ಧರ್ಮಸ್ಥಳ: ಧೀಮತಿ ಜೈನ ಮಹಿಳಾ ಸಮಾಜ, ಬಾಹುಬಲಿ ಮಹಿಳಾ ಸಮಾಜ ಧರ್ಮಸ್ಥಳ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ಜಿನ ಮಂದಿರಕೆ ಹೋಗೋಣ ಬನ್ನಿ, ಜೈನ ಧರ್ಮದ ಸಾರವ ತಿಳಿಯೋಣ ಬನ್ನಿ ಎಂಬ ವಿನೂತನ ಧಾರ್ಮಿಕ ಸಂವಾದ ಕಾರ್ಯಕ್ರಮ ನಡೆಯಿತು.
ಜೈನ ಧರ್ಮದ ಮೂಲ ತತ್ವಗಳ ಕುರಿತಾದ ಧಾರ್ಮಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಧರ್ಮಸ್ಥಳದ ಜನಚೈತ್ಯಾಲಯದ ಪುರೋಹಿತ ಶಿಶಿರ್ ಕುಮಾರ್ ಇಂದ್ರ ಹಾಗೂ ಎಸ್. ಡಿ. ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ, ಧಾರ್ಮಿಕ ಚಿಂತಕ ಡಾ.ಮಹಾವೀರ ಜೈನ್ ಇಚ್ಚಿಲಂಪಾಡಿ ಜೈನ ಧರ್ಮದ ಅಷ್ಟ ಮೂಲ ಗುಣಗಳು ಹಾಗೂ ಶ್ರಾವಕರ ಷಟ್ಕರ್ಮಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನದೇಸಿಕೊಟ್ಟರು.
ಜೈನ ಧರ್ಮದ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವ ಧರ್ಮದ ಆಚರಣೆಯ ಸಾರವನ್ನು ಪರಿಚಯಿಸುತ್ತಾ ವೈಜ್ಞಾನಿಕ ಹಿನ್ನೆಲೆಯಿಂದ ಜೈನ ಧರ್ಮೀಯರು ಆಚರಿಸಿಕೊಂಡು ಬರುತ್ತಿರುವ ಆಚರಣೆಗಳು ಇಂದಿಗೂ ಹೆಚ್ಚು ಪ್ರಸ್ತುತ ಎಂದರು. ಕಿರಿಯರಲ್ಲಿ ಧರ್ಮದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಜೈನ ಧರ್ಮದ ಸರಳ ಪರಿಚಯವನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯ ಹರ್ಷೇಂದ್ರ ಕುಮಾರ್ ವಹಿಸಿ ಜೈನ ಧರ್ಮದ ಸರಳವಾದ ಪರಿಚಯ ಹಾಗೂ ಆಚರಣೆಯ ಪ್ರಾಮುಖ್ಯತೆಯನ್ನು ಇಂದಿನ ಎಳೆಯರು ಹಾಗೂ ಯುವ ಜನತೆಯಲ್ಲಿ ಮೂಡಿಸುವುದರ ಮೂಲಕ ಅಹಿಂಸಾತ್ಮಕ ದೃಷ್ಟಿಕೋನದ ಪ್ರಾಮುಖ್ಯತೆ ಹಾಗೂ ಧರ್ಮದ ಆಚರಣೆಯ ಪ್ರಸ್ತುತೆ ಯನ್ನು ಉಲ್ಲೇಖಿಸಿದರು.
ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದ ಡಾ.ಮಹಾವೀರ ಜೈನ್ ಅವರನ್ನು ಧೀಮತಿ ಮಹಿಳಾ ಸಮಾಜದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಧೀಮತಿ ಮಹಿಳಾ ಸಮಾಜದ ಅಧ್ಯಕ್ಷರ ಡಾ. ರಜತ ಪಿ. ಶೆಟ್ಟಿ ಸ್ವಾಗತಿಸಿದರು. ಸೌಮ್ಯ ಸುಭಾಷ್ ಪ್ರಾರ್ಥಿಸಿ ದಿವ್ಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಬಾಹುಬಲಿ ಮಹಿಳಾ ಸಮಾಜದ ಸದಸ್ಯೆ ಸಾವಿತ್ರಿ ವಂದಿಸಿದರು.