತೀವ ನೋವನ್ನುಂಟುಮಾಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಆನೆ ದಾಳಿ ಮಾಡುವ ಕೃಷಿ ಪ್ರದೇಶ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸೂಕ್ತ ತಡೆಬೇಲಿ ನಿರ್ಮಾಣ ಮಾಡಲು ಕ್ರಮ ಕೈಗೊಂಡು ಮೃತ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಬಿಡುಗಡೆ ಮಾಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.