ಬೆಳ್ತಂಗಡಿ: ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ 1.70ಲಕ್ಷ ಮೌಲ್ಯದ ಭಾರೀ ಪ್ರಮಾಣದ ಮರಳನ್ನು ವೇಣೂರು ಪೊಲೀಸರು ಪತ್ತೆಹಚ್ಚಿದ್ದು ಪ್ರಕರಣ ದಾಖಲಿಸಿದ್ದಾರೆ.
ಕಾಂತರಬೆಟ್ಟು ನಿವಾಸಿ ಸುಕೀತ್ ಎಂಬಾತನೇ ಅಕ್ರಮ ಮರಳು ಗಣಿಗಾರಿಕೆ ನಡೆಸಿ ಮರಳನ್ನು ಶೇಖರಿಸಿಟ್ಟ ಆರೋಪಿಯಾಗಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ವೇಣೂರು ಪೊಲೀಸರು ಇಲ್ಲಿಗೆ ದಾಳಿ ನಡೆಸಿದ್ದು ತೋಟದ ನಡುವೆ ಯಾವುದೇ ಪರವಾನಿಗೆಯಿಲ್ಲದೆ ಶೇಖರಿಸಿಟ್ಟಿದ್ದ 150 ರಿಂದ 170 ಟನ್ ಮರಳನ್ನು ಪತ್ತೆಹಚ್ಚಿದ್ದಾರೆ. ಮಳೆಗಾಲಕ್ಕಿಂತ ಮೊದಲು ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಶೇಖರಿಸಲಾಗಿತ್ತು. ಇದರ ಅಂದಾಜು ಮೌಲ್ಯ ಸುಮಾರು 1,70,000 ಎಂದು ಅಂದಾಜಿಸಲಾಗಿದೆ. ಅಕ್ರಮ ಮರಳನ್ನು ವಶಪಡಿಸಿಕೊಳ್ಳಾಗಿದ್ದು ಆರೋಪಿ ಸುಕೀತ್ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.